ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗದ ಮುರುಘಾಮಠದಲ್ಲಿ ಭಾನುವಾರ ನಡೆದ 37ನೇ ವರ್ಷದ 7ನೇ ತಿಂಗಳ ಉಚಿತ ಸಾಮೂಹಿಕ ವಿವಾಹ ಮಹೋತ್ಸವದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹಾಗೊಂದು ವೇಳೆ ಅನುಮಾನಗಳಿದ್ದರೆ ವಿವೇಚನೆಯಿಂದ ನಿರ್ಧಾರ ಕೈಗೊಳ್ಳಬೇಕು. ಬದುಕಿದ್ದಾಗ ನಾವು ಹೊಂದಿರುವ ಒಳ್ಳೆಯ ಗುಣಗಳೇ ನಮಗೆ ನಿಜವಾದ ಆಸ್ತಿಯಾಗಿರುತ್ತವೆ ಎಂದರು.
ಬಸವಾದಿ ಶರಣರ ಆಶಯದಂತೆ ನವದಂಪತಿಗಳು ಯಾವುದೇ ಜಾತಿ ಬೇಧವಿಲ್ಲದೆ ಒಂದೇ ವೇದಿಕೆಯಲ್ಲಿ ವಿವಾಹವಾಗುತ್ತಿರುವುದು ಅತ್ಯಂತ ಸಾತ್ತ್ವಿಕ ಮತ್ತು ಶ್ಲಾಘನೀಯ ಕಾರ್ಯ. 1990ರಲ್ಲಿ ಮಠದ ಪೂಜ್ಯ ಜಗದ್ಗುರುಗಳಾದ ಮಲ್ಲಿಕಾರ್ಜುನ ಶ್ರೀಗಳು ಈ ಉಚಿತ ವಿವಾಹ ಕಾರ್ಯಕ್ರಮದ ಪರಂಪರೆಯನ್ನು ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಪ್ರತಿ ತಿಂಗಳು ಸುಮಾರು 20 ರಿಂದ 30 ಉಚಿತ ವಿವಾಹಗಳು ಮಠದಲ್ಲಿ ನಿರಂತರವಾಗಿ ನೆರವೇರುತ್ತಾ ಬಂದಿವೆ. ಅಖಿಲ ಭಾರತ ಮಟ್ಟದಲ್ಲಿ ಶ್ರೀ ಮಠವು ತುಂಬ ಹಿಂದಿನಿಂದಲೂ ಇಂತಹ ಸತ್ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ ಎಂದು ಶ್ರೀಗಳು ಸ್ಮರಿಸಿದರು.ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಒಟ್ಟು 9 ಜೋಡಿಗಳು ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು. ನವದಂಪತಿಗಳಿಗೆ ಶುಭ ಹಾರೈಸಿದ ಶ್ರೀಗಳು, ಆರೋಗ್ಯ ಮತ್ತು ಸೌಹಾರ್ದಯುತ ಬದುಕು ನಿಮ್ಮದಾಗಲಿ. ಬಸವಾದಿ ಶರಣರ ತತ್ವಗಳು ಹಾಗೂ ಮಠದ ಸತ್ಕಾರ್ಯಗಳನ್ನು ಮುಂದಿನ ಪೀಳಿಗೆಗೂ ಮುಂದುವರಿಸಿಕೊಂಡು ಹೋಗಬೇಕು. ಈ ವಿವಾಹ ಮಹೋತ್ಸವದಲ್ಲಿ ದಾಂಪತ್ಯಕ್ಕೆ ಅಡಿ ಇಟ್ಟ ಜೋಡಿಗಳು ಮಠದ ನಿಯಮಾವಳಿಗಳನ್ನು ಶಿಸ್ತುಬದ್ಧವಾಗಿ ಪಾಲಿಸುವ ಮೂಲಕ ಆದರ್ಶ ದಂಪತಿಗಳಾಗಿ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಕೇವಲ ಮನೆಯ ಯಜಮಾನ ಅಥವಾ ಮಾಲೀಕರು ಮಾತ್ರವಲ್ಲದೆ, ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯರೂ ಜವಾಬ್ದಾರಿಯನ್ನು ಅರಿತು ಮುನ್ನಡೆದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ .ಯುವ ಸಮುದಾಯವು ಕಾಲಕಾಲಕ್ಕೆ ತಕ್ಕಂತೆ ಶಿಸ್ತು ಮತ್ತು ಕಠಿಣ ನಿಯಮಗಳನ್ನು ಅಳವಡಿಸಿಕೊಳ್ಳಬೇಕು. ಮಿತಿಮೀರಿದ ವೆಚ್ಚ ಹಾಗೂ ದುಂದುವೆಚ್ಚಗಳಿಗೆ ಕಡಿವಾಣ ಹಾಕಿ, ಜೀವನದಲ್ಲಿ ನಿಯಂತ್ರಣ ಸಾಧಿಸುವುದು ಯಶಸ್ಸಿನ ಪ್ರಮುಖ ಸೂತ್ರವಾಗಿದೆ ಎಂದರು.
ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಎಸ್.ಎಸ್.ಚಂದ್ರಶೇಖರ್ ಅವರು ಮಾತನಾಡಿ, ಕಳೆದ 37 ವರ್ಷಗಳಿಂದ ಅಮಾವಾಸ್ಯೆ, ಹುಣ್ಣಿಮೆ, ಆಶಾಡ ಎನ್ನದೆ ನಿರಂತರವಾಗಿ ಪ್ರತಿ ತಿಂಗಳು ಐದನೇ ತಾರೀಖಿನಂದು ಸಾಮೂಹಿಕ ಕಲ್ಯಾಣ ಮಹೋತ್ಸವ ನೆರವೇರಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗ ಪ್ರೇಮಲತಾ ಬಿ, ಶ್ರೀ ಬಸವ ಮುರುಗೇಂದ್ರ ಸ್ವಾಮಿಗಳು ಉಪಸ್ಥಿತರಿದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಗಿರೀಶ್ ಆಚಾರ್ಯ ಸ್ವಾಗತಿಸಿದರು. ಲಂಕೇಶ್ ದೇವರು ನಿರೂಪಿಸಿದರು.