ಮುಂಡರಗಿ: ಪುರಸಭೆ ಎಸ್.ಎಫ್.ಸಿ. ಅನುದಾನ ಹಾಗೂ 15ನೇ ಹಣಕಾಸು ಯೋಜನೆ ಅನುದಾನಗಳ ಕುರಿತು ತುರ್ತಾಗಿ ಸರ್ಕಾರಕ್ಕೆ ಮಾಹಿತಿ ಕಳಿಸಬೇಕಾಗಿರುವುದರಿಂದ ಇಂದಿನ ಸಾಮಾನ್ಯ ಸಭೆಯನ್ನು ನಡೆಸಲಾಗುತ್ತಿದೆ. ಇದಕ್ಕೆ ಅನ್ಯತಾ ಭಾವಿಸುವ ಅವಶ್ಯವಿಲ್ಲ ಎಂದು ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಸ್ಪಷ್ಟಪಡಿಸಿದರು.
ಅವರು ಗುರುವಾರ ಮುಂಡರಗಿ ಪುರಸಭೆಯಲ್ಲಿ ಜರುಗಿದ ಪುರಸಭೆ ಸಾಮಾನ್ಯ ಸಭೆಯಲ್ಲಿ ಪೌರ ಕಾರ್ಮಿಕರೆಲ್ಲರೂ ಪ್ರತಿಭಟನೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸಾಮಾನ್ಯ ಸಭೆ ನಡೆಸುವುದು ಎಷ್ಟು ಸೂಕ್ತ ಎಂದು ಕೆಲವು ಸದಸ್ಯರು ಪ್ರಶ್ನೆ ಮಾಡಿದ ಸಂದರ್ಭದಲ್ಲಿ ಅದಕ್ಕೆ ಸ್ಪಷ್ಟೀಕರಣ ನೀಡಿ ಮಾತನಾಡಿದರು.ಅಲ್ಲದೇ ಪೌರ ಕಾರ್ಮಿಕರ ಎಲ್ಲ ಬೇಡಿಕೆಗಳು ಸೂಕ್ತವಾಗಿದ್ದು, ಸರ್ಕಾರ ಅವುಗಳನ್ನು ತಕ್ಷಣವೇ ಜಾರಿಗೊಳಿಸುವಂತೆ ಇಂದಿನ ಸಭೆಯಲ್ಲಿ ಪುರಸಭೆಯ ಎಲ್ಲ 23 ಜನ ಜನಪ್ರತಿನಿಧಿಗಳೂ ಸಹ ಠರಾವು ಪಾಸುಮಾಡಿ ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ ಎಂದರು.
ಸಭೆಯಲ್ಲಿ 2024ನೇ ಡಿಸೆಂಬರ್ ಹಾಗೂ 2025ನೇ ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳುಗಳ ಜಮಾ ಮತ್ತು ಖರ್ಚುಗಳು ಅನುಮೋದನೆ ನೀಡುವ ಕುರಿತು ಚರ್ಚಿಸುತ್ತಿರುವ ಸಂದರ್ಭದಲ್ಲಿ ಸದಸ್ಯ ಪ್ರಹ್ಲಾದ ಹೊಸಮನಿ ನಮಗೆ ಇದರ ಸಂಪೂರ್ಣ ಜಮಾ ಖರ್ಚುಗಳ ಲೆಕ್ಕಬೇಕು. ಆಗದೆ ಇದ್ದಲ್ಲಿ ಈ ವಿಷಯವನ್ನು ಮುಂದಿನ ಸಭೆಗೆ ಇಟ್ಟುಕೊಳ್ಳಿ ಎಂದರು.ಇದಕ್ಕೆ ಸದಸ್ಯ ಲಿಂಗರಾಜಗೌಡ ಪಾಟೀಲ ಮಾತನಾಡಿ, ಈಗಾಗಲೇ ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಕುರಿತು ಒಂದು ವಾರದ ಮೊದಲೇ ಎಲ್ಲ ಸದಸ್ಯರು ಅಜೆಂಡಾ ಹಾಗೂ ಜಮಾ ಖರ್ಚುಗಳ ಮಾಹಿತಿ ನೀಡಲಾಗಿದ್ದು, ತಾವು ಅದನ್ನು ನೋಡಿಕೊಂಡು ಬರಬೇಕಿತ್ತು. ಒಂದು ವೇಳೆ ನೋಡದೇ ಇದ್ದಲ್ಲಿ ಅರ್ಧ ಗಂಟೆ ಸಮಯ ತೆಗೆದುಕೊಂಡು ನೋಡಿಕೊಳ್ಳಿ. ಆದರೆ ಈ ವಿಷಯವನ್ನು ಮುಂದಿನ ಸಭೆಗೆ ಇಟ್ಟುಕೊಳ್ಳಲು ಆಗುವುದಿಲ್ಲ ಎಂದರು.
ಮಾಜಿ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಮಾತನಾಡಿ, ಪೌರ ಕಾರ್ಮಿಕರ ಮುಷ್ಕರ ಜರುಗುತ್ತಿರುವ ಈ ಸಂದರ್ಭದಲ್ಲಿ ಸಭೆ ನಡೆಸುವುದು ಸೂಕ್ತವಲ್ಲ. ಅಲ್ಲದೇ ಸಭೆಯ ಅಜೆಂಡಾ ತಯಾರಿಸುವಾಗ ಉಳಿದ ಸದಸ್ಯರ ಗಮನಕ್ಕೆ ತರದೇ ತಾವೇ ತಯಾರಿಸುವುದು ಸರಿಯಲ್ಲ. ಉಳಿದ ಸದಸ್ಯರಿಗೆ ಗೌರವವಿಲ್ಲವೇ ? ಎಂದು ಪ್ರಶ್ನಿಸಿದರು. ಇದಕ್ಕೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಇದು ಮೊದಲೇ ಸಭೆಗೆ ನಿಗದಿಪಡಿಸಿದ ದಿನಾಂಕವಾಗಿದ್ದು, ಕೆಲವು ತುರ್ತು ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗಿರುವುದರ ಕುರಿತು ಚರ್ಚಿಸಲಾಗುತ್ತಿದೆ ಎಂದರು. ಹಾಗಾದರೇ ನಾನು ಈ ಸಭೆಯಲ್ಲಿ ಇರುವುದಿಲ್ಲ ಎಂದು ಕವಿತಾ ಉಳ್ಳಾಗಡ್ಡಿ ಸಭೆಯಿಂದ ಹೊರ ಬಂದರು.ಸದಸ್ಯ ಜ್ಯೋತಿ ಹಾನಗಲ್ ಮಾತನಾಡಿ, ಯಾವ ವಾರ್ಡಿಗೆ ಎಷ್ಟು ಅನುದಾನ ಹಾಕಿದ್ದೀರಿ ಎಂದು ಅನೇಕ ಬಾರಿ ಮಾಹಿತಿ ಕೇಳಿದರೂ ನೀವು ಕೊಡುತ್ತಿಲ್ಲ, ಈಗಲಾದರೂ ಪರಿಶೀಲನೆ ನಡೆಸಿ ಈ ಹಿಂದೆ ಹೆಚ್ಚಿನ ಅನುದಾನ ಹಾಕಿದ ವಾರ್ಡಿಗೆ ಕಡಿಮೆ ಮಾಡಿ ಉಳಿದ ವಾರ್ಡುಗಳಿಗೆ ಹೆಚ್ಚಿಗೆ ಮಾಡಲು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸದಸ್ಯ ತಿಮ್ಮಪ್ಪ ದಂಡಿನ ತಮ್ಮ ವಾರ್ಡಿನಲ್ಲಿ ಇನ್ನೂ ಆಗಬೇಕಾದ ಅಭಿವೃದ್ಧಿ ಕೆಲಸಗಳಿದ್ದು, ರುದ್ರಭೂಮಿಗೆ ಅನುದಾನ ಹಾಕುವ ಕುರಿತು ವಿಷಯ ಕೇಳಿ ಬಂದಿದ್ದು, ರುದ್ರಭೂಮಿಗೆ ಹಾಕುವ ಬದಲು ವಾರ್ಡುಗಳಿಗೆ ಹಾಕುವಂತೆ ಒತ್ತಾಯಿಸಿದರು.
ಗದಗ ರಸ್ತೆಯಲ್ಲಿರುವ ಅನ್ನದಾನೀಶ್ವರ ರುದ್ರಭೂಮಿಯಲ್ಲಿ ಸಾರ್ವಜನಿಕರು ಬಹಿರ್ದೆಸೆಗೆ ಹೋಗುತ್ತಿದ್ದು, ಅದು ತುಂಬಾ ಗಲೀಜಾಗಿ ಶವ ಸಂಸ್ಕಾರಕ್ಕೆ ಬಂದವರು ಹಿಡಿಶಾಪ ಹಾಕುತ್ತಿದ್ದಾರೆ. ಆದ್ದರಿಂದ ಅದರ ಅಭಿವೃದ್ಧಿಗಾಗಿ ಎಲ್ಲ ಅನುದಾನವನ್ನು ಸದಸ್ಯರ ಒಪ್ಪಿಗೆ ಮೇರೆಗೆ ಬಳಕೆ ಮಾಡಿಕೊಳ್ಳಲು ಚರ್ಚಿಸಲಾಗುತ್ತಿದೆ ಎಂದು ವಿವರಿಸಿದರು. ಅದಕ್ಕೆ ತಿಮ್ಮಪ್ಪ ದಂಡಿನ ವಿರೋಧ ವ್ಯಕ್ತಪಡಿಸಿದಾಗ ಸದಸ್ಯ ನಾಗರಾಜ ಹೊಂಬಳಗಟ್ಟಿ ಈ ಹಿಂದೆ ನಿಮ್ಮ ವಾರ್ಡಿಗೆ ಕೋಟ್ಯಾಂತರ ಹಣ ಹಾಕಲಾಗಿದೆ. ಪಟ್ಟಣದ ಹೆಚ್ಚಿನ ಸಮುದಾಯಗಳಿಗೆ ಉಪಯೋಗವಾಗುವ ರುದ್ರಭೂಮಿಗೆ ಹಣಹಾಕಿ ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದೆ ಎಂದರು. ಅದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಅನುಮೋದನೆಗೊಳಿಸುವಂತೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹ್ಮದರಫೀಕ್ ಮುಲ್ಲಾ ಹಾಗೂ ಸದಸ್ಯ ರಿಹಾನಾಬೇಗಂ ಕೆಲೂರ ಮಾತನಾಡಿ, ಎಲ್ಲ ಜನಾಂಗದವರ ರುದ್ರಭೂಮಿಗೆ ಅನುದಾನ ಹಾಕುವುದರ ಜತೆಗೆ ಮುಸ್ಲಿಂ ಸಮುದಾಯ ಹಾಗೂ ಇತರೆ ಕೆಲವು ಸಮುದಾಯಗಳ ರುದ್ರಭೂಮಿ ಬೇರೆ ಇದ್ದು, ಅವುಗಳ ಅಭಿವೃದ್ಧಿಗೂ ಹಣ ಮೀಸಲಿಡಬೇಕು ಎಂದಾಗ ಸಭೆಯ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ ಅವುಗಳಿಗೂ ಹಣ ಮೀಸಲಿಟ್ಟಿರುವುದಾಗಿ ಹೇಳಿದರು.
ಪಟ್ಟಣದಲ್ಲಿ ಎಲ್ಲ ವ್ಯಾಪಾರ ವಹಿವಾಟುಗಳ ಟ್ರೇಡ್ ಲೈಸೆನ್ಸ್ ರಿನೇವಲ್ ಮಾಡುವುದು ಹಾಗೂ ಬಾಕಿ ಉಳಿದಿರುವ ಬಾಕಿ ಹಣ ವಸೂಲಿ ಮಾಡುವಂತೆ ಮಾಜಿ ಉಪಾಧ್ಯಕ್ಷ ಶಿವಪ್ಪ ಚಿಕ್ಕಣ್ಣವರ ಒತ್ತಾಯಿಸಿದರು. ಈ ಕುರಿತು ಪರಿಶೀಲಿಸುವುದಾಗಿ ಅಧ್ಯಕ್ಷ ನಿರ್ಮಲಾ ಕೊರ್ಲಹಳ್ಳಿ ಹೇಳಿದರು.ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಶಂಕರ್ ಹುಲ್ಲಮ್ಮನವರ ಮಾತನಾಡಿದರು. ಪ್ರಕಾಶ ಹಲವಾಗಲಿ, ಶಾಂತವ್ವ ಕರಡಿಕೊಳ್ಳ, ಪವನ್ ಮೇಟಿ, ವೀಣಾದೇವಿ ಸೋನಿ, ಸಂತೋಷ ಹಿರೇಮನಿ, ರೆಹೆಮಾನಸಾಬ್ ಮಲ್ಲನಕೇರಿ, ಶಿವು ಬಾರಕೇರ, ದೇವಕ್ಕ ದಂಡಿನ, ರಾಜಾಭಕ್ಷಿ ಬೆಟಗೇರಿ ಸೇರಿದಂತೆ ಅನೇಕರು ಸಭೆಯಲ್ಲಿ ಉಪಸ್ಥಿತರಿದ್ದರು.