ಮನರೇಗಾದಲ್ಲಿ 150 ದಿನಗಳ ಉದ್ಯೋಗ ಇತ್ತು: ರಾಘವೇಂದ್ರ ಗೌಡ

KannadaprabhaNewsNetwork |  
Published : Feb 05, 2026, 01:30 AM IST
4ಕೆಡಿವಿಜಿ1-ದಾವಣಗೆರೆಯಲ್ಲಿ ಬುಧವಾರ ಕಾಂಗ್ರೆಸ್ ಯುವ ಮುಖಂಡ ಜಿ.ಆರ್.ರಾಘವೇಂದ್ರ ಗೌಡ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಮನರೇಗಾ ಹೆಸರನ್ನೇ ಕೈಬಿಟ್ಟು, ನರೇಗಾ ಯೋಜನೆ ಮೂಲ ಸ್ವರೂಪವನ್ನೇ ಅಳಿಸಿ ಹಾಕಿದ ಕೇಂದ್ರದ ಬಿಜೆಪಿ ಸರ್ಕಾರ ವಿಬಿ ಜಿ ರಾಮ್ ಜಿ ಯೋಜನೆ ಜಾರಿಗೆ ತಂದಿದೆ. ಇದು ಗ್ರಾಮ ಪಂಚಾಯಿತಿಗಳ ಅಧಿಕಾರವನ್ನೇ ಸಂಪೂರ್ಣ ಕಿತ್ತುಕೊಳ್ಳುವ ಹುನ್ನಾರ ಎಂದು ಕಾಂಗ್ರೆಸ್ ಯುವ ಮುಖಂಡ, ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆ ಜಿಲ್ಲಾಧ್ಯಕ್ಷ ಜಿ.ಆರ್.ರಾಘವೇಂದ್ರ ಗೌಡ ಆರೋಪಿಸಿದ್ದಾರೆ.

- ಶೇ.90 ಅನುದಾನವೀಗ ಶೇ.60ಕ್ಕೆ ಇಳಿಸಿದ್ದಿಂದ ರಾಜ್ಯಗಳಿಗೆ ಆರ್ಥಿಕ ಹೊರೆ । ಜಿ ರಾಮ್‌ ಜಿ ಯೋಜನೆಗೆ ವಿರೋಧ

- - -

- ಮನರೇಗಾ ಯೋಜನೆಯಡಿ ಅರ್ಜಿ ಹಾಕಿದ 15 ದಿನದೊಳಗೆ ಕೆಲಸ ಕೊಡುವ ವ್ಯವಸ್ಥೆ ಇತ್ತು

- ಈಗ ಯಾವ ವಾರ್ಡ್‌ನಲ್ಲಿ ಉದ್ಯೋಗ ಅನುಷ್ಠಾನ ಆಗಬೇಕೆಂಬುದನ್ನು ಕೇಂದ್ರವೇ ನಿರ್ಧರಿಸುವಂತಾಗಿದೆ

- ಜಿ ರಾಮ್‌ ಜಿ ಯೋಜನೆ ಜಾರಿಗೊಳಿಸಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಗ್ರಾಪಂಗಳ ಸ್ವಾಯತ್ತತೆ ಕಸಿದಿದೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮನರೇಗಾ ಹೆಸರನ್ನೇ ಕೈಬಿಟ್ಟು, ನರೇಗಾ ಯೋಜನೆ ಮೂಲ ಸ್ವರೂಪವನ್ನೇ ಅಳಿಸಿ ಹಾಕಿದ ಕೇಂದ್ರದ ಬಿಜೆಪಿ ಸರ್ಕಾರ ವಿಬಿ ಜಿ ರಾಮ್ ಜಿ ಯೋಜನೆ ಜಾರಿಗೆ ತಂದಿದೆ. ಇದು ಗ್ರಾಮ ಪಂಚಾಯಿತಿಗಳ ಅಧಿಕಾರವನ್ನೇ ಸಂಪೂರ್ಣ ಕಿತ್ತುಕೊಳ್ಳುವ ಹುನ್ನಾರ ಎಂದು ಕಾಂಗ್ರೆಸ್ ಯುವ ಮುಖಂಡ, ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆ ಜಿಲ್ಲಾಧ್ಯಕ್ಷ ಜಿ.ಆರ್.ರಾಘವೇಂದ್ರ ಗೌಡ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನರೇಗಾ ಯೋಜನೆಯಲ್ಲಿ ಗ್ರಾಪಂ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಯಾವುದೇ ಕೆಲಸ ಆಗಬೇಕಿದ್ದರೆ ಪಂಚಾಯಿತಿ ಸಭೆ ಮಾಡಿ, ಜನರೇ ನಿರ್ಧಾರ ಕೈಗೊಳ್ಳುವ ವ್ಯವಸ್ಥೆ ಇತ್ತು. ಈಗ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಯಾವ ವಾರ್ಡ್‌ನಲ್ಲಿ ಉದ್ಯೋಗ ಅನುಷ್ಠಾನ ಆಗಬೇಕೆಂಬುದನ್ನು ಕೇಂದ್ರವೇ ನಿರ್ಧರಿಸುವಂತೆ ಬದಲಿಸಿದ್ದಾರೆ ಎಂದರು.

ಗ್ರಾಪಂ ಕಲ್ಪನೆ, ಪಂಚಾಯಿತಿಗಳ ಅಧಿಕಾರವನ್ನೇ ಕೇಂದ್ರ ಸರ್ಕಾರ ಕಿತ್ತುಕೊಳ್ಳಲು ಮುಂದಾಗಿದೆ. ಮನರೇಗಾ ಯೋಜನೆಯಡಿ ಅರ್ಜಿ ಹಾಕಿದ 15 ದಿನದೊಳಗೆ ಕೆಲಸ ಕೊಡಬೇಕಿತ್ತು. ಹಾಗಾಗಿ, ದೇಶದ ಎಲ್ಲ ಗ್ರಾಪಂಗಳಲ್ಲೂ ಅಭಿವೃದ್ಧಿ ಕೆಲಸವಾಗುತ್ತಿತ್ತು. ವಿಜಿ ಬಿ ರಾಮ್ ಜಿ ಯೋಜನೆಯಲ್ಲಿ 125 ದಿನ ಕೆಲಸ ಕೊಡುವುದಾಗಿ ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಮನರೇಗಾದಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಬರಗಾಲದಂತಹ ಪ್ರದೇಶಗಳಲ್ಲಿ 150 ದಿನ ಉದ್ಯೋಗ ನೀಡುವ ಅಧಿಕಾರ ಇತ್ತು ಎಂದು ಹೇಳಿದರು.

ದೇಶದಲ್ಲಿ ಯಾವುದೇ ಕಾಯ್ದೆಗಳು ಒಂದೇ ದಿನದಂದು ಜಾರಿಗೊಳ್ಳುತ್ತದೆ. ಆದರೆ, ವಿಬಿ ಜಿ ರಾಮ್ ಯೋಜನೆಯನ್ನು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ದಿನಾಂಕಗಳನ್ನು ಜಾರಿಗೊಳಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಇದರಲ್ಲೂ ಸ್ಪಷ್ಟತೆಯೇ ಇಲ್ಲ. ಮನರೇಗಾದಲ್ಲಿ ಶೇ.90 ಅನುದಾನವನ್ನು ಕೇಂದ್ರವೇ ನೀಡುತ್ತಿತ್ತು. ಆದರೆ, ಅದನ್ನು ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಶೇ.60ಕ್ಕೆ ಇಳಿಸಿದೆ. ಇದು ರಾಜ್ಯ ಸರ್ಕಾರಗಳಿಗಂತೂ ದೊಡ್ಡ ಆರ್ಥಿಕ ಹೊರೆ ಎಂದು ದೂರಿದರು.

ಹೆಚ್ಚುವರಿ ಕೆಲಸ ಆಗಬೇಕಾಗಿದ್ದರೆ ಅದನ್ನು ನೀಡುವ ಅಧಿಕಾರವು ಗ್ರಾಪಂ ಹೊಂದಿತ್ತು. ಆದರೆ, ಹೊಸ ಯೋಜನೆಯಲ್ಲಿ ಗ್ರಾಪಂಗೆ ಇದ್ದ ಅಂತಹ ಅಧಿಕಾರವನ್ನೇ ಕಿತ್ತುಕೊಳ್ಳಲಾಗಿದೆ. ಒಂದು ವೇಳೆ ಹೆಚ್ಚುವರಿ ಉದ್ಯೋಗ ಮಾಡಿದರೆ ಅದರ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ. ಒಂದು ಕುಟುಂಬಕ್ಕೆ 100 ದಿನ ಉದ್ಯೋಗ, ಬಡತನ ರೇಖೆಗಿಂತ ಕೆಳಗಿರುವವರಿಗೆ ಉದ್ಯೋಗ ನೀಡಬೇಕೆಂಬ ಸದುದ್ದೇಶ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತಂದಿದ್ದ ನರೇಗಾ ಯೋಜನೆಯಲ್ಲಿತ್ತು. ಇವೆಲ್ಲ ಕೈಬಿಟ್ಟ ಬಿಜೆಪಿ ಸರ್ಕಾರದ ನಡೆ ಖಂಡಿಸುತ್ತೇವೆ ಎಂದು ರಾಘವೇಂದ್ರ ಗೌಡ ತಿಳಿಸಿದರು.

ಹೊಸ ಯೋಜನೆಯಲ್ಲಿ ಹೆಚ್ಚುವರಿ ಕ್ರಿಯಾ ಯೋಜನೆ ಮಾಡುವುದಕ್ಕೆ ಬೇಡಿಕೆ ಇದ್ದರೂ ಗ್ರಾ.ಪಂ.ಗಳಿಗೆ ಕೆಲಸ ಕೊಡುವುದಕ್ಕೆ ಆಗುವುದಿಲ್ಲ. ಕೇಂದ್ರ ಸರ್ಕಾರ ಏನು ನಿಗದಿಪಡಿಸುತ್ತದೋ ಅಷ್ಟೇ ಕೊಡಬೇಕಾಗುತ್ತದೆ. ಹೆಚ್ಚಾಗಿ ಏನಾದರೂ ಉದ್ಯೋಗ ಮಾಡಿದರೆ ಅದನ್ನು ಆಯಾ ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಗ್ರಾಪಂಗಳ ಸ್ವಾಯತ್ತತೆ ಕಸಿದುಕೊಂಡಿದೆ. ನೂತನ ವಿಬಿ ಜಿ ರಾಮ್ ಜಿ ಯೋಜನೆ ರದ್ದುಪಡಿಸಲು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷದ ಕಾನೂನು ಘಟಕದ ಯುವ ಜಿಲ್ಲಾಧ್ಯಕ್ಷ ಡಿ.ಸಿ.ರಾಕೇಶ, ಯುವ ಮುಖಂಡರಾದ ಟಿ.ಎಸ್.ಕುಮಾರ ಶಾಮನೂರು, ಕಕ್ಕರಗೊಳ್ಳ ಗ್ರಾಪಂ ಸದಸ್ಯ ನವೀನ ಕೋಡಿಹಳ್ಳಿ, ದತ್ತಾತ್ರೇಯ, ಹುಲಿಕಟ್ಟೆ ರಾಜೇಶ ಇತರರು ಇದ್ದರು.

- - -

-4ಕೆಡಿವಿಜಿ1: ದಾವಣಗೆರೆಯಲ್ಲಿ ಬುಧವಾರ ಕಾಂಗ್ರೆಸ್ ಯುವ ಮುಖಂಡ ಜಿ.ಆರ್.ರಾಘವೇಂದ್ರ ಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾವೂರು ಶ್ರೀ ಗೋಪಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ಸಂಪನ್ನ
ಸಚಿವ ತಿಮ್ಮಾಪುರ ಬೆಂಬಲಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ