ತ್ರಿವಿಧ ದಾಸೋಹದ ಮೂಲಕ ದಾರಿದೀಪವಾಗಿದ್ದ ಅಥಣಿ ಶಿವಯೋಗಿಗಳು

KannadaprabhaNewsNetwork |  
Published : Apr 04, 2026, 01:15 AM IST
ಚಿತ್ರದುರ್ಗ ಮೂರನೇ ಪುಟದ ಬಾಟಂ | Kannada Prabha

ಸಾರಾಂಶ

ಮುರುಘಾಮಠದಲ್ಲಿ ಶುಕ್ರವಾರ ನಡೆದ ಅಥಣಿ ಶಿವಯೋಗಿಗಳ ಸ್ಮರಣೋತ್ಸವದಲ್ಲಿ ಡಾ.ಬಸವಕುಮಾರ ಸ್ವಾಮೀಜಿಗಳು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಧಾರವಾಡದ ಮುರುಘಾಮಠದಲ್ಲಿ ಅನ್ನ, ವಸತಿ ಮತ್ತು ಶಿಕ್ಷಣದ ತ್ರಿವಿಧ ದಾಸೋಹವನ್ನು ಬಡವಿದ್ಯಾರ್ಥಿಗಳಿಗೆ ಕರುಣಿಸಿ ಎಷ್ಟೋ ಜನರ ಪಾಲಿಗೆ ಅಥಣಿ ಶಿವಯೋಗಿಗಳು ದಾರಿದೀಪವಾಗಿದ್ದರೆಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿಗಳು ಹೇಳಿದರು.

ಚಿತ್ರದುರ್ಗ ಮುರುಘಾಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳವರ 105ನೇ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶಿವಯೋಗಿಗಳು ಮಠಾಧಿಪತಿಗಳಾಗಿರಲಿಲ್ಲ, ಮಠವನ್ನು ಕಟ್ಟಿರಲಿಲ್ಲ. ಆದರೆ ದೊಡ್ಡದೊಡ್ಡ ಮಠಗಳ ಜಗದ್ಗುರುಗಳಿಗೆ ಆಶೀರ್ವಾದ ಅಂತಃಕರಣ ತೋರಿದರು. ಮೃತ್ಯುಂಜಯಪ್ಪಗಳು ಕಾಶಿ ವಿಶ್ವನಾಥ ದರ್ಶನಕ್ಕೆ ಹೋಗುವುದಾಗಿ ಅಂಕಲಿಮಠದ ಶ್ರೀಗಳ ಬಳಿ ಹೇಳಿದಾಗ ಮಾತನಾಡದ ವಿಶ್ವನಾಥನ ಬಳಿ ಹೋಗುವುದಕ್ಕಿಂತ ಅಥಣಿಯಲ್ಲಿ ಮಾತನಾಡುವ ವಿಶ್ವನಾಥನಿದ್ದಾನೆ. ಅಲ್ಲಿಗೆ ಹೋಗು ಎಂಬ ಸಲಹೆ ನೀಡುತ್ತಾರೆ.

ಅಥಣಿಯಲ್ಲಿ ಶಿವಯೋಗಿಗಳ ಜತೆ ಶಿವಬಸವ ಸ್ವಾಮಿಗಳಿರುತ್ತಾರೆ. ಅವರಿಗೆ ಕುಷ್ಟರೋಗ ಬಂದಿರುತ್ತದೆ. ಅವರನ್ನು ಶಿವಯೋಗಿಗಳು ಯಾವುದೇ ಅಂಜಿಕೆ ಸಂಕೋಚ ಅಸಹ್ಯಪಟ್ಟುಕೊಳ್ಳದೆ ಅದನ್ನು ತಿಕ್ಕಿ ತೊಳೆದು ಅದಕ್ಕೆ ಬೇಕಾದ ಔಷಧಿ ಹಾಕುತ್ತ ಗುಣಪಡಿಸುತ್ತಾರೆ. ಆ ಗುರುವೆ ಮುಜುಗರಪಟ್ಟುಕೊಳ್ಳುವ ರೀತಿ ಸೇವೆ ಮಾಡುತ್ತಾರೆ. ಶಿವಯೋಗಿಗಳ ಪ್ರಭಾವ ಮೃತ್ಯುಂಜಯಪ್ಪಗಳಿಗೆ ಆಗಿತ್ತು. ಅದನ್ನೇ ಅನುಸರಿಸಿದ ಅಪ್ಪಗಳು ಬೆಳಗಿನ ಜಾವ ಎದ್ದು ಶಿವಯೋಗಿಗಳ ಸೇವೆಗೆ ಸನ್ನದ್ಧರಾಗುತ್ತಿದ್ದರು.

18-19ನೇ ಶತಮಾನದ ಭಾರತದ ಇತಿಹಾಸವನ್ನೊಮ್ಮೆ ಅವಲೋಕಿಸಿದಾಗ ಸಂಸ್ಕೃತಿ, ಧರ್ಮ, ಆಚಾರ ವಿಚಾರಗಳು ಅಳಿಯುವ ಸನ್ನಿವೇಶದಲ್ಲಿ ಜನಸಾಮಾನ್ಯರಲ್ಲಿ ಸಾಮಾಜಿಕ, ಸಾಂಸ್ಕೃತಿಕ ಪುನಶ್ಚೇತನಕ್ಕಾಗಿ ಸಾಕ್ಷಿಯಾದವರು ಅಥಣಿ ಶಿವಯೋಗಿಗಳವರು. ಇವರ ಸಮಕಾಲೀನರಾಗಿ ಅನೇಕ ತಪಸ್ವಿಗಳು ಬಂದುಹೋದರು. ಆಗ ತ್ರಿಕಾಲ ಜ್ಞಾನಿಗಳೇ ಆಗಿಹೋದರು. ಅಂತಹ ತ್ರಿಕಾಲಜ್ಞಾನ ಮೇರುಸದೃಶ ವ್ಯಕ್ತಿತ್ವ ಅಥಣಿ ಶಿವಯೋಗಿಗಳವರಲ್ಲಿತ್ತು ಎಂದರು.

ಬಸವ ಪರಂಪರೆಯಲ್ಲಿ ಮುರುಘಾಮಠ ಸಾಗಿ ಅಚ್ಚಳಿಯದ ಕೆಲಸಗಳನ್ನು ಮಾಡಿದೆ. ಸೆಕ್ಯುಲರಿಸಂ ಅನ್ನೋ ಪದ ಡಿಕ್ಷನರಿಯಲ್ಲಿರಬಹುದು. ಆದರೆ ಅದನ್ನು ಎಲ್ಲೂ ತೋರುಗೊಡದೆ 12 ನೇ ಶತಮಾನದಲ್ಲಿ ಬಸವಾದಿ ಶಿವಶರಣರು ನೂರಾರು ಕುಲಬಾಂಧವರು ಹುಟ್ಟುಹಾಕಿದ ಶರಣಸಂಸ್ಕೃತಿಯನ್ನು ಚಾಚೂತಪ್ಪದೆ ಜಗತ್ತಿಗೆ ಸಾರಿದ್ದು ಮುರುಘಾ ಪರಂಪರೆ. ಇಂತಹ ಪರಂಪರೆಗೆ ಗಟ್ಟಿಯಾದ ಮುದ್ರೆ ಒತ್ತಿದವರು ಅಥಣಿ ಶಿವಯೋಗಿಗಳು ಎಂದು ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.

ಬಸವ ಮುರುಘೇಂದ್ರ ಶ್ರೀಗಳು, ಗೋವಿಂದ ಶ್ರೀಗಳು, ಕಣಕುಪ್ಪಿ ಮುರುಘೇಶ್, ವಿವಿಧ ಸಮಾಜ, ಸಂಘಟನೆಗಳ ಮುಖಂಡರಾದ ಎಸ್. ಷಣ್ಮುಖಪ್ಪ, ಜೆ.ಎಸ್. ಮುರುಘೇಶ್, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಸವಿತಾ ಶ್ರೀನಿವಾಸ್, ಬಸವರಾಜ ಕಟ್ಟಿ, ಟಿ.ಪಿ. ಜ್ಞಾನಮೂರ್ತಿ, ಜಿ.ಟಿ.ನಂದೀಶ್, ನಾಗರಾಜ, ಡಾ.ಬಿ.ಗಾಯತ್ರಿ, ಎಸ್.ಎಂ.ಕೊಟ್ರೇಶಪ್ಪ, ಗೀತಾ ರುದ್ರೇಶ್, ಮಹಾಂತಮ್ಮ, ನಾಯಕನಹಟ್ಟಿ ತಿಪ್ಪೇಸ್ವಾಮಿ, ಇಟಗಿ ವಿಜಯಕುಮಾರ್, ಶ್ರೀಕಂಠೇಶ್ವರ ತಿಪ್ಪೇಸ್ವಾಮಿ, ಕವಿ ಗಂಗಾಧರಪ್ಪ, ಅಣ್ಣಪ್ಪ, ಜಯದೇವಮೂರ್ತಿ, ವೀರಣ್ಣ, ನಾಗರಾಜ, ಶಿವಯೋಗಿ, ನೀಲಮ್ಮ ಮಂಜುನಾಥ್, ಬಸವರಾಜ್, ಚಂದ್ರಣ್ಣ, ಎಸ್.ವಿ. ಶಂಕರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಮರಹಾನ್ಕುಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ
ಹೋಟೆಲ್ ಕಾರ್ಮಿಕನ ಹತ್ಯೆ ಖಂಡಿಸಿ ಪ್ರತಿಭಟನೆ