ದೇಸಿ ಅಕ್ಕಿ ಬಳಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ

KannadaprabhaNewsNetwork |  
Published : Aug 11, 2025, 12:30 AM IST
44 | Kannada Prabha

ಸಾರಾಂಶ

ಸಹಜ ಸಮೃದ್ಧ ಹಾಗೂ ಭತ್ತ ಉಳಿಸಿ‌ ಆಂದೋಲನದ

ಕನ್ನಡಪ್ರಭ ವಾರ್ತೆ ಮೈಸೂರು

ನಮ್ಮ ಹಿರಿಯರು ನೂರಾರು ವರ್ಷಗಳಿಂದ ಬೆಳೆಸುತ್ತಿದ್ದ ದೇಸಿ ಅಕ್ಕಿ ತಳಿಗಳು ಸ್ಥಳೀಯ ಅನ್ನ ಸಂಸ್ಕೃತಿಯನ್ನು ಪೋಷಿಸಿವೆ.

ಪೋಷಕಾಂಶಗಳಿಂದ ಸಮೃದ್ದವಾಗಿದ್ದ ಈ ತಳಿಗಳು ಆರೋಗ್ಯ ಕಾಪಾಡುತ್ತಿದ್ದವು. ಅನ್ನವೇ ಔಷಧವಾಗಿತ್ತು.ಇಂಥ ದೇಸಿ ಅಕ್ಕಿಗಳನ್ನು ಬಳಸುವ ಮೂಲಕ ಗ್ರಾಹಕರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹಾವೇರಿಯ ಅಗಡಿ ಅಕ್ಕಿ ಮಠದ ಗುರುಲಿಂಗಸ್ವಾಮಿಜಿ ಕರೆ ನೀಡಿದರು.

ಸಹಜ ಸಮೃದ್ಧ ಹಾಗೂ ಭತ್ತ ಉಳಿಸಿ‌ ಆಂದೋಲನದ ಆಶ್ರಯದಲ್ಲಿ ಮೈಸೂರಿನ ನಂಜರಾಜ ಬಹದ್ದೂರು ಛತ್ರದಲ್ಲಿ ದೇಸಿ ಅಕ್ಕಿ ಮೇಳದ ಅಂಗವಾಗಿ ನಡೆದ ಅಕ್ಕಿ ಅಡುಗೆ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ನಗರದ ಗ್ರಾಹಕರಿಗೆ ಭತ್ತ ಸಂಸ್ಕ್ರೃತಿ ಮತ್ತು ವೈವಿಧ್ಯದ ಬಗ್ಗೆ ಅರಿವು ಮೂಡಿಸುತ್ತಿರುವ ಸಹಜ ಸಮೃದ್ಧದ ಪ್ರಯತ್ನವನ್ನು ಅವರು ಶ್ಲಾಘಿಸಿದರು.

ಅಡುಗೆ ಸ್ಪರ್ಧೆಯ ತೀರ್ಪುಗಾರರಾಗಿದ್ದ ಲೀಲಾ ಶಿವಕುಮಾರ್ ಮಾತನಾಡಿ, ಅಡುಗೆ ಮನೆ ದೇಸಿ ಅಕ್ಕಿಗಳ ಭಂಡಾರವಾಗಬೇಕು. ವೈವಿಧ್ಯಮಯ ದೇಸಿ ಅಕ್ಕಿಗಳನ್ನು ದಿನ ನಿತ್ಯದ ಆಹಾರದಲ್ಲಿ ಬಳಸುವ ಮೂಲಕ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಭತ್ತದ ಲೋಕ - ನಾ ಕಂಡಂತೆ ಮಕ್ಕಳ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಚಿತ್ರ ಕಲಾವಿದ ಎಸ್. ವಿಷ್ಣು ಕುಮಾರ್, ಭತ್ತದ ಕೃಷಿ ಮತ್ತು‌ ಅನ್ನ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲು ಚಿತ್ರಕಲಾ ಸ್ಪರ್ಧೆ ನೆರವಾಗಿದೆ. ಇಂಥ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಮಕ್ಕಳು ಕೃಷಿ ವೈವಿಧ್ಯದ ಪರಿಚಯ ಮಾಡಿಕೊಳ್ಳಬೇಕು ಎಂದರು.

ದೇಸಿ ಅಕ್ಕಿ ಅಡುಗೆ ಸ್ಪರ್ಧೆಗೆ ಪುಳಿಯೋಗರೆ, ಕೆಂಪಕ್ಕಿ ಕಡುಬು, ಕೆಂಪಕ್ಕಿ ಪಲಾವ್, ಹಾಲು ಕೀರು, ಅಕ್ಕಿ ತರಿ ಬಾಳೆ, ಗುಜರಾತಿನ ಅಂಡುವಾ, ಕ್ಯಾಪ್ಸಿಕಂ ರೈಸ್, ಪಾತೋಳಿ ಮೊದಲಾದ ಅಡುಗೆಗಳು ಪ್ರದರ್ಶನಕ್ಕೆ ಬಂದಿದ್ದವು.

ದೇಸಿ ಅಡುಗೆ ಸ್ಪರ್ಧೆಯಲ್ಲಿ ಕುಸುಮ ಕೃಷ್ಣಮೂರ್ತಿ ಪ್ರಥಮ ಬಹುಮಾನ, ಮಣಿ ವಿರೂಪಾಕ್ಷ ದ್ವಿತೀಯ ಬಹುಮಾನ, ಸುನೀತಾ ಕುಮಾರಿ ತೃತೀಯ ಬಹುಮಾನ ಹಾಗೂ ಕೆ. ಚಂದ್ರಬೇನ್ ಸಮಾಧಾನಕರ ಬಹುಮಾನ ಗಳಿಸಿದರು. ತೀರ್ಪುಗಾರರಾಗಿ ಕೃಷ್ಣಿ ಶಿರೂರ, ಲೀಲಾ ಶಿವಕುಮಾರ್ ಮತ್ತು ಶೈಲಜೇಶ್ ಇದ್ದರು.

10 ವರ್ಷದ ಒಳಗಿನ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಪುನರದತ್ತ ಪ್ರಥಮ. ಖುಷಿತಷ್ವಿ ದ್ವಿತೀಯ ಬಹುಮಾನ ಹಾಗೂ ಖುಷಿ ತೃತೀಯ ಬಹುಮಾನ ಮತ್ತು ರಾಜದೀಪ್ ಸಮಾಧಾನಕರ ಬಹುಮಾನ ಗಳಿಸಿದರು.

11 ರಿಂದ 15 ವರ್ಷದ ಒಳಗಿನ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಆದ್ಯ ಪ್ರಥಮ. ಎನ್‌. ಮಾನ್ವಿ ದ್ವಿತೀಯ ಬಹುಮಾನ ಹಾಗೂ ಹೊಯ್ಸಳ ತೃತೀಯ ಬಹುಮಾನ ಪಡೆದರು.

ಸಿ.ಎಸ್‌. ಕೇಶವಮೂರ್ತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಭತ್ತ ಉಳಿಸಿ ಆಂದೋಲನದ ಶ್ರೀನಿವಾಸ ಮೂರ್ತಿ ಮತ್ತು ಸುರೇಶ್ ಕನ್ನಾ ಇದ್ದರು.

ಹೆಚ್ಚಿನ ಮಾಹಿತಿಗೆ ಕೇಶವ್‌ ಅವರ ಮೊ. 63615 52588 ಸಂಪರ್ಕಿಸಬಹುದು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ