ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಚತುರ್ಥ ಪರ್ಯಾಯವನ್ನು ವೈಭವದಿಂದ ನಡೆಸುವುದಕ್ಕೆ ಉದ್ಯುಕ್ತರಾಗುತಿದ್ದಾರೆ. ಹಿಂದಿನ ಅವರ ಮೂರೂ ಪರ್ಯಾಯಗಳನ್ನು ಗಮನಿಸಿದವರಿಗೆ ಅವರ ನಾಲ್ಕನೇ ಪರ್ಯಾಯವೂ ವಿಶೇಷ ರೀತಿಯಲ್ಲಿ ನಡೆಯುತ್ತವೆ ಎನ್ನುವ ನಿರೀಕ್ಷೆ ಇದೆ. ಅದರಂತೆ ಶ್ರೀಗಳು ತಮ್ಮದು ವಿಶ್ವದಾದ್ಯಂತ ಇರುವ ಕೃಷ್ಣ ಭಕ್ತರ ಪರ್ಯಾಯವಾಗಿದೆ ಎನ್ನುವ ಮೂಲಕ ತಮ್ಮ ಪರ್ಯಾಯವು ಹತ್ತಾರು ವೈಶಿಷ್ಟ್ಯಗಳಿಂದ ಕೂಡಿರಲಿದೆ ಎಂಬುದನ್ನು ಹೇಳುತ್ತಿದ್ದಾರೆ. --- ವಿಶ್ವ ಪರ್ಯಾಯ ಎಂಬ ಪರಿಕಲ್ಪನೆ ಏನು ?
ಇಡೀ ವಿಶ್ವವೇ ಇಂದು ಒಂದು ಕುಟುಂಬ, ವಿಶ್ವದ ಪ್ರತಿಯೊಂದು ಭಾಗಗಳಲ್ಲಿಯೂ ಕೃಷ್ಣ ಭಕ್ತರಿದ್ದಾರೆ. ನಾವು ವಿಶ್ವದ ಮೂಲೆಮೂಲೆಗಳನ್ನು ಸಂದರ್ಶಿಸಿದ್ದೇವೆ, ಕೃಷ್ಣ ಸಂದೇಶವನ್ನು ಸಾರಿದ್ದೇವೆ. ವಿಶ್ವದಾದ್ಯಂತ ಇರುವ ಕೃಷ್ಣನ ಭಕ್ತರಿಗೆ ಈ ಪರ್ಯಾಯದಲ್ಲಿ ಭಾಗವಹಿಸುವುದಕ್ಕೆ ಅವಕಾಶ ನೀಡಿದ್ದೇವೆ. ದೇಶವಿದೇಶಗಳಿಂದ ಸಾಕಷ್ಟು ಭಕ್ತರು ಈ ಪರ್ಯಾಯದ ಸಂದರ್ಭದಲ್ಲಿ ಉಡುಪಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇದು ವಿಶ್ವ ಪರ್ಯಾಯವಾಗುತ್ತಿದೆ. --- ಅದನ್ನು ಗೀತಾ ಪರ್ಯಾಯ ಎಂತಲೂ ಕರೆದಿದ್ದೀರಿ? ಇವತ್ತು ಪ್ರತಿಯೊಬ್ಬರನ್ನೂ ಕಾಡುತ್ತಿರುವ ಸಮಸ್ಯೆ ಮಾನಸಿಕ ನೆಮ್ಮದಿಯ ಕೊರತೆ. ಗೀತೆಯಲ್ಲಿ ಇದಕ್ಕೆ ಪರಿಹಾರವಿದೆ. ಗೀತೆಯಲ್ಲಿ ಕೃಷ್ಣ ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ... ಎಂದು ಹೇಳಿದಂತೆ ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಮಾಡಿದರೇ ನೆಮ್ಮದಿ ತಾನಾಗಿಯೇ ಸಿಗುತ್ತದೆ. ಆದ್ದರಿಂದ ನಮ್ಮ ಪರ್ಯಾಯ ಕಾಲದಲ್ಲಿ ಕನಿಷ್ಠ ಒಂದು ಕೋಟಿ ಜನರಾದರೂ ಗೀತೆಯನ್ನು ಬರೆಯುವ ಸಂಕಲ್ಪ ಮಾಡಿದರೆಅವರಿಗೆ ಗೀತೆಯ ಸಂದೇಶಗಳು ತಲುಪುತ್ತವೆ. ಆದ್ದರಿಂದ ನಮ್ಮ ಪರ್ಯಾಯವನ್ನುವಿಶ್ವ ಗೀತಾ ಪರ್ಯಾಯ ಎಂದು ಕರೆಯುತಿದ್ದೇವೆ. ---- ಗೀತೆಗೆ ಈಗ ಯಾಕೆ ಇಷ್ಟು ಮಹತ್ವ ನೀಡುತಿದ್ದೀರಿ ?ಗೀತೆ ಒಂದು ಗೈಡ್ ಇದ್ದಂತೆ, ಅದು ಹೇಗೆ ಬದುಕಬೇಕು ಎನ್ನುವುದನ್ನು ಗೈಡ್ ಮಾಡುತ್ತದೆ, ಇವತ್ತು ಪ್ರತಿಯೊಬ್ಬರೂ ಕನ್ ಫ್ಯೂಶನ್ನಲ್ಲಿದ್ದಾರೆ, ಅವರಿಗೆ ಒಬ್ಬ ಗೈಡ್ ಬೇಕಿದೆ. ಗೀತೆಗಿಂತ ಒಳ್ಳೆಯ ಗೈಡ್ ಬೇರೆ ಇಲ್ಲ. ಆದ್ದರಿಂದ ಜನರಿಗೆ ಈ ಗೈಡ್ ನ ಪರಿಚಯ ಮಾಡುವುದಕ್ಕೆ ಗೀತಾ ಲೇಖನ ಸಂಕಲ್ಪ ಅತ್ಯಂತ ಸೂಕ್ತ ವಿಧಾನವಾಗಿದೆ. ಈ ಸಂಕಲ್ಪವನ್ನು ಜಾರಿಗೆ ತರಲು ಪರ್ಯಾಯ ಒಂದು ಸೂಕ್ತ ವೇದಿಕೆಯಾಗಿದೆ. ಆದ್ದರಿಂದ ಅದನ್ನು ನಮ್ಮ ಪರ್ಯಾಯದ ಒಂದು ಯೋಜನೆಯಾಗಿ ತೆಗೆದುಕೊಂಡಿದ್ದೇವೆ.
--- ವಿದೇಶಗಳಲ್ಲಿ ಕೃಷ್ಣ ಮಂದಿರಗಳ ಸ್ಥಾಪನೆ ಹೇಗೆ ಸಾಧ್ಯವಾಯಿತು ? ಪ್ರತಿಯೊಂದು ದೇಶಗಳಲ್ಲಿಯೂ ಹಿಂದುಗಳಿದ್ದಾರೆ. ಇಂದು ವಿದೇಶದ ಜನರು ಹಿಂದೂ ಧರ್ಮದ ಬಗ್ಗೆ ಒಲವು ತೋರಿಸುತಿದ್ದಾರೆ. ಆದ್ದರಿಂದ ನಾವು ಹಿಂದು ಧರ್ಮದ ಪ್ರಚಾರಕ್ಕಾಗಿ ಹಿಂದು ದೇವಾಲಯಗಳನ್ನು ಸ್ಥಾಪಿಸುತಿದ್ದೇವೆ. ಈಗಾಗಲೇ ಅಮೆರಿಕವೂ ಸೇರಿದಂತೆ 11 ಕಡೆಗಳಲ್ಲಿ ಕೃಷ್ಣಮಂದಿರಗಳನ್ನು ಸ್ಥಾಪಿಸಿದ್ದೇವೆ. ಇನ್ನು ಕೆಲವು ಕಡೆಗಳಲ್ಲಿ ಕಾರ್ಯ ಪ್ರಗತಿಯಲ್ಲಿದೆ.ಬಾಕ್ಸ್ ಮಧ್ವಾಚಾರ್ಯರ ಬೃಹತ್ ವಿಗ್ರಹ ಸ್ಥಾಪನೆಚತುರ್ಥ ಪರ್ಯಾಯದ ಬೇರೆ ಯಾವ ಯೋಜನೆಗಳಿವೆ ?ಉಡುಪಿಯ ಮುಖ್ಯ ಭಾಗ, ಕಲ್ಸಂಕದಲ್ಲಿ ಮಧ್ವಾಚಾರ್ಯ ವೃತ್ತವನ್ನು ನಿರ್ಮಿಸಿ, ಅಲ್ಲಿ ಆಚಾರ್ಯರು ಕೃಷ್ಣನನ್ನು ಸಮುದ್ರದಿಂದ ಎತ್ತಿ ತರುವಂತಹ ಬೃಹತ್ ಮೂರ್ತಿಯನ್ನು ಸ್ಥಾಪಿಲಿದ್ದೇವೆ. ಇದು ಉಡುಪಿಯ ಧಾರ್ಮಿಕತೆ, ಪ್ರವಾಸೋದ್ಯಮಕ್ಕೆ ದೊಡ್ಡ ಕೊಡುಗೆಯಾಗಲಿದೆ ಕೃಷ್ಣ ಮಠದೊಳಗೆ ಎಳೆಯುವುದಕ್ಕೆ ಅನುಕೂಲವಾಗುವಂತೆ ಒಂದು ಚಿನ್ನದ ರಥವನ್ನು ನಿರ್ಮಿಸಲಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದ ಗೀತಾ ಸಮ್ಮೇಳನ ಆಯೋಜಿಸುವುದು, ಗೀತಾ ಮಹಾಯಾಗ ನಡೆಸುವುದು ಕೂಡ ಉದ್ದೇಶವಾಗಿದೆ. ಉಡುಪಿಗೆ ಬರುವ ದೇಶವಿದೇಶದ ಭಕ್ತರಿಗೆ ಉಳಿದುಕೊಳ್ಳಲು ಅನುಕೂಲವಾಗುವಂತಹ ಅಷ್ಟೋತ್ತರ ಭವನವೊಂದನ್ನು ನಿರ್ಮಿಸಲಾಗುವುದು.
ಬಾಕ್ಸ್ಯಾವ ಆತಂಕವೂ ಇಲ್ಲ, ಎಲ್ಲವೂ ಕೃಷ್ಣನಿಚ್ಛೆ
ಹಿಂದಿನ ಪರ್ಯಾಯಗಳಲ್ಲಿ ನಿಮ್ಮ ವಿದೇಶ ಪ್ರವಾಸದ ಬಗ್ಗೆ ಆತಂಕ, ಅಡ್ಡಿಗಳಾಗಿದ್ದವು!ನಮಗೆ ಯಾವ ಆತಂಕವೂ ಇಲ್ಲ. ಕೃಷ್ಣ ಭಕ್ತರಿರುವ ಪ್ರತಿಯೊಂದು ದೇಶವೂ ನಮಗೆ ಸ್ವದೇಶವೇ ಆಗಿದೆ. ಅದನ್ನು ವಿದೇಶ ಅಂತ ನಾವು ಭಾವಿಸುವುದಿಲ್ಲ. ಹತ್ತಾರು ದೇಶಗಳ ಭಕ್ತರು ನಮ್ಮ ಗೀತಾ ಲೇಖನ ಯಜ್ಞದಲ್ಲಿ ಭಾಗವಹಿಸುತಿದ್ದಾರೆ. ಇದು ಎಲ್ಲ ದೇಶಗಳ ಕೃಷ್ಣ ಭಕ್ತರ ಪರ್ಯಾಯವಾಗಿದೆ. ಈಗ ನ್ಯಾಯಾಲಯವೂ ನಮ್ಮ ಪರ್ಯಾಯಕ್ಕೆ ಯಾವುದೇ ತಡೆ, ಅಡ್ಡಿ ಇಲ್ಲ ಎಂದು ಹೇಳಿದೆ. ನಾವು ಕೃಷ್ಣನ ಪೂಜೆಯನ್ನು ಮಾಡಿ ಅದನ್ನು ಅವನಿಗೆ ಅರ್ಪಿಸುತಿದ್ದೇವೆ, ಎಲ್ಲವನ್ನೂ ಅವನೇ ಮಾಡುತ್ತಾನೆ, ಮಾಡಿಸುತ್ತಾನೆ ಎಂದು ನಂಬಿದ್ದೇವೆ.-ಸುಭಾಶ್ಚಂದ್ರ ಎಸ್.ವಾಗ್ಳೆ ಉಡುಪಿ