ಶಾಸಕ ಟಿ.ಬಿ.ಜಯಚಂದ್ರ ಅವರು ಬೀಡಿ ಕಾರ್ಮಿಕರ ಕಷ್ಟಗಳನ್ನು ನೋಡಿ ಅವರ ಸಮಸ್ಯೆಗಳನ್ನು ಪರಿಹರಿಸಲು ಸುಮಾರು ಏಳುವರೆ ಎಕರೆಯಲ್ಲಿ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಈ ಮನೆಗಳನ್ನು ಪಡೆದ ಫಲಾನುಭವಿಗಳು ಯಾರಿಗೂ ಪರಬಾರೆ ಮಾಡದೆ ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿರಾ
ಬೀಡಿ ಕಾಲೋನಿಯಲ್ಲಿ ಮನೆಗಳನ್ನು ಸುಮಾರು ಏಳುವರೆ ಎಕರೆಯಲ್ಲಿ ೭.೨೫ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಎಲ್ಲಾ ಫಲಾನುಭವಿಗಳಿಗೂ ಹಕ್ಕು ಪತ್ರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಾಯಿಸಿ ನೀಡಿದ್ದು, ಇದು ರಾಜ್ಯದಲ್ಲಿಯೇ ಮೊದಲು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ಶನಿವಾರ ನಗರದ ಬೀಡಿ ಕಾರ್ಮಿಕರ ಕಾಲೋನಿಯಲ್ಲಿ ಸುಮಾರು ೭೦ ಫಲಾನುಭವಿಗಳಿಗೆ ಹಕ್ಕು ಪತ್ರ ಮತ್ತು ಇ-ಆಸ್ತಿ ವಿತರಿಸಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಯೊಬ್ಬರಿಗೂ ಮೂಲಭೂತ ಸೌಲಭ್ಯ ಕೊಡಬೇಕು ಎಂದು ಸಂವಿಧಾನದಲ್ಲಿ ಹೇಳಿದ್ದಾರೆ. ಅಂಬೇಡ್ಕರ್ ಆಶಯದಂತೆ ಬೀಡಿ ಕಾರ್ಮಿಕರಿಗೆ ಶಾಶ್ವತ ನೆಲೆ ಮಾಡಲು ಮನೆ ನಿರ್ಮಿಸಿ ಹಕ್ಕು ಪತ್ರ ನೀಡುವ ಕೆಲಸ ಮಾಡಿದ್ದೇನೆ. ಇದರಿಂದ ನನ್ನ ಕನಸು ಈಡೇರಿದೆ. ಇದೆಲ್ಲಾ ಅಧಿಕಾರಿಗಳ, ಜನಪ್ರತಿನಿಧಿಗಳ ಕ್ರಿಯಾಶೀಲತೆಯಿಂದ ಸಾಧ್ಯವಾಗಿದೆ ಎಂದರು.
ಫಲಾನುಭವಿಗಳು ಎಂದಿಗೂ ತಮ್ಮ ಆಸ್ತಿಯನ್ನು ಮಾರಿಕೊಳ್ಳಬೇಡಿ. ಇಂದು ಶಿರಾದಲ್ಲಿ ಒಂದು ಸೈಟ್ ೩೦ ಲಕ್ಷ ರು. ಆಗಿದೆ. ಮುಂದೆ ಇದು ೩ ಕೋಟಿಯೂ ಆಗಬಹುದು. ಏಕೆಂದರೆ ಶಿರಾದಲ್ಲಿ ಕೈಗಾರಿಕಾ ಕ್ರಾಂತಿಯಾಗುತ್ತಿದೆ. ಒ₹ಧಉ ಕೋಟಿ ರು. ವೆಚ್ಚದಲ್ಲಿ ಮೌಲಾನಾ ಆಜಾದ್ ಶಾಲೆ ಮಂಜೂರಾಗಿದ್ದು, ಈ ಶಾಲೆಯನ್ನು ಬೀಡಿ ಕಾರ್ಮಿಕರ ಕಾಲೋನಿಯಲ್ಲಿಯೇ ನಿರ್ಮಿಸುವುದಾಗಿ ತಿಳಿಸಿದರು.
ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್ ಮಾತನಾಡಿ ಶಾಸಕ ಟಿ.ಬಿ.ಜಯಚಂದ್ರ ಅವರು ಬೀಡಿ ಕಾರ್ಮಿಕರ ಕಷ್ಟಗಳನ್ನು ನೋಡಿ ಅವರ ಸಮಸ್ಯೆಗಳನ್ನು ಪರಿಹರಿಸಲು ಸುಮಾರು ಏಳುವರೆ ಎಕರೆಯಲ್ಲಿ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಈ ಮನೆಗಳನ್ನು ಪಡೆದ ಫಲಾನುಭವಿಗಳು ಯಾರಿಗೂ ಪರಬಾರೆ ಮಾಡದೆ ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಲಕ್ಷ್ಮೀಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ ಕುಮಾರ್, ಪೌರಾಯುಕ್ತ ರುದ್ರೇಶ್, ನಗರಸಭೆ ಆಶ್ರಯ ಸಮಿತಿ ಸದಸ್ಯರಾದ ವಾಜರಹಳ್ಳಿ ರಮೇಶ್, ಜಯಲಕ್ಷ್ಮೀ, ನೂರುದ್ದೀನ್, ಮಂಜುನಾಥ್, ನಗರಸಭೆ ಸದಸ್ಯರಾದ ಬುರಾನ್ ಮೊಹಮದ್, ಆರ್.ರಾಮು, ರಾಧಾಕೃಷ್ಣ, ಮಾಜಿ ಸದಸ್ಯ ಆರ್.ರಾಘವೇಂದ್ರ, ಮುಖಂಡರಾದ ವಿಜಯ್ ಕುಮಾರ್, ಕಂದಾಯ ಅಧಿಕಾರಿ ಮಂಜುನಾಥ್, ನಗರಸಭೆ ಆಶ್ರಯ ಶಾಖೆ ವಿಷಯ ನಿರ್ವಾಹಕ ಶ್ರೀನಿವಾಸ್.ಎನ್.ವಿ ಸೇರಿದಂತೆ ಹಲವರು ಹಾಜರಿದ್ದರು.
ಎಫ್.ಎಸ್.ಎಲ್. ಪ್ರಯೋಗಾಲಯ
ರಾಜ್ಯ ಸರಕಾರ ಎಫ್.ಎಸ್.ಎಲ್. ಪ್ರಯೋಗಾಲಯ ಮಾಡಲು ಮುಂದಾಗಿದ್ದು, ಅದಕ್ಕೆ ಶಿರಾದಲ್ಲಿ ಸ್ಥಳ ನೀಡಲು ಮುಂದಾಗಿದ್ದೇನೆ. ಪ್ರಯೋಗಾಲಯ ನಿರ್ಮಾಣಕ್ಕೆ ಕೇಂದ್ರ ಸರಕಾರ ೪೫ ಕೋಟಿ ರು. ಅನುದಾನ ಕೊಡಲು ಒಪ್ಪಿದೆ. ಶಿರಾದಲ್ಲಿ ಎಫ್.ಎಸ್.ಎಲ್. ಪ್ರಯೋಗಾಲಯ ನಿರ್ಮಾಣಕ್ಕೆ ಪ್ರಯತ್ನ ಮಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಟಿ.ಬಿ. ಜಯಚಂದ್ರ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.