ರಾಮಮೂರ್ತಿ ನವಲಿ
ಗಂಗಾವತಿ : ಇಲ್ಲಿಯ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಆ. 26ರಂದು ಜರುಗಲಿದ್ದು, ಕ್ಷಣಗಣನೆ ಪ್ರಾರಂಭವಾಗಿದೆ. ಬಿಜೆಪಿಗೆ ಬಹುಮತ ಇರದಿದ್ದರೂ ಕಾಂಗ್ರೆಸ್ ವಲಸೆ ಸದಸ್ಯರು, ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರೊಂದಿಗೆ ಆಡಳಿತಕ್ಕೇರಲು ಪ್ರಯತ್ನ ಮಾಡಿದೆ. ಇದರಿಂದಾಗಿ ನಗರಸಭೆಯಲ್ಲಿ ಬಿಜೆಪಿ ಬಾವುಟ ಹಾರಿಸುವುದು ಬಹುತೇಕ ಖಚಿತವಾಗಿದೆ.
ಪ್ರಸ್ತುತ ನಗರಸಭೆ ಒಟ್ಟು 35 ಸದಸ್ಯರ ಸಂಖ್ಯೆ ಇದ್ದು, ಇದರಲ್ಲಿ ಬಿಜೆಪಿ 14, ಜೆಡಿಎಸ್ 2, ಪಕ್ಷೇತರ 2, ಕಾಂಗ್ರೆಸ್ನಿಂದ ಬಿಜೆಪಿಗೆ ವಲಸೆ ಬಂದ 10 ಸದಸ್ಯರು ಮತ್ತು ಅವಶ್ಯ ಬಿದ್ದರೆ ಶಾಸಕರ ಬೆಂಬಲ ಸೇರಿದಂತೆ 29 ಸದಸ್ಯರ ಶಕ್ತಿ ಹೊಂದಿದೆ.
ಪ್ರಥಮ ಬಾರಿಗೆ ಬಿಜೆಪಿ ಆಡಳಿತ:
ನಗರಸಭೆಯ ಇತಿಹಾಸದಲ್ಲೇ ಬಿಜೆಪಿ ಆಡಳಿತ ನಡೆಸುತ್ತಿರುವುದು ಇದು ಪ್ರಥಮ ಬಾರಿಯಾಗಲಿದೆ. ಈ ಹಿಂದೆ ಬಿಜೆಪಿ ಆಡಳಿತ ನಡೆಸಲು ಮುಂದಾಗಿದ್ದ ಸಂದರ್ಭ ಬಿಜೆಪಿ ಶಾಸಕರು ಮತ್ತು ಸಂಸದರು ಬೆಂಬಲ ವ್ಯಕ್ತಪಡಿಸಿದ್ದರೂ ವಿಫಲವಾಗಿ ಚುನಾವಣೆ ಮುಂದೂಡಲಾಗಿತ್ತು.
18 ತಿಂಗಳ ಅಧಿಕಾರ ಹಂಚಿಕೆ:
ನಗರಸಭೆಯ ಅಧಿಕಾರ ಇನ್ನು ಕೇವಲ 18 ತಿಂಗಳು ಉಳಿದಿದ್ದು, ಇದರಲ್ಲಿ 9 ತಿಂಗಳು ಬಿಜೆಪಿಗೆ ಮತ್ತು ಇನ್ನು 9 ತಿಂಗಳು ಕಾಂಗ್ರೆಸ್ನಿಂದ ವಲಸೆ ಬಂದ ಸದಸ್ಯರಿಗೆ ಅಧಿಕಾರ ನೀಡಬೇಕೆಂಬ ನಿರ್ಣಯವನ್ನು ಬಿಜೆಪಿ ವರಿಷ್ಠರು ತಾಳಿದ್ದಾರೆ. ಆದರೆ ಯಾರಿಗೆ ಮೊದಲು ಅಧಿಕಾರ ನೀಡಬೇಕೆನ್ನುವುದರ ಕುರಿತು ಬಿಜೆಪಿ ವರಿಷ್ಠರು ಸುದೀರ್ಘ ಚರ್ಚೆ ನಡೆಸಿದ್ದಾರೆ.
ಬಿಜೆಪಿ ಸದಸ್ಯರಾದ ಪರಶುರಾಮ ಮಡ್ಡೇರ್, ನೀಲಕಂಠ ಕಟ್ಟಿಮನಿ ಮತ್ತು ಅಜಯ್ ಬಿಚ್ಚಾಲಿ ಹೆಸರು ಅಧ್ಯಕ್ಷರ ಆಯ್ಕೆಪಟ್ಟಿಯಲ್ಲಿದೆ. ಅದರಲ್ಲಿ ವಲಸೆ ಬಂದ ಕಾಂಗ್ರೆಸ್ ಮೌಲಾಸಾಬ ಹೆಸರು ಕೇಳಿ ಬರುತ್ತಿದ್ದು, ಇದರಿಂದ ಯಾರು ಮೊದಲನೇ ಅವಧಿಗೆ ಅದ್ಯಕ್ಷರಾಗುತ್ತಾರೆ ಎನ್ನುವುದು ಗೌಪ್ಯವಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಪಾರ್ವತಮ್ಮ ಹೆಸರಿದೆ.
ಇನ್ನೊಂದೆಡೆ ಕಾಂಗ್ರೆಸ್ನವರು ಮಾತ್ರ ಮ್ಯಾಜಿಕ್ ಮಾಡಿ ಅಧಿಕಾರ ಹಿಡಿಯುತ್ತೇವೆ ಎನ್ನುತ್ತಿದ್ದಾರೆ. ಒಟ್ಟಾರೆ ಬಹುತೇಕವಾಗಿ ಬಿಜೆಪಿ ಅಧಿಕಾರ ಹಿಡಿಯುವುದು ಖಚಿತವಾಗಿದ್ದು, ಅಧಿಕಾರ ಹಂಚಿಕೆ ಮಾತ್ರ ಗೌಪ್ಯವಾಗಿದೆ.