- ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತ್ಯುತ್ಸವ ಸಮಾರಂಭ
ಸಮಾಜಕ್ಕಾಗಿ ಸೇವೆ ಸಲ್ಲಿಸಿದ ಮಹನೀಯರನ್ನು ಜನರು ದೇವರಂತೆ ಪೂಜಿಸುತ್ತಾರೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.ಭಾನುವಾರ ತಾಲೂಕು ಕಚೇರಿ ಆವರಣದಲ್ಲಿ ನಡೆದ ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಕನಕದಾಸರು, ಸರ್ವಜ್ಞರು, ಗುರುನಾನಕ್, ಮಹಾತ್ಮಾ ಗಾಂಧೀಜಿ, ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳಂತ ಅನೇಕ ಮಹನೀಯರು ಜಾತಿ, ಅಸ್ಪೃಶ್ಯತೆ ಹೋಗಲಾಡಿಸಲು, ಸಮ ಸಮಾಜ ಕಟ್ಟಲು ಹೋರಾಡಿದವರು ಹಾಗೂ ಸಮಾಜಕ್ಕೆ ಸೇವೆ ಸಲ್ಲಿಸಿದವರನ್ನು ಜನರು ಸದಾ ನೆನಪಿಸಿ ಕೊಳ್ಳುತ್ತಾರೆ ಎಂದು ಹೇಳಿದರು.
ಲಿಂಗದಹಳ್ಳಿ ಹೋಬಳಿ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಲಾಗಿದೆ. ನಿಮ್ಮ ಸಮುದಾಯದಲ್ಲಿ ಒಗ್ಗಟ್ಟಿದೆ. ಸಮುದಾಯದ ಬೇಡಿಕೆ ಈಡೇರಿಸಲು ಕ್ರಮ ವಹಿಸಲಾಗುವುದು. ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸ ವವನ್ನು ಪ್ರತಿ ವರ್ಷ ಚೆನ್ನಾಗಿ ಆಚರಿಸಿ ಎಂದು ಸಲಹೆ ಮಾಡಿದರು.ಪುರಸಭೆ ಅಧ್ಯಕ್ಷ ವಸಂತಕುಮಾರ್ ಮಾತನಾಡಿ ಸಮಾಜ ದೊಡ್ಡದಾಗಿ ಬೆಳೆದಿದೆ. ರಾಜಕೀಯವಾಗಿಯೂ ಬೆಳೆಯಲಿ ಎಂದು ಶುಭ ಕೋರಿದರು.ಪುರಸಭೆ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಮಾತನಾಡಿ ನಾರಾಯಣ ಗುರುಗಳ ಜಯಂತ್ಯುತ್ಸವವನ್ನು ಅದ್ಧೂರಿಯಿಂದ ಮಾಡಿದ್ದೀರಿ ಎಂದು ಶ್ಲಾಘಿಸಿದರು. ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ಶಿವಮೊಗ್ಗದ ಗಾಂಧಿ ಎಂದೇ ಹೆಸರಾದ ಕಾಗೋಡು ತಿಮ್ಮಪ್ಪ, ಹಾಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ರಾಜ್ಯಕ್ಕೆಅಪಾರ ಕೊಡುಗೆ ನೀಡಿದ್ದಾರೆ ಎಂದರು.
ದಸಂಸ ರಾಜ್ಯ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ಮಾತನಾಡಿ ನಾರಾಯಣ ಗುರುಗಳು ಮಹಿಳೆಯರ ಶೋಷಣೆ ವಿರುದ್ಧ ಹೋರಾಡಿ, ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂದು ಸಾರಿದರು. ಮೂಡ ನಂಬಿಕೆಗಳನ್ನು ಹೋಗಲಾಡಿಸಲು ಪ್ರಾಣಿ ಬಲಿ, ದೇವದಾಸಿ ಪದ್ಧತಿ, ಬೆತ್ತಲೆ ಸೇವೆ ನಿಲ್ಲಿಸಿದರು. ಬಾಲ್ಯವಿವಾಹ ನಿಷೇಧಿಸಿದರು, ದಲಿತರೊಂದಿಗೆ ಸಹಬೋಜನ ಸ್ವೀಕರಿಸಿದರು ಎಂದು ತಿಳಿಸಿದರು.ಆರ್ಯ ಈಡಿಗ ಸಮಾಜದ ಉಪಾಧ್ಯಕ್ಷ ಮನೋಜ್ ಕುಮಾರ್ ಮಾತನಾಡಿ ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜಕ್ಕಾಗಿ ಉತ್ತಮ ಮಾರ್ಗದರ್ಶನ ನೀಡಿದ್ದಾರೆ ಎಂದು ಹೇಳಿದರು.ಸಮಾಜದ ಮುಖಂಡ ಟಿ.ಟಿ.ರಾಘವೇಂದ್ರ, ಮನೋಜ್ ಕುಮಾರ್, ಚಂದ್ರಶೇಖರ್ ಅಮೃತಾಪುರ, ಅಜಯ್ ಬಳ್ಳಾವರ ಅವರು ಸಮುದಾಯದ ಕೋರಿಕೆ ಕುರಿತು ಶಾಸಕ ಜಿ.ಎಚ್.ಶ್ರೀನಿವಾಸ್ ಗೆ ಮನವಿ ಸಲ್ಲಿಸಿದರು. ಮುಖಂಡರನ್ನು ಸನ್ಮಾನಿಸಲಾಯಿತು.
7ಕೆಟಿಆರ್.ಕೆ.4ಃ