ವಿಡಿಯೋ ಮಾಡಿದವರು, ಹಂಚಿದವರನ್ನು ಶಿಕ್ಷಿಸಬೇಕು: ಶಾಸಕ ಕೆ.ಎಂ.ಶಿವಲಿಂಗೇಗೌಡ

KannadaprabhaNewsNetwork | Published : May 23, 2024 1:02 AM

ಸಾರಾಂಶ

ಪೆನ್ ಡ್ರೈವ್ ಹಂಚಿದ ಇಬ್ಬರನ್ನೂ ಬಲಿ ಹಾಕಿ ರಾಜ್ಯದ ಮಾನ, ಮರ್ಯಾದೆಯನ್ನು ಕಾಪಾಡಲು ಮುಂದಾಗಬೇಕು ಎಂದು ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಒತ್ತಾಯಿಸಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದ ಮರ್ಯಾದೆ ಕಾಪಾಡಿ, ಸಂತ್ರಸ್ತರಿಗೆ ನ್ಯಾಯ ಕೊಡಿ

ಕನ್ನಡಪ್ರಭ ವಾರ್ತೆ ಹಾಸನ

ಇಡೀ ಪೆನ್‌ಡ್ರೈವ್‌ ಪ್ರಕರಣ ಜಿಲ್ಲೆಯ ಪಾಲಿಗೆ ತಲೆ ತಗ್ಗಿಸುವಂತ ವಿಚಾರ. ಹಾಗಾಗಿ ವಿಡಿಯೋ ಮಾಡಿದವರು ಹಾಗೂ ಪೆನ್ ಡ್ರೈವ್ ಹಂಚಿದ ಇಬ್ಬರನ್ನೂ ಬಲಿ ಹಾಕಿ ರಾಜ್ಯದ ಮಾನ, ಮರ್ಯಾದೆಯನ್ನು ಕಾಪಾಡಲು ಮುಂದಾಗಬೇಕು ಎಂದು ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ‘ಅನ್ಯಾಯವಾಗಿರುವ ಸಂಸತ್ರಸ್ತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಆಗಬೇಕು. ಇದನ್ನು ಬಿಟ್ಟು ರಾಜಕೀಯ ದೊಂಬರಾಟ ಮಾಡಿಕೊಂಡು ದಿನವೂ ಟಿವಿ ಮುಂದೆ ಬಂದು ಕಥೆ ಕಟ್ಟಿ ಹೇಳುವುದಲ್ಲ. ಎಷ್ಟು ದಿನಗಳ ಕಾಲ ಕಥೆ ಕಟ್ಟಲು ಆಗುತ್ತದೆ, ಎಲ್ಲರಿಗೂ ಗೊತ್ತಿದೆ. ರಾಜಕೀಯಕ್ಕಾಗಿ ಇಂತಹ ದೊಂಬರಾಟ ಆಡುವುದನ್ನು ನಿಲ್ಲಿಸಬೇಕು. ರಾಜಕೀಯ ದೊಂಬರಾಟಕ್ಕಾಗಿ ಪೆನ್‌ಡ್ರೈವ್ ತರ್ತಾರೆ ಅವರಿಗೆ ಮುಖಕ್ಕೆ ಉಗಿದು ಮನೆಗೆ ಕಳುಹಿಸಬೇಕು’ ಎಂದು ಕಿಡಿಕಾರಿದರು.

‘ಇದು ಹೇಸಿಗೆಯಾದಂತಹ ವಿಚಾರ, ಇದು ರಾಜ್ಯಕ್ಕೆ ನಮಗೆ ಘನತೆ ತಂದುಕೊಡುವ ವಿಚಾರ ಅಲ್ಲ. ಇದನ್ನು ಬಹಳ ರಾಜಕೀಯವಾಗಿ ತೆಗೆದುಕೊಂಡು ಹೋಗಲಾಗುತ್ತಿದೆ. ಯಾರು ಇದಕ್ಕೆ ಮೂಲವೋ ಅವರನ್ನು ಬಂಧಿಸಲಿ. ನಿಮಗೆ ಮಾಡಲು ಕೆಲಸವಿಲ್ಲವಾ? ಮೊದಲು ಹೋಗಿ ಅಪರಾಧಿ ಹಿಡಿದುಕೊಂಡು ಬರಲಿ. ಎಲ್ಲೇ ಅಡಗಿದ್ದರೂ ಅಪರಾಧಿ ಕರೆತರಲು ಆಗಲ್ವಾ? ನಮ್ಮ ಸರ್ಕಾರಕ್ಕೆ ಅಪರಾಧಿ ಹಿಡಿದು ಕರೆತರಲು ಆಗಲ್ಲ. ಕೇಂದ್ರ ಸರ್ಕಾರ ಸಿಬಿಐ ತಂಡವನ್ನು ಕರೆತರಬೇಕು. ರಾಜ್ಯದ ಮುಖ್ಯಮಂತ್ರಿಯಿಂದ ಅದು ಸಾಧ್ಯವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಡಿ.ಕೆ. ಶಿವಕುಮಾರ್, ಎಲ್.ಆರ್. ಶಿವರಾಮೇಗೌಡ ಆಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಇಂತಹ ಆಡಿಯೋ, ಇಂತಹ ಕಥೆಗಳು ಸಾವಿರ ಇದ್ದಾವೆ. ತನಿಖೆ ನಡೆಯಲಿ ಆಮೇಲೆ ಎಲ್ಲಾ ಗೊತ್ತಾಗುತ್ತದೆ’ ಎಂದು ತಿರುಗೇಟು ನೀಡಿದರು.

ಎಸ್‌ಐಟಿ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪ ವಿಚಾರದಲ್ಲಿ ಮಾಧ್ಯಮದವರ ಮೇಲೆ ಗರಂ ಆದ ಕೆ.ಎಂ.ಶಿವಲಿಂಗೇಗೌಡ, ‘ಎಸ್‌ಐಟಿಯವರು ದಿನವೂ ಏನು ಮಾಡಿದ್ದೀವಿ ಎಂದು ನಿಮ್ಮ ಮುಂದೆ ಬಿಚ್ಚಿ ವರದಿ ಓದಬೇಕಾ? ಕಾರ್ತಿಕ್‌ ಗೌಡನನ್ನು ಎಸ್‌ಐಟಿ ಅವರು ಹಿಡಿದಿಲ್ಲ, ವಿಚಾರಣೆ ಮಾಡಿಲ್ಲ ಎಂದು ಹೇಗೆ ನೀವು ಹೇಳ್ತೀರಾ? ನಾಲ್ಕೈದು ದಿನ ಟೈಂ ಕೊಡಿ, ಯಾರು ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ಮಾಡ್ತಾರೆ ನೋಡೋಣ, ಯಾರು ಮುಚ್ಚಿ ಹಾಕಲು ಪ್ರಯತ್ನ ಪಡ್ತಾರೆ? ಎಸ್‌ಐಟಿ ಸರಿ ಇಲ್ಲ ಅಂದ್ರೆ ನೋಡೋಣ’ ಎಂದು ಸಿಡಿಮಿಡಿಗೊಂಡರು.

‘ಪೆನ್‌ಡ್ರೈವ್ ಹಂಚಿದವರನ್ನು ಏಕೆ ಬಂಧನ ಮಾಡಿಲ್ಲ ಎಂದು ಎಸ್‌ಐಟಿ ಅವರನ್ನು ಕೇಳೋಣ, ಪೆನ್‌ಡ್ರೈವ್ ಆರೋಪಿಗಳನ್ನು ಬಂಧಿಸದಿದ್ದರೆ ಆಗ ಎಸ್‌ಐಟಿ ಅವರು ಪಕ್ಷಪಾತ ಮಾಡಿದ್ದಾರೆ, ಅವರು ಸರಿಯಲ್ಲ ಎಂದು ಆರೋಪ ಮಾಡೋಣ. ಇನ್ನೂ ನಾಲ್ಕು ದಿನ ಟೈಂ ಕೊಡಿ ನೋಡೋಣ. ಈಗ ಇದು ಕೋರ್ಟ್‌ನಲ್ಲಿ ಇದೆ. ಬಹಳ ನಿಷ್ಪಕ್ಷಪಾತವಾದ ತನಿಖೆ ನಡೆಯುತ್ತಿದೆ, ಯಾವುದೇ ಅನುಮಾನ ಬೇಡ ನೊಂದವರಿಗೆ ನ್ಯಾಯ ದೊರಕಿಸಿ ಕೊಡುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಫೋಟೋ: ಶಾಸಕ ಕೆ.ಎಂ.ಶಿವಲಿಂಗೇಗೌಡ.

Share this article