ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಬಯಲು ಸೀಮೆಯ ಕುಕ್ಕೆ ಸುಬ್ರಹ್ಮಣ್ಯ ಎಂದು ಪ್ರಸಿದ್ಧಿ ಪಡೆದಿರುವ ಹೋಬಳಿಯ ಸಾಸಲು ಧಾರ್ಮಿಕ ಕ್ಷೇತ್ರಕ್ಕೆ ಕಾರ್ತಿಕ ಮಾಸದ ಕೊನೆ ಸೋಮವಾರ ಸಹಸ್ರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.ನಡುರಾತ್ರಿ 3 ಗಂಟೆಯಿಂದಲೇ ಸಮೀಪದ ಗ್ರಾಮದವರು ಎತ್ತಿನಗಾಡಿಯಲ್ಲಿ ಬಂದರೆ, ಹಲವರು ವಿವಿಧ ವಾಹನಗಳಲ್ಲಿ ಆಗಮಿಸಿ ಪವಿತ್ರ ಕೊಳದಲ್ಲಿ ಸ್ನಾನ ಮಾಡಿದರು. ಅರ್ಚಕರು ಮುಂಜಾನೆಯಿಂದಲೇ ದೇವಾಲಯ ಶುಚಿಗೊಳಿಸಿ ಸೋಮೇಶ್ವರ, ಶಂಭುಲಿಂಗೇಶ್ವರ, ಸಹೋದರಿ ಕುದುರೆ ಮಂಡಮ್ಮ ಮೂರ್ತಿಗೆ ವಿವಿಧ ಆಭಿಷೇಕ ಮಾಡಿ ಬಿಲ್ವಾರ್ಚನೆ, ಶ್ರೀಗಂಧಾಭಿಷೇಕ, ಚಂದನಾಭಿಷೇಕ ಮಾಡಿ ಬಗೆಬಗೆಯ ಪುಷ್ಪಗಳಿಂದ ಅಲಂಕರಿಸಿ ನೈವೇದ್ಯ ಸಮರ್ಪಿಸಿ ಭಕ್ತರ ದರ್ಶನಕ್ಕೆ ಅನುಕೂಲ ಮಾಡಿದರು.
ನೂತನ ದೇಗುಲ ನಿರ್ಮಾಣದ ಹಿನ್ನೆಲೆಯಲ್ಲಿ ದೇವರ ಮೂರ್ತಿಗಳನ್ನು ದೇಗುಲದ ಹೊರ ಆವರಣದಲ್ಲಿ ಬಾಲಾಲಯದಲ್ಲಿ ಪ್ರತಿಷ್ಟಾಪಿಸಲಾಗಿತ್ತು. ಪರಿಣಾಮ ಭಕ್ತರು ದೇವರದರ್ಶನ ಪಡೆಯಲು ಹರಸಾಹಸಪಟ್ಟರು.ನಾಗಬನದಲ್ಲಿ ನಾಗರಕಲ್ಲಿಗೆ ಸಾವಿರಾರು ಭಕ್ತರು ಸರತಿಯಲ್ಲಿ ನಿಂತು ಹಾಲಿನ ತನಿ ಎರೆದರು. ಪರಿಣಾಮ ಸರಾಗವಾಗಿ ಹಾಲು ಹರಿಯದೆ ದುರ್ನಾತ ಬೀರುತ್ತಿತ್ತು. ಸಾಸಲು ಗ್ರಾಮಸ್ಥರು, ದಾನಿಗಳಿಂದ ಭಕ್ತರಿಗೆಅನ್ನದಾಸೋಹದ ವ್ಯವಸ್ಥೆ ಮಾಡಿದ್ದರು.
ತಮ್ಮಇಷ್ಟಾರ್ಥ ಸಿದ್ಧಿಯ ಹರಕೆಯಾದ ತಲೆ ಮುಡಿ, ನಾಗರ ಪೂಜೆ, ಹಣ್ಣುಕಾಯಿಯೊಂದಿಗೆ ಹುಂಡಿಗೆ ನಗ ನಾಣ್ಯ ಅರ್ಪಿಸಿದರು. ಜನದಟ್ಟಣೆಯಿಂದ ಬಟ್ಟೆ ಬದಲಾಯಿಸಿಕೊಳ್ಳಲು ಪ್ರತ್ಯೇಕ ಕೊಠಡಿಯಿಲ್ಲದೆ ಪರದಾಡಿದರು.ಇಂದು ವಿದ್ಯುತ್ ವ್ಯತ್ಯಯ
ಹಲಗೂರು: ಸಮೀಪದ ಗುಂಡಾಪುರ ಗೇಟ್ ಬಳಿ ಇರುವ 66/11 ಕೆ.ವಿ. ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನ.18 ರಂದು ಮೂರನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹಲಗೂರು, ಲಿಂಗಪಟ್ಟಣ ದಳವಾಯಿ ಕೋಡಿಹಳ್ಳಿ, ಗುಂಡಾಪುರ, ಎಚ್.ಬಸಾಪುರ, ಕೊನ್ನಾಪುರ, ಬೆನಮನಹಳ್ಳಿ, ಕುಂತೂರು, ನಿಟ್ಟೂರು, ಎನ್.ಹಲಸಹಳ್ಳಿ, ತೊರೆಕಾಡನಹಳ್ಳಿ, ಸಾಗ್ಯ ಸರಗೂರು, ಬಸವನಹಳ್ಳಿ, ಎಚ್.ಬಸಾಪುರ, ಕೆಂಪಯ್ಯನ ದೊಡ್ಡಿ, ಚಿಲ್ಲಾಪುರ, ಒದು ಬಸಪ್ಪನದೊಡ್ಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನ.18ರಂದು ಮಂಗಳವಾರ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮಳವಳ್ಳಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಟಿ.ಪುಟ್ಟಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.