ದೊಡ್ಡಬಳ್ಳಾಪುರ: ಆಷಾಢ ಮಾಸದ ಆಹ್ಲಾದಕರ ವಾತಾವರಣವನ್ನು ಆಸ್ವಾದಿಸುವ ಮನಸ್ಸುಗಳು ಧಾರ್ಮಿಕ ಚಿಂತನೆಯ ಲೇಪ ಹಚ್ಚಿಕೊಂಡು ರೂಪಿಸಿರುವ ನಂದಿಗಿರಿ ಪ್ರದಕ್ಷಿಣೆಗೆ ಈ ಬಾರಿ 84ನೇ ವರ್ಷದ ಸಂಭ್ರಮ. ಅಲ್ಪ ಮೋಡ ಮುಸುಕಿದ ಆಗಸ, ಚುಮುಚುಮು ಚಳಿ, ಆಗಾಗ್ಗೆ ಬೀಳುತ್ತಿದ್ದ ತುಂತುರು ಮಳೆಯ ನಡುವೆ ಪ್ರತಿವರ್ಷದಂತೆ ಈ ಬಾರಿಯೂ ಆಷಾಢ ಮಾಸದ ಕೊನೆಯ ಸೋಮವಾರದಂದು ನಂದಿಗಿರಿ ಪ್ರದಕ್ಷಿಣಾ ಕಾರ್ಯಕ್ರಮ ನಡೆಯಿತು.
ದೊಡ್ಡಬಳ್ಳಾಪುರದ ಭಜನಾ ತಂಡಗಳೊಂದಿಗೆ ಭಕ್ತಾದಿಗಳು ಭಜನೆಗೆ ತಾಳ ಹಾಕುತ್ತಾ ಪ್ರದಕ್ಷಿಣೆ ಆರಂಭಿಸಿದರು. ನಂತರ ಅಬಾಲವೃದ್ಧರಾದಿಯಾಗಿ ಜೊತೆಗೂಡಿದರು. ನಂದಿ ಗ್ರಾಮದಿಂದ ಆರಂಭವಾದ ಪ್ರದಕ್ಷಿಣೆಯ ತಂಡಗಳು ನಂತರ ಕುಡುಮಗೆರೆ ಕ್ರಾಸ್, ಕಾರಹಳ್ಳಿ, ಕಣಿವೇಪುರ, ನಂದಿ ಕ್ರಾಸ್, ಹೆಗ್ಗಡಿಹಳ್ಳಿ ಕಣಿವೆ ಬಸವಣ್ಣ, ಸುಲ್ತಾನ್ ಪೇಟೆ ಮಾರ್ಗವಾಗಿ ನಂದಿ ಬೆಟ್ಟದ ಸುತ್ತಲಿನ ಸುಮಾರು 16 ಕಿ.ಮೀ.ದೂರವನ್ನು ಕಾಲ್ನಡಿಗೆ ಮೂಲಕ ದೇವಾಲಯ ತಲುಪಿದವು.
ಬೆಳಗ್ಗೆ ಇಲ್ಲಿನ ನಂದಿ ಬೆಟ್ಟದ ಕ್ರಾಸ್ ಬಳಿ ಉಪಾಹಾರ ಹಾಗೂ ಪೂರ್ಣ ಪ್ರದಕ್ಷಿಣೆ ಆದ ನಂತರ ಸಮಿತಿಯಿಂದ ಭೋಜನದ ವ್ಯವಸ್ಥೆ ಏರ್ಪಡಿಸಲಾಗಿತ್ತು. ವಾಕಿಂಗ್ ಸಂಸ್ಕೃತಿಗೆ ಪ್ರಚೋದನೆ:ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಅತ್ಯುತ್ತಮವಾದದ್ದು ಎಂದು ಹಲವಾರು ಸಮೀಕ್ಷೆಗಳಿಂದ ಮಾತ್ರವಲ್ಲದೆ ಜನರು ಕಂಡುಕೊಂಡಿರುವ ಸತ್ಯವಾಗಿದೆ. ದೇವರ ಭಕ್ತಿಯ ಕಾರಣವಾದರೂ ಪಂಚಗಿರಿಗಳ ರಮಣೀಯ ಸೌಂದರ್ಯವನ್ನು ಸವಿಯುತ್ತ ಒಂದಷ್ಟು ವಾಕಿಂಗ್ ಮಾಡುವುದರಿಂದ ಮೈಮನಸ್ಸುಗಳ ಆರೋಗ್ಯ ವೃದ್ಧಿಸುತ್ತದೆ. ಅಲ್ಲದೇ, ಪಂಚಗಿರಿಗಳಲ್ಲಿ ವಿಶಿಷ್ಟವಾದ ಗಿಡಮೂಲಿಕೆಗಳಿದ್ದು, ಅದರಿಂದ ಬೀಸಿಬರುವ ಗಾಳಿ ಸೇವಿಸುವುದರಿಂದ ರೋಗಿಗಳಿಗೂ ಹೊಸ ಚೈತನ್ಯ ಬರುತ್ತದೆ ಎಂದು ಜನ ನಂಬುತ್ತಾರೆ.
29ಕೆಡಿಬಿಪಿ2- ದೊಡ್ಡಬಳ್ಳಾಪುರದ ನಂದಿ ಗಿರಿ ಪ್ರದಕ್ಷಿಣೆ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಜನರು ಪಾದಯಾತ್ರೆ ಮೂಲಕ ನಂದಿ ಬೆಟ್ಟವನ್ನು ಪ್ರದಕ್ಷಿಣೆ ಮಾಡಿದರು.