ದೇವರಾಜು ಕಪ್ಪಸೋಗೆ
ಚಾಮರಾಜನಗರ : ತಮಿಳುನಾಡು ಕಾಡಿನಲ್ಲಿ ದನಗಳನ್ನು ಮೇಯಿಸಲು ಅಲ್ಲಿನ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿದೆ. ಇದರಿಂದ ಅಲ್ಲಿನವರು ರಾಜ್ಯದ ಅರಣ್ಯವನ್ನು ದನ ಮೇಯಿಸಲು ಬಳಸಿಕೊಂಡು ಬಳಿಕ ಕೇರಳಕ್ಕೆ ದನದ ಗೊಬ್ಬರ ಮಾರುವ ಮಾಫಿಯಾ ಹಿಂದಿನಿಂದಲೂ ಇದೆ. ಇದೇ ಮಾಫಿಯಾ 5 ಹುಲಿಗಳ ಸಾವಿಗೆ ಕಾರಣವಾಯ್ತೆ ಎಂಬ ಪ್ರಶ್ನೆ ಉದ್ಭವವಾಗಿದೆ.
ಮಲೆಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ನೂರಾರು ಹಳ್ಳಿಗಳಿವೆ. ಕಾಡಂಚಿನ ಕೆಲ ಹಳ್ಳಿಗಳಲ್ಲಿ ಬೃಹದಾಕಾರದ ದನದ ಗೊಬ್ಬರ ಗುಡ್ಡಗಳು ಕಾಣಸಿಗುತ್ತವೆ. ಈ ಕಾಡಿನಲ್ಲಿ ಎಗ್ಗಿಲ್ಲದೇ ಸಾವಿರಾರು ದನಗಳು ಮೇಯುವುದರಿಂದ ಹಳ್ಳಿಗಳಲ್ಲಿ ರಾಶಿ ರಾಶಿ ದನದ ಗೊಬ್ಬರ ಸಂಗ್ರಹವಾಗುತ್ತದೆ. ಇದು ಕರ್ನಾಟಕದ ದನಗಳದ್ದಲ್ಲ. ತಮಿಳುನಾಡಿನ ಜನರಿಗೆ ಸೇರಿದವು. ಸಾವಿರಾರು ಸಂಖ್ಯೆಯಲ್ಲಿ ಬರಗೂರು ತಳಿಯ ದನಗಳನ್ನು ಕರ್ನಾಟಕಕ್ಕೆ ರವಾನೆ ಮಾಡಿ ಗುತ್ತಿಗೆ ಆಧಾರದಲ್ಲಿ ಸ್ಥಳೀಯ ಜನರಿಗೆ ನೀಡುತ್ತಾರೆ.
ದೇಸಿ ತಳಿ ಗೊಬ್ಬರಕ್ಕೆ ಭಾರಿ ಬೇಡಿಕೆ:
ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ದನಗಳ ಸಂಖ್ಯೆ ಕಡಿಮೆ ಆಗುವುದಷ್ಟೇ ಅಲ್ಲ, ಈ ಭಾಗದ ಸ್ಧಳೀಯ ಹಳ್ಳಿಕಾರ್ ದನಗಳ ಸಂತತಿ ಕ್ಷಿಣಿಸುತ್ತಿದ್ದು, ದೇಶಿ ದನಗಳ ಬದಲು ಹೈಬ್ರಿಡ್ ದನಗಳನ್ನು ಹಾಲಿನ ಉದ್ದೇಶಕ್ಕಾಗಿ ರೈತರು ಸಾಕುತ್ತಿದ್ದಾರೆ. ಆದರೆ ಹೈಬ್ರೀಡ್ ದನಗಳ ಗೊಬ್ಬರಕ್ಕೆ ಯಾವುದೇ ಬೇಡಿಕೆ ಇಲ್ಲ. ಆದರೆ, ಬರಗೂರು ತಳಿಯ ದನಗಳು ಕಾಡಿನಲ್ಲಿ ಮೇಯುವುದರಿಂದ ಸಗಣಿಯಲ್ಲಿ ಸಾವಯವ ಅಂಶ ಹೆಚ್ಚಾಗಿರುತ್ತದೆ. ಇದರ ಗೊಬ್ಬರಕ್ಕೆ ತಮಿಳುನಾಡು ಮತ್ತು ಕೇರಳದಲ್ಲಿ ಭಾರಿ ಬೇಡಿಕೆ ಇದೆ. ಇಲ್ಲಿನ ಗೊಬ್ಬರಕ್ಕೆ ಜನರು ಮುಗಿಬೀಳುತ್ತಾರೆ. ಇದನ್ನೇ ಬಂಡವಾಳವಾಗಿಸಿಕೊಂಡ ಕೆಲ ತಮಿಳುನಾಡಿನ ಪ್ರಭಾವಿಗಳು ಗೊಬ್ಬರಕ್ಕಾಗಿ ಮಲೆಮಹದೇಶ್ವರ ಅರಣ್ಯವನ್ನು ತಮ್ಮ ದನಗಳನ್ನು ಮೇಯಿಸುವ ತಾಣವನ್ನಾಗಿಸಿಕೊಂಡಿದ್ದಾರೆ. ತಮಿಳುನಾಡಿನ ಪ್ರಭಾವಿಗಳು ಅಲ್ಲಿಯೇ ಉಳಿತು ಇಲ್ಲಿಂದ ಲಕ್ಷಾಂತರ ರುಪಾಯಿ ಹಣವನ್ನು ಶ್ರಮವಿಲ್ಲದೆ ಗಳಿಸುತ್ತಾರೆ.
ಹೀಗೆ ಮೇಯಲು ಬರುವ ದನಗಳನ್ನು ಕೆಲವೊಮ್ಮೆ ಹುಲಿಗಳು ಬೇಟೆ ಆಡುತ್ತವೆ. ಇದರಿಂದ ಸ್ಥಳೀಯರು ಬೇಸತ್ತು ಹುಲಿಗಳನ್ನು ಕೊಲ್ಲುವ ಹೀನ ಕೃತ್ಯಕ್ಕೆ ಕೈ ಹಾಕುತ್ತಾರೆ ಎನ್ನುವ ಆರೋಪವಿದೆ. ಹುಲಿಗಳು ಕೊಂದ ದನಗಳ ಮಾಂಸಕ್ಕೆ ವಿಷ ಹಾಕುತ್ತಾರೆ. ಅವುಗಳನ್ನು ಭಕ್ಷಿಸಲು ಮತ್ತೆ ಬರುವ ಹುಲಿಗಳು ವಿಷ ಹಾಕಿದ್ದ ದನಗಳನ್ನು ತಿಂದು ಸಾವನ್ನಪ್ಪುತ್ತವೆ.
ಮಾದಪ್ಪನ ಕಾಡು ಹುಲಿಗಳ ಬೀಡು:
ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗನಾಥಸ್ವಾಮಿ ದೇವಸ್ಧಾನ ಸುತ್ತಲಿನ ಸಂರಕ್ಷಿತ ವನ್ಯಧಾಮದಲ್ಲಿ ಹುಲಿಗಳ ಸಂತತಿ ಹೆಚ್ಚಳವಾಗಿದೆ. ಹಾಗಾಗಿ ಕಳೆದ ಐದಾರು ವರ್ಷಗಳಿಂದಲೂ ಮಲೆಮಹದೇಶ್ವರ ಬೆಟ್ಟವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಸಲು ಪರಿಸರ ಪ್ರೇಮಿಗಳು ಶ್ರಮಿಸುತ್ತಿದ್ದಾರೆ. ಅದರೆ ಸ್ಧಳೀಯ ರಾಜಕಾರಣಿಗಳು ಮತ್ತು ಕೆಲ ಪ್ರಭಾವಿಗಳು ಇದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ಹಿಂದಿನಿಂದಲೂ ತನ್ನದೇ ಆದ ಪ್ರಖ್ಯಾತಿ ಹೊಂದಿರುವ ಮಲೆಮಹದೇಶ್ವರ ಬೆಟ್ಟಕ್ಕೆ ಕಳಂಕಿತ ಅಧಿಕಾರಿಗಳನ್ನು ತಂದು ಕೂರಿಸಿರುವುದು ಹುಲಿಗಳ ಸಾವಿಗೆ ಕಾರಣವಾಗಿದೆ ಎಂಬುದು ಪರಿಸರವಾದಿಗಳ ಗಂಭೀರ ಆರೋಪವಾಗಿದೆ.
ಈ ಘಟನೆಯಲ್ಲಿ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಸಹ ತೀವ್ರವಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಯಾವುದೇ ರೀತಿಯ ಜನಜಾಗೃತಿ ಕೆಲಸವನ್ನು ಅರಣ್ಯ ಸಿಬ್ಬಂದಿ ಮಾಡಿಲ್ಲ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅರಣ್ಯ-ವನ್ಯಜೀವಿ ಸಂರಕ್ಷಣೆ ಸಾಧ್ಯವೇ ಇಲ್ಲ.
ಕರ್ನಾಟಕದ ಕಾಡನ್ನು ನಾಶ ಮಾಡಲು ತಮಿಳುನಾಡಿನ ದನಗಳು ಬಳಸುತ್ತಾರೆ. ಇಲ್ಲಿನ ಸ್ಥಳೀಯ ಜನರನ್ನೇ ಬಳಸಿಕೊಂಡು ದಂಧೆಕೋರರು ಲಕ್ಷಾಂತರ ಹಣ ಮಾಡುತ್ತಿದ್ದಾರೆ. ದನಗಳಿಗೆ ಮೇವು ಸಿಗಲೆಂದು ಬೆಂಕಿ ಹಚ್ಚುವುದು, ವನ್ಯಜೀವಿಗಳ ದಾಳಿಗೆ ಜಾನುವಾರು ಮೃತಪಟ್ಟರೆ ವಿಷ ಹಾಕುವ ಷಡ್ಯಂತ್ರದಿಂದ 5 ಹುಲಿ ಮೃತಪಟ್ಟ ಗುಮಾನಿ ದೊಡ್ಡದಾಗಿ ಕಾಣಿಸಿಕೊಂಡಿದೆ. ಇದರ ಬಗ್ಗೆ ತನಿಖೆ ನಡೆಸಿ ಸ್ಧಳೀಯರಿಗೆ ತೊಂದರೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
-ಪುಣಜನೂರು ದೊರೆಸ್ವಾಮಿ, ಪರಿಸರವಾದಿ, ಚಾ.ನಗರ
ತಮಿಳುನಾಡಿನ ದನಗಳನ್ನು ಮಲೆಮಹದೇಶ್ವರ ವನ್ಯಧಾಮಕ್ಕೆ ತಂದು ಬಿಡುವ ಮೂಲಕ ಸ್ಧಳೀಯರಿಂದ ಮೇಯಿಸುತ್ತಾರೆ ಎಂಬ ಆರೋಪ ಕೇಳಿ ಬಂದಿದೆ. ಇದರ ಬಗ್ಗೆ ತೀವ್ರ ತನಿಖೆ ನಡೆಸಲಾಗುವುದು. ಇದೀಗ ಮೃತಪಟ್ಟ ಹಸು ನಮ್ಮ ರೈತರಿಗೆ ಸೇರಿದ್ದೋ ಅಥವಾ ತಮಿಳುನಾಡಿನ ಭಾಗದ್ದೂ ಎಂಬುಂದು ತನಿಖೆಯಿಂದ ಹೊರಬರಬೇಕಿದೆ.
-ಟಿ.ಹೀರಾಲಾಲ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಚಾಮರಾಜನಗರ.