ಕನ್ನಡಪ್ರಭ ವಾರ್ತೆ, ಚಾಮರಾಜನಗರ
ತಾಲೂಕಿನ ವೆಂಕಟಯ್ಯನಛತ್ರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಆವರಣದಲ್ಲಿ ರಾಷ್ಟ್ರೀಯ ಹಸಿರು ಪಡೆ, ಗ್ರೀನ್ಬರ್ಡ್, ಇಕೋಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ವಿಜ್ಞಾನ ಪ್ರಯೋಗ ಶಾಲೆ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು, ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ಸಮಯಪ್ರಜ್ಞೆ ಅತಿ ಮುಖ್ಯ, ಈ ಸಮಯದಲ್ಲಿ ಸ್ಪಲ್ಪ ಮೈಮರೆತರೂ ಮುಂದಿನ ಭವಿಷ್ಯ ಕಷ್ಟ.ಆದ್ದರಿಂದ ಈ ಹಂತದಲ್ಲಿ ನೀವು ಜಾಗೃತಿಯಿಂದ ಇರಬೇಕು ಎಂದು ಸಲಹೆ ನೀಡಿದರು.ಇದು ಸ್ಪರ್ಧಾತ್ಮಕ ಯುಗ ಚೆನ್ನಾಗಿ ಓದುವುದರ ಜೊತೆ ಕೌಶಲ್ಯ ತರಬೇತಿಗಳು ಮುಖ್ಯ, ಯಾವುದೇ ನೌಕರಿ ಪಡೆಯಬೇಕಾದರೆ ಕೌಶಲ್ಯ ತರಬೇತಿಯು ಮುಖ್ಯ ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಅರಿಯಬೇಕು. ಈಗ ಜಿಲ್ಲೆಯಲ್ಲಿ ವೈದ್ಯಕೀಯ, ಇಂಜಿನಿಯರಿಂಗ್, ಕೃಷಿ ಸೇರಿದಂತೆ ಎಲ್ಲ ತರಹದ ವಿದ್ಯಾಭ್ಯಾಸ ಮಾಡಲು ಅನುಕೂಲತೆ ಇದೆ, ಆದರೆ ಚೆನ್ನಾಗಿ ಓದುವುದರ ಮೂಲಕ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಶಿಕ್ಷಣಕ್ಕೆ ಹೆಚ್ಚು ತೊಡಗಿಸಿಕೊಳ್ಳುವುದರ ಜೊತೆ ಪಠ್ಯೇತರ ಚಟುವಟಿಕೆಗಳನ್ನೂ ತೊಡಗಿಸಿಕೊಂಡು ಜ್ಞಾನಾರ್ಜನೆಗೂ ಹೆಚ್ಚಿನ ಒತ್ತು ಕೊಡಬೇಕು, ತಂದೆ, ತಾಯಿ ಪೋಷಕರು ಸಹ ಮಕ್ಕಳ ವಿದ್ಯಾಭ್ಯಾಕ್ಕೆ ಹೆಚ್ಚಿನ ಪ್ರೋತ್ಸಾಹ ಕೊಡಬೇಕು ಎಂದರು.ವಿದ್ಯಾರ್ಥಿದೆಸೆಯಲ್ಲಿ ಆದಷ್ಟು ಮೊಬೈಲ್ ಬಳಕೆ ಕಡಿಮೆ ಮಾಡಬೇಕು, ಅಗತ್ಯವಿರುವಷ್ಟು ಮಾತ್ರ ಉಪಯೋಗಿಸಬೇಕು, ಅದು ಅತಿಯಾಗಬಾರದು, ಇದಕ್ಕೆ ಸ್ಪಷ್ಟ ಉದಾಹರಣೆ ನಿನ್ನೆ ಮೂವರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿರುವುದೇ ಸಾಕ್ಷಿ ಎಂದರು.
ಶಾಸಕರು ವಿದ್ಯಾರ್ಥಿಗಳೇ ನಡೆಸಿಕೊಟ್ಟ ವಿಜ್ಞಾನ ಪ್ರಯೋಗಶಾಲೆಯಲ್ಲಿ ರಕ್ತದೊತ್ತಡ ಪರೀಕ್ಷಿಸಿಕೊಂಡರು. ಈ ವಿಜ್ಞಾನ ಪ್ರಯೋಗಾಲಯದಲ್ಲಿ ಪವಾಡ ರಹಸ್ಯ ಬಯಲು, ರಂಗೋಲಿ ಮೂಲಕ ವಿಜ್ಞಾನಕ್ಕೆ ಸಂಬಂಧಪಟ್ಟ ಚಿತ್ರಗಳನ್ನು ಬಿಡಿಸುವುದು, ಮೆಹಂದಿ ಮೂಲಕ ವಿಜ್ಞಾನಕ್ಕೆ ಸಂಬಂಧಪಟ್ಟ ಚಿತ್ರಗಳನ್ನು ಬಿಡಿಸಲಾಗಿತ್ತು,ಶಾಸಕರು ಪ್ರಯೋಗಾಲಯ ಉದ್ಘಾಟಿಸಿ, ವೀಕ್ಷಿಸಿ ಮಕ್ಕಳಿಂದ ಇದರ ಬಗ್ಗೆ ಮಾಹಿತಿ ಪಡೆದುಕೊಂಡರು ಈ ಪ್ರಯೋಗಶಾಲೆಯಿಂದ ಮುಂಬರುವ ಪರೀಕ್ಷೆಗೂ ಅನುಕೂಲವಾಗಲಿದೆ ಎಂದು ಪ್ರಾಯೋಜಕರು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಲಾವಣ್ಯ ಮಹೇಶ್, ರೋಟರಿ ಸಿಲ್ಕ್ಸಿಟಿ ಅಧ್ಯಕ್ಷ ಶಮೀತ್ ಕುಮಾರ್ ಬಿಓ ಹನುಮಂತಶೆಟ್ಟಿ, ಎಪಿಎಂಸಿ ಅಧ್ಯಕ್ಷ ಸೋಮೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಬಿಸಿಯೂಟ ಸಹಾಯಕ ನಿರ್ದೇಶಕ ಶ್ರೀನಿವಾಸ್, ಪ್ರಾಂಶುಪಾಲ ಮಹೇಶ್, ಉಪಪ್ರಾಂಶುಪಾಲರಾದ ನಾಗರತ್ನ, ಜ್ಞಾನ ಶಿಕ್ಷಕ ಕಿರಣ್ರಾಜ್, ಮಹದೇವಯ್ಯ, ಎಚ್.ಎಂ ಕೃಷ್ಣಮೂರ್ತಿ, ಮುಖಂಡರಾದ ಜಯಸ್ವಾಮಿ, ರಾಜು, ಶಿಕ್ಷಕ ವರ್ಗ, ಎಸ್ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗು ಸದಸ್ಯರು, ವಿದ್ಯಾರ್ಥಿಗಳು ಇದ್ದರು.