ಧಾರವಾಡ: ಕೃತಕ ಬುದ್ಧಿಮತ್ತೆ ಪ್ರತಿ ನಿತ್ಯದ ಜೀವನದಲ್ಲಿ ಬಳಕೆ ಮಾಡುವ ಸಮಯ ದೂರವಿಲ್ಲ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಂ. ಖಾನ್ ಅಭಿಪ್ರಾಯಪಟ್ಟರು.
ಎಐ ತಂತ್ರಜ್ಞಾನ ಬಳಕೆ ಮಾಡುವಲ್ಲಿ ಕೌಶಲ್ಯ ಮತ್ತು ಸಾಧನಗಳನ್ನು ಯಾವ ರೀತಿಯಾಗಿ ಬಳಸಿಕೊಂಡು ಉಪಯೋಗಿಸಿಬೇಕು ಎಂಬುದನ್ನು ಅರಿಯುವುದು ಬಹಳ ಅವಶ್ಯಕತೆ ಇದೆ. ಎಐ ಬಳಕೆ ಮಾಡುವಲ್ಲಿ ನೈತಿಕ ಅಂಶಗಳನ್ನು ಜವಾಬ್ದಾರಿಯುತವಾಗಿ ಬಳಸುವುದು ಬಹಳ ಅಗತ್ಯ ಎಂದ ಅವರು ಸಮಗ್ರ ಮಾಹಿತಿಯನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಅದನ್ನು ಸಮರ್ಥವಾಗಿ ಮಷೀನ್ ತಂತ್ರಜ್ಞಾನ ಮೂಲಕ ಬಳಕೆ ಮಾಡುವುದೇ ಕೃತಕ ಬುದ್ಧಿಮತ್ತೆಯಾಗಿದೆ ಎಂದು ವಿವರಿಸಿದರು.
ವಿಕಸಿತ ಭಾರತಕ್ಕೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಪೂರಕವಾಗಿದೆ. ಕಲಿಕೆ, ಆಲಿಸುವಿಕೆ, ಸಮಸ್ಯೆಗೆ ಪರಿಹಾರ, ನಿರ್ಧಾರ ತೆಗೆದುಕೊಳ್ಳುವಲ್ಲಿ ಕೃತಕ ಬುದ್ಧಿಮತ್ತೆ ಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಮೊದಲ ಹಂತದಲ್ಲಿ ಬಯೋ ಮೆಟ್ರಿಕ್, ಫೇಸ್ ರೀಡಿಂಗ್ ನಂತರದಲ್ಲಿ ಕೃತಕ ಬುದ್ಧಿಮತ್ತೆ ಮುನ್ನೆಲೆಗೆ ಬರುತ್ತಿದೆ ಕೃತಕ ಬುದ್ಧಿಮತ್ತೆಗೆ ಡೇಟಾ ಬಹಳ ಅಗತ್ಯ ಎಂದರು.ನ್ಯಾರೋ ಎಐ, ಜನರಿಕ್ ಎಐ ಸೇರಿ ಹಲವಾರು ರೀತಿಯ ಎಐ ತಂತ್ರಜ್ಞಾನ ಸೇರಿಸಿ ಮಷಿನ್ ಲರ್ನಿಂಗ್ ಮತ್ತು ಡೀಪ್ ಲರ್ನಿಂಗ್ ತಂತ್ರಜ್ಞಾನ ಮೂಲಕ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡಲಾಗುತ್ತಿದೆ ಎಂದರು.
ಕರ್ನಾಟಕ ವಿಜ್ಞಾನ ಕಾಲೇಜಿನ ಭೂಗೋಳ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಟಿ. ನಾಯಕ ಮಾತನಾಡಿ, ಕೃತಕ ಬುದ್ಧಿಮತ್ತೆಯನ್ನು ಶಿಕ್ಷಣ, ಆಡಳಿತ, ಸಂಶೋಧನೆ, ಕಲಿಕೆ ಸೇರಿದಂತೆ ಎಲ್ಲ ವಲಯಗಳಲ್ಲಿ ಬಳಸಲಾಗುತ್ತಿದೆ. ಆದ್ದರಿಂದ ಎಐ ಅನ್ನು ಹೇಗೆ ಬಳಕೆ ಮಾಡಬೇಕು ಎಂಬ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಕಾರ್ಯಾಗಾರದ ತಾಂತ್ರಿಕ ಗೋಷ್ಠಿಯಲ್ಲಿ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರೊ. ರೋಹಿತ ಕಲಿವಾಳ, ಪ್ರೊ. ಭಾರತಿ.ಕೆ., ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರೊ. ಬೊಸ್ಲೇ ಲೋಬೋ, ಪ್ರೊ. ಎಸ್.ಎಸ್. ಮೋಟೆಬೆನ್ನೂರ, ಕರ್ನಾಟಕ ವಿಜ್ಞಾನ ಕಾಲೇಜಿನ ಸಂಖ್ಯಾಶಾಸ್ತ್ರದ ವಿಭಾಗದ ಪ್ರೊ. ಎಂ.ಎನ್. ಮ್ಯಾಗೇರಿ, ಪ್ರೊ. ವಿ.ಬಿ. ಸಾವಿರಮಠ, ಅವರು ಎಐ ಕುರಿತು ತರಬೇತಿ ನೀಡಿದರು.
ಡಾ. ಎಂ.ಎಲ್. ಉಪ್ಪಾರ, ಡಾ. ನಾರಾಯಣಕರ, ಡಾ. ಕಿರಣ ರೆಡ್ಡಿ, ಡಾ. ತಳವಾರ, ಸೇರಿದಂತೆ ವಿದ್ಯಾರ್ಥಿಗಳು ಪ್ರಾಧ್ಯಾಪಕರು ಹಾಜರಿದ್ದರು.