ಕಾಲ.. ಕಾಲದಿಂದಲೇ ಸರಿಯಾದ ಉತ್ತರ: ಡಿ.ಕೆ.ಶಿವಕುಮಾರ್‌

KannadaprabhaNewsNetwork |  
Published : Feb 15, 2026, 02:30 AM IST
14ಕೆಡಿವಿಜಿ7-ದಾವಣಗೆರೆ ಜಿಲ್ಲೆ ಸೂರಗೊಂಡನಕೊಪ್ಪದಲ್ಲಿ ಶನಿವಾರ ಶ್ರೀ ಸಂತ ಸೇವಾಲಾಲ್‌ರ ಜಯಂತಿಗೆ ಡಿಸಿಎಂ ಡಿ.ಕೆ.ಶಿವಕುಮಾರ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಬಂಜಾರ ಸಮುದಾಯದ ಯುವಕರು ಕೈಯಲ್ಲಿ ಕಪ್ಪು ಬಟ್ಟೆ ಹಿಡಿದು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಪ್ರತಿಭಟಿಸುತ್ತಿರುವುದು. | Kannada Prabha

ಸಾರಾಂಶ

ಕಾಲ.. ಕಾಲ... ಉತ್ತರ ಕೊಡುತ್ತದೆ... ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ತಮ್ಮ ದೆಹಲಿ ಪ್ರವಾಸಕ್ಕೆ ಪ್ರತಿಕ್ರಿಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾಲ.. ಕಾಲ... ಉತ್ತರ ಕೊಡುತ್ತದೆ... ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ತಮ್ಮ ದೆಹಲಿ ಪ್ರವಾಸಕ್ಕೆ ಪ್ರತಿಕ್ರಿಯಿಸಿದ್ದಾರೆ.

ದಾವಣಗೆರೆ ಜಿಲ್ಲೆ ನ್ಯಾಮತಿ ತಾ. ಸೂರಗೊಂಡನಕೊಪ್ಪದಲ್ಲಿ ಶನಿವಾರ ದೆಹಲಿ ಪ್ರವಾಸ ಸಕ್ಸಸ್ಸಾ ಸರ್ ಎಂಬ ಮಾಧ್ಯಮಗಳ ಪ್ರಶ್ನೆಗೆ ಅಷ್ಟೇ ಸಮಾಧಾನದಿಂದ, ಹುಬ್ಬೇರಿಸುತ್ತ ಮಂದಸ್ಮಿತರಾಗಿ ಕಾಲ.. ಕಾಲ.. ಉತ್ತರ ಕೊಡುತ್ತದೆ ಎಂದಷ್ಟೇ ಡಿಕೆಶಿ ಪ್ರತಿಕ್ರಿಯಿಸುತ್ತ ದಿಲ್ಲಿ ಪ್ರವಾಸದಿಂದ ಬಂದ ಬಳಿಕ ತಮ್ಮ ಮೊಗದಲ್ಲಿ ಮೂಡಿರುವ ಖುಷಿಯನ್ನು ಹೊತ್ತೇ ಕಾರನ್ನೇರಿದರು.

ಸೂರಗೊಂಡನಕೊಪ್ಪದಲ್ಲಿ ಕೆಲವರಿಂದ ಕಪ್ಪುಬಟ್ಟೆ ಪ್ರದರ್ಶನದ ಬಗ್ಗೆ ಕಿಡಿಕಾರಿದ ಡಿ.ಕೆ.ಶಿವಕುಮಾರ್‌, ಇದು ರಾಜಕೀಯ ಸಭೆಯಲ್ಲ, ಕಾಂಗ್ರೆಸ್ ಪಕ್ಷದ ಸಭೆಯೂ ಅಲ್ಲ. ಎಲ್ಲಾ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ನ್ಯಾಯ ಕೊಡಿಸಿದೆ. ಪರಿಶಿಷ್ಟ ಜಾತಿಗಳಿಗೆ 6, 6, 5ರಷ್ಟು ಮೀಸಲಾತಿ ಕೊಡಿಸಿದೆ. ಪಾಪ ಬಿಜೆಪಿಯವರಿಗೆ, ರಾಜೀವನಿಗೆ ತೆದುಕೊಳ್ಳುವುದಕ್ಕೆ ಆಗುತ್ತಿಲ್ಲ ಎಂದು ಕುಟುಕಿದರು.

ತಾವೆಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತೇವೋ ಎಂದು ಬಿಜೆಪಿಯವರು ನೂರಾರು ಜನರನ್ನು ಸೇರಿಸಿ, ಹೀಗೆ ಮಾಡುತ್ತಾರೆ. ನನಗೆ ಇಲ್ಲಿಗೆ ಬರುವ ಮುಂಚೆಯೇ ಇದೆಲ್ಲವೂ ಗೊತ್ತಿತ್ತು. ಲಂಬಾಣಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿದ್ದು ಕಾಂಗ್ರೆಸ್ ಪಕ್ಷ. ಲಂಬಾಣಿ ಸಮುದಾಯದ ಶೇ.90 ಜನ ಒಳ್ಳೆಯವರೇ. ಇಂತಹ ಶೇ.10 ಪರ್ಸೆಂಟ್ ಜನ ಇರುತ್ತಾರೆ ಎಂದು ಬಿಜೆಪಿಯ ರಾಜೀವ್ ಇತರರ ಬಗ್ಗೆ ವ್ಯಂಗ್ಯವಾಡಿದರು.

ಡಿಕೆಶಿ ವಿರುದ್ಧ ಕಪ್ಪುಬಟ್ಟೆ ಪ್ರದರ್ಶನ, ಪ್ರತಿಭಟನೆ

ಸೂರಗೊಂಡನಕೊಪ್ಪದಲ್ಲಿ ಶ್ರೀ ಸಂತ ಸೇವಾಲಾಲ್‌ರ ಜಯಂತ್ಯೋತ್ಸವಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಕಪ್ಪುಬಟ್ಟೆ ಹಿಡಿದು ಯುವಕರು ಆಕ್ರೋಶ ಹೊರಹಾಕಿದರು.

ಪರಿಶಿಷ್ಟ ಜಾತಿಯ ಒಳ ಮೀಸಲಾತಿಯಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಿದೆಯೆಂದು ಆರೋಪಿಸಿ ಡಿಸಿಎಂ ಡಿ.ಕೆ.ಶಿವಕುಮಾರ ವೇದಿಕೆಗೆ ಬರುತ್ತಿದ್ದಂತೆ ಕಪ್ಪುಬಟ್ಟೆ ಹಿಡಿದ ಯುವಕರು ಸುಮಾರು 30 ನಿಮಿಷ ಕಾಲ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಕಪ್ಪುಬಟ್ಟೆ ಹಿಡಿದು ಪ್ರತಿಭಟಿಸುತ್ತಿದ್ದ ಯುವಕರನ್ನು ಸಮಾಧಾನಪಡಿಸಲು ಪೊಲೀಸರು ಹರಸಾಹಸಪಟ್ಟರು. ಕಡೆಗೆ ಸಮಾಜದ ಯುವ ಮುಖಂಡ, ಬಿಜೆಪಿ ಮಾಜಿ ಶಾಸಕ ಪಿ.ರಾಜೀವ್ ಪ್ರತಿಭಟನಾನಿರತ ಯುವಕರಿಗೆ ಸಮಾಧಾನಪಡಿಸಿ, ಮನವಿ ಮಾಡಿದ ನಂತರ ಘೋಷಣೆ ಕೂಗುವುದು, ಪ್ರತಿಭಟಿಸುವುದನ್ನು ಯುವಕರು ನಿಲ್ಲಿಸಿದರು. ಯಾವುದೇ ಯುವಕರನ್ನೂ ಬಂಧಿಸದಂತೆ ಪೊಲೀಸ್ ಅಧಿಕಾರಿಗಳಿಗೆ ಪಿ.ರಾಜೀವ್ ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲಾ ಮಕ್ಕಳಿಂದ ರಸ್ತೆ ಕಾಮಗಾರಿ ಕೆಲಸ...!
ಮಾದಿಗ ಮಹಾಸಭಾದ ತಾಲೂಕಾಧ್ಯಕ್ಷರಾಗಿ ಕತಿಕ್ಯಾತನಹಳ್ಳಿ ನರಸಿಂಹಪ್ಪ ಆಯ್ಕೆ