ಅಶೋಕೆಯಲ್ಲಿ ಅನ್ನಬ್ರಹ್ಮ ಚಾತುರ್ಮಾಸ್ಯ
ವಾಹನ ಚಲಿಸಲು ಇಂಧನ ಶಕ್ತಿ ಹಾಗೂ ಚಾಲನಾ ನಿಯಂತ್ರಣ ಬೇಕು. ಹಾಗೆಯೇ, ದೇಹವೆಂಬ ವಾಹನವು ಚಲಿಸಲು ಮನಸ್ಸು ಮತ್ತು ಓಜಸ್ಸುಗಳೆಂಬ ಶಕ್ತಿ ಅಗತ್ಯ ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.
ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಶನಿವಾರದ ಧರ್ಮಸಭೆಯಲ್ಲಿ ಅನ್ನಂ ಬ್ರಹ್ಮ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಮನಸ್ಸು ನಮ್ಮ ನಿಯಂತ್ರಣ ಶಕ್ತಿಯಾಗಿದ್ದು, ಅನ್ನದ ಸೂಕ್ಷ್ಮಾಂಶದಿಂದ ಮನಸ್ಸು ನಿರ್ಮಿತವಾಗಿದೆ ಮತ್ತು ದೇಹದ ಶಕ್ತಿ ದ್ರವವಾದ ಓಜಸ್ಸು ಕೂಡ ಅನ್ನದಿಂದಲೇ ಪೋಷಿಸಲ್ಪಟ್ಟಿದೆ. ಹೀಗೆ ದೇಹದ ನಿಯಂತ್ರಣಾ ಶಕ್ತಿ ಹಾಗೂ ಪೋಷಕ ಶಕ್ತಿಗಳೆರಡೂ ಆಹಾರವನ್ನೇ ಅವಲಂಬಿಸಿದೆ ಎಂದು ಆಹಾರದ ಮಹತ್ವ ವಿವರಿಸಿದರು.ಉಪವಾಸದಿಂದ ದೇಹದ ಧಾತುಗಳು ಕ್ಷೀಣವಾಗುತ್ತದೆ ಎನ್ನಲಾಗುತ್ತದೆ. ಆದರೆ ಆತ್ಮಸಾಧನೆಯ ಕಾರಣದಿಂದ ಉಪವಾಸವಾದರೆ, ಓಜಸ್ಸು ದೇಹದಲ್ಲಿ ವೃದ್ಧಿಸುವುದರಿಂದ ದೇಹಕ್ಕೆ ಹಾನಿಯಾಗುವುದಿಲ್ಲ. ಹಾಗಾಗಿ ಆತ್ಮಸಾಧನೆಯ ಜತೆಗೆ ಉಪವಾಸ ಮಾಡಿದಾಗ ಊಟವಿಲ್ಲದೆಯೂ ಜೀವಿಸಬಹುದು ಎಂದು ಹೇಳಿದರು.
ಜೀವನಕ್ಕೆ ಬೇಕಾದ ಎಲ್ಲವನ್ನೂ ಇಂದಿನ ವ್ಯವಸ್ಥೆ ಹುಡುಕಿ ಹುಡುಕಿ ನಾಶ ಮಾಡುವ ಕಾರ್ಯ ಮಾಡುತ್ತಿದ್ದು, ಒಂದೆಡೆ ಗೋಸಂತತಿ ಕ್ಷೀಣಿಸುತ್ತಿದ್ದರೆ, ತಳಿ ಅಭಿವೃದ್ಧಿಯ ಹೆಸರಿನಲ್ಲಿ ಪಾರಂಪರಿಕ ಭತ್ತ ಹಾಗೂ ಆಹಾರ ಬೆಳೆಗಳ ವಿನಾಶ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಂಗಳೂರು ಹವ್ಯಕ ಮಂಡಲದ ಬಾಯಾರು, ಕೇಪು, ಕನ್ಯಾನ, ಮುಡಿಪು, ಕುಂದಾಪುರ, ಕೋಳ್ಯೂರು ವಲಯಗಳ ಪರವಾಗಿ ಮೂಡಂಬಿಕಾನ ಸುಬ್ರಹ್ಮಣ್ಯ ಭಟ್ ಕುಟುಂಬದವರು ಗುರುಭಿಕ್ಷಾಸೇವೆ ಸಮರ್ಪಿಸಿದರು. ಶ್ರೀಮಠದ ಮಾಧ್ಯಮ ಶ್ರೀಸಂಯೋಜಕ ಸಂದೇಶ ತಲಕಾಲಕೊಪ್ಪ, ರಮೇಶ ಭಟ್ ಸರವು, ಉಮೇಶ ಭಟ್ ಕೊಣಮ್ಮೆ, ಮಲ್ಲಿಕಾ ಭಟ್, ಸುಮಾ ರಮೇಶ್, ಕೃಷ್ಣಪ್ರಮೋದ, ದಿನಪ್ರಧಾನರಾದ ಶ್ರೀಕಾಂತ ಕಾಳಮಂಜಿ ದಂಪತಿಗಳು ಉಪಸ್ಥಿತರಿದ್ದರು.