ಕೇಂದ್ರ ರೈಲ್ವೆ ಇಲಾಖೆಯಲ್ಲಿ ಟಿಸಿ ನೌಕರಿ ಕೊಡಿಸುವುದಾಗಿ ಲಕ್ಷಾಂತರ ವಂಚನೆ : ಮೂವರ ಬಂಧನ

KannadaprabhaNewsNetwork |  
Published : Dec 21, 2024, 01:15 AM ISTUpdated : Dec 21, 2024, 07:45 AM IST
kulppa | Kannada Prabha

ಸಾರಾಂಶ

ಕೇಂದ್ರ ರೈಲ್ವೆ ಇಲಾಖೆಯಲ್ಲಿ ಟಿಕೆಟ್ ಸಂಗ್ರಹಕಾರ (ಟಿ.ಸಿ) ಹುದ್ದೆ ಕೊಡಿಸುವುದಾಗಿ ನಂಬಿಸಿ ಉದ್ಯೋಗಾಂಕ್ಷಿಗಳಿಂದ 80 ಲಕ್ಷ ರು. ವಸೂಲಿ ಮಾಡಿ ನಕಲಿ ನೇಮಕಾತಿ ಆದೇಶ ವಿತರಿಸಿ ವಂಚಿಸಿದ ಮೂವರು ಸಿಸಿಬಿ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

 ಬೆಂಗಳೂರು : ಕೇಂದ್ರ ರೈಲ್ವೆ ಇಲಾಖೆಯಲ್ಲಿ ಟಿಕೆಟ್ ಸಂಗ್ರಹಕಾರ (ಟಿ.ಸಿ) ಹುದ್ದೆ ಕೊಡಿಸುವುದಾಗಿ ನಂಬಿಸಿ ಉದ್ಯೋಗಾಂಕ್ಷಿಗಳಿಂದ 80 ಲಕ್ಷ ರು. ವಸೂಲಿ ಮಾಡಿ ನಕಲಿ ನೇಮಕಾತಿ ಆದೇಶ ವಿತರಿಸಿ ವಂಚಿಸಿದ ಮೂವರು ಸಿಸಿಬಿ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ಕಲಬುರಗಿಯ ವಿದ್ಯಾನಗರದ ಲಕ್ಷ್ಮಿಕಾಂತ್ ಹೊಸಮನಿ, ಅಫ್ಜಲಪುರ ತಾಲೂಕಿನ ಉಡಚಣ ಗ್ರಾಮದ ಕುಲಪ್ಪ ಸಿಂಗೇ ಹಾಗೂ ಉತ್ತರಹಳ್ಳಿಯ ಮುರಳಿ ಬಂಧಿತರು. ಇದೇ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ವಿಜಯಪುರ ಜಿಲ್ಲೆಯ ಭೀಮರಾವ್, ಬಸು ಕಾಸಪ್ಪ ಮಯೂರ, ಶ್ರೀಧರ್, ಸಂತೋಷ ನಾಯಕ್ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ. ವಿಜಯಪುರ ಜಿಲ್ಲೆಯ ಆಲಮೇಲದ ಹುಸನಪ್ಪ ಮಾಡ್ಯಾಳ ಅವರು ಸಿಸಿಬಿ ಠಾಣೆಗೆ ನೀಡಿದ ದೂರಿನ ಅನ್ವಯ ತನಿಖೆಗಿಳಿದ ಸಿಸಿಬಿ ಇನ್ಸ್‌ಪೆಕ್ಟರ್ ದೇವೇಂದ್ರಪ್ಪ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ನಗರದ ಮೌರ್ಯ ಹೋಟೆಲ್ ಜಂಕ್ಷನ್ ಮತ್ತು ಹೊಸಕೆರೆ ಹಳ್ಳಿ ಬಸ್ ನಿಲ್ದಾಣದ ಬಳಿ ಆರೋಪಿಗಳನ್ನು ಬಂಧಿಸಿದೆ.

ನಿರುದ್ಯೋಗಿಗಳೇ ಟಾರ್ಗೆಟ್‌:

ಕಲಬುರಗಿಯ ಲಕ್ಷ್ಮೀಕಾಂತ್ ಎಲೆಕ್ಟ್ರಿಕ್ ಗುತ್ತಿಗೆದಾರನಾಗಿದ್ದು, ತನಗೆ ಸರ್ಕಾರದ ಮಟ್ಟದಲ್ಲಿ ಒಳ್ಳೆಯ ಸಂಪರ್ಕವಿದೆ ಎಂದು ಹೇಳಿಕೊಂಡು ಓಡಾಡುತ್ತಿದ್ದ. ನಿರುದ್ಯೋಗಿಗಳಿಗೆ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಟಿಸಿ ಹುದ್ದೆಗಳನ್ನು ಕೊಡಿಸುತ್ತೇನೆಂದು ಹೇಳಿ ಅವರ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಹಣದ ಬೇಡಿಕೆ ಇಟ್ಟಿದ್ದ. ಇದಕ್ಕೊಪ್ಪಿದ ಉದ್ಯೋಗಾಂಕ್ಷಿಗಳಲ್ಲಿ ತಲಾ ಒಬ್ಬರಿಂದ 16 ರಿಂದ 20 ಲಕ್ಷ ರು. ಹಣವನ್ನು ವಸೂಲಿ ಮಾಡಿ ಲಕ್ಷ್ಮೀಕಾಂತ್ ಗ್ಯಾಂಗ್ ಹಂಚಿಕೊಂಡಿತ್ತು.

ನಕಲಿ ನೇಮಕಾತಿ ಆದೇಶ: ತರಬೇತಿಯಲ್ಲಿ ಕೃತ್ಯ ಬಯಲು

2022-23ರ ಸಾಲಿನಲ್ಲಿ ಈ ವಂಚನೆ ನಡೆದಿದೆ. ಬೆಂಗಳೂರು ಹಾಗೂ ವಿಜಯಪುರದಲ್ಲಿ ಆರೋಪಿಗಳಿಗೆ ನಗದು ಮಾತ್ರವಲ್ಲದೆ ಆನ್‌ಲೈನ್‌ ಮೂಲಕ ಸಹ ಹಣ ಸಂದಾಯವಾಗಿತ್ತು. ಹಣ ಪಡೆದ ಬಳಿಕ ಕೆಲವರಿಗೆ ನಕಲಿ ನೇಮಕಾತಿ ಆದೇಶವನ್ನು ಲಕ್ಷ್ಮೀಕಾಂತ್ ಗ್ಯಾಂಗ್ ವಿತರಿಸಿತ್ತು. ರೈಲ್ವೆಯಲ್ಲಿ ಉದ್ಯೋಗ ಸಿಕ್ಕಿದ ಖುಷಿಯಲ್ಲಿ ಸಂತ್ರಸ್ತರಿಗೆ ಮುಂಬೈ ಹಾಗೂ ಉತ್ತರಪ್ರದೇಶದ ಕಾನ್ಪುರಕ್ಕೆ ತರಬೇತಿ ಸಲುವಾಗಿ ಆರೋಪಿಗಳು ಕಳುಹಿಸಿದ್ದರು. ಆದರೆ ಅಲ್ಲಿಗೆ ತೆರಳಿದ ಅಭ್ಯರ್ಥಿಗಳ ದಾಖಲೆಗಳನ್ನು ರೈಲ್ವೆ ಅಧಿಕಾರಿಗಳು ಪರಿಶೀಲಿಸಿದಾಗ ನಕಲಿ ನೇಮಕಾತಿ ಆದೇಶ ಎಂಬುದು ಗೊತ್ತಾಗಿದೆ. ಕೊನೆಗೆ ತಾವು ಮೋಸ ಹೋಗಿರುವುದಾಗಿ ಅರಿತು ಪೊಲೀಸರಿಗೆ ದೂರು ಕೊಟ್ಟಿದ್ದರು.

ಕಿರುತೆರೆ ಸಹಾಯಕ ನಿರ್ದೇಶಕ ಮುರಳಿ

ಬಂಧನಕ್ಕೆ ಒಳಗಾದ ಆರೋಪಿ ಮುರಳಿ ತಮಿಳು ಕಿರುತೆರೆಯಲ್ಲಿ ಸಹಾಯಕ ನಿರ್ದೇಶಕನಾಗಿದ್ದು, ಅಫಜಲ್‌ಪುರದ ಸಿಂಗೇ ಕೃಷಿ ಮಾಡಿಕೊಂಡಿದ್ದ. ಹಣದಾಸೆಗೆ ಈ ವಂಚನೆ ಕೃತ್ಯದಲ್ಲಿ ಇಬ್ಬರು ಪಾಲ್ಗೊಂಡಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆನಂದಪುರ : ಮರದ ರಂಬೆ ಮರ್ಮಾಂಗಕ್ಕೆ ತಗುಲಿ ವ್ಯಕ್ತಿ ಸಾವು
ಅಪಘಾತದಿಂದ ಕೆಲ್ಸ ಕಳ್ಕೊಂಡ ಮಹಿಳೆ ನೆರವಿಗೆ ಕೋರ್ಟ್‌