ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ನ್ಯಾಯ, ನೀತಿ ಹಾಗೂ ಧರ್ಮದ ದಾರಿಯಲ್ಲಿ ಸಾಗುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಭದ್ರಾವತಿ
ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ನ್ಯಾಯ, ನೀತಿ ಹಾಗೂ ಧರ್ಮದ ದಾರಿಯಲ್ಲಿ ಸಾಗುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಕರೆ ನೀಡಿದರು.
ಜಗದ್ಗುರುಗಳು ಸೋಮವಾರ ಹಳೇನಗರದ ತಾಲೂಕು ಕಚೇರಿ ರಸ್ತೆಯ, ವೀರಶೈವ ಸಭಾಭವನ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಜಗದ್ಗುರು ರಂಭಾಪುರೀಶ ನಿವಾಸ ಲೋಕಾರ್ಪಣೆಗೊಳಿಸಿ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಬದುಕು ಬಲಗೊಳ್ಳಲು ಆಧ್ಯಾತ್ಮದ ಅರಿವು ಮತ್ತು ನಿರಂತರ ಸಾಧನೆ ಇರಬೇಕು. ಪ್ರಯತ್ನದಿಂದ ಮಾತ್ರ ಒಳ್ಳೆಯ ಕಾರ್ಯಗಳು ನಡೆಯಲು ಸಾಧ್ಯ. ಜೀವನ ಸುಖ-ದುಃಖಗಳ ಸಮ್ಮಿಶ್ರಣ. ಸಂಪಾದಿಸಿದ ಆಸ್ತಿ, ಗಳಿಸಿದ ಸಂಪತ್ತು ಶಾಶ್ವತವಲ್ಲ. ಸುಖ, ಶಾಂತಿ, ಸಮಾಧಾನಗಳೇ ನಿಜವಾದ ಸಂಪತ್ತು ಎಂದರು.
ಆಡುವ ಮಾತು ಮತ್ತು ಬದುಕುವ ರೀತಿಯಲ್ಲಿ ದೇವರನ್ನು ಕಾಣಬೇಕಾಗಿದೆ ಎಂದರು.
ಆತ್ಮ ವಿಶ್ವಾಸ, ನಿಶ್ಚಿತ ಗುರಿ ಮತ್ತು ಸಂಯಮ ಜೀವನ ಯಶಸ್ಸಿಗೆ ಅಡಿಪಾಯ. ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮ ಸಿದ್ಧಾಂತದಲ್ಲಿ ಕ್ರಿಯಾಶೀಲ ಬದುಕು ಮತ್ತು ಉದಾತ್ತ ಜೀವನ ಮೌಲ್ಯಗಳನ್ನು ಪರಿಪಾಲಿಸಿಕೊಂಡು ನಡೆದರೆ ಜೀವನದಲ್ಲಿ ಯಶಸ್ಸು ಸಾಧ್ಯವೆಂದು ಬೋಧಿಸಿದ್ದಾರೆ ಎಂದರು.
ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಚಿನ್ನವಿಲ್ಲದೇ ದಿನ ಕಳೆಯಬಹುದು. ಆದರೆ ಅನ್ನ ಇಲ್ಲದೇ ದಿನ ಕಳೆಯಲು ಸಾಧ್ಯವಿಲ್ಲ. ಸತ್ಯ, ಶುದ್ಧ ಕಾಯಕ ಮತ್ತು ಪ್ರಾಮಾಣಿಕ ಪ್ರಯತ್ನದಿಂದ ಬದುಕು ಉಜ್ವಲಗೊಳ್ಳುತ್ತದೆ ಎಂದರು.
ಹಳೇನಗರ ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್. ಮಹೇಶಕುಮಾರ್, ಕಾರ್ಯದರ್ಶಿ ವಾಗೀಶ ಕೋಠಿ, ಸಚ್ಚಿದಾನಂದ, ಟಿ.ಎಸ್ ಆನಂದಕುಮಾರ್, ಜಮೀನ್ದಾರ್ ಕೂಡ್ಲಿಗೆರೆ ಹಾಲೇಶ್, ಜಯಣ್ಣ, ಎಡೆಹಳ್ಳಿ ಮಹೇಶ್ವರಪ್ಪ, ಮಹೇಶ್ವರಪ್ಪಗೌಡ್ರು, ಹುಬ್ಬಳ್ಳಿಯ ಸಿದ್ಧು ಪಾಟೀಲ, ಅಜ್ಜಯ್ಯಸ್ವಾಮಿ, ಎಚ್.ಆರ್. ಅಶೋಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಕುಲಪತಿಗಳಾದ ಬೆಳಗಾಲಪೇಟೆ ಸಿದ್ಧಲಿಂಗ ಶಾಸ್ತ್ರಿಗಳು ಮತ್ತು ತಂಡದವರಿಂದ ಶಾಸ್ತ್ರೋಕ್ತವಾಗಿ ಧಾರ್ಮಿಕ ಆಚರಣೆಗಳು ಜರುಗಿದವು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.