ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕಳೆದ ಎಂಟು ತಿಂಗಳಿಂದ ನಿರಂತರವಾಗಿ ಹೊರ ಬರುತ್ತಿರುವ ಕಲ್ಕಟ್ಟೆ ಗಾನ ದೀವಿಗೆಯು ಚಿಕ್ಕಮಗಳೂರಿನ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಬಗ್ಗೆ ಕುತೂಹಲ ಮೂಡಿಸುತ್ತಿದೆ. ವಿದೇಶಗಳಲ್ಲಿನ ಚಿಕ್ಕಮಗಳೂರಿಗರು ಕೂಡ ತಮ್ಮೂರಿನ ಪ್ರತಿ ದೇವಾಲಯ ಗೀತೆಗಳನ್ನು ಕೇಳಿ, ತಮ್ಮ ಬಾಲ್ಯದ ದಿನಗಳ ಧಾರ್ಮಿಕ ಸಂಭ್ರಮಗಳನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು ಕ್ಯಾಲಿಫೋರ್ನಿಯಾದ ಕನ್ನಡ ಸಂಘದ ಸಂಚಾಲಕ ರಘು ಹಾಲೂರು ಹೇಳಿದರು.ನಗರದ ಕಲ್ಕಟ್ಟೆ ಪುಸ್ತಕದ ಮನೆ, ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಶ್ರೀ ಗುರುಕೃಪಾ ಸಂಗೀತ ಸೇವಾ ಟ್ರಸ್ಟ್, ದೀವಿಗೆ ಬಳಗ, ಸೂರಂಕಣದವರ ನೇಕಾರ ಬೀದಿಯಲ್ಲಿನ ಶ್ರೀ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಭಕ್ತಿಗೀತೆ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ಆರಂಭಿಸುವುದು ವಿಶೇಷವಲ್ಲ. ಉತ್ಸಾಹವಿದ್ದಾಗ ಇದು ನಡೆಯುತ್ತದೆ. ಆದರೆ, ಅದನ್ನು ನಿರಂತರವಾಗಿ ನಡೆಸಿಕೊಂಡು ಬರುವುದು ಸಾಧನೆ. ನಮ್ಮ ಪಾಡಿಗೆ ನಾವೇನೇ ಮಾಡುತ್ತಿದ್ದರೂ ಟೀಕೆ ಟಿಪ್ಪಣಿಗಳು ಬರುತ್ತಲೇ ಇರುತ್ತವೆ. ಇವುಗಳನ್ನು ಮೀರಿ ಮುಂದುವರೆಯಲು ನಮ್ಮ ಕಾರ್ಯಗಳ ಬಗ್ಗೆ ನಮಗೆ ಶ್ರದ್ಧೆ, ನಿಷ್ಠೆ ಬೇಕು. ಇದು ಕಲ್ಕಟ್ಟೆ ಗಾನ ದೀವಿಗೆ ಸರಣಿಯಲ್ಲಿ ಎದ್ದು ಕಾಣುತ್ತಿದೆ ಎಂದು ಹೇಳಿದರು.ಹಿನ್ನೆಲೆ ಸಂಗೀತ ನೀಡಿದ ಕೆ.ಎನ್.ನಾಗಭೂಷಣ್ ಮಾತನಾಡಿ, ಕಲ್ಕಟ್ಟೆಯವರು ನೀಡುವ ಸಾಹಿತ್ಯ ಮತ್ತು ರಾಗ ಸಂಯೋಜನೆಯು ಹಿನ್ನೆಲೆ ಸಂಗೀತಕ್ಕೆ ಸ್ಫೂರ್ತಿ ನೀಡುತ್ತದೆ. ಸಾಹಿತ್ಯವರಿತು ಹಿನ್ನೆಲೆ ಸಂಗೀತ ನೀಡಿದಾಗ ಮಾತ್ರ ಅದು ಜನಮನದಲ್ಲಿ ನಿಲ್ಲುತ್ತದೆ ಎಂದರು.
ನಿರ್ಮಾಪಕಿ ರೇಖಾ ನಾಗರಾಜರಾವ್ ದಂಪತಿ ಹಾಗೂ ಗಾಯಕಿ ಅನುಷ ಅಂಚನ್, ಕೆ.ಎನ್.ನಾಗಭೂಷಣ್, ಗಾಯತ್ರಿ ನಾಗಭೂಷಣ್, ರಘು ಹಾಲೂರು ಅವರನ್ನು ರಾಮಾಶೀರ್ವಾದ ನೀಡಿ ಗೌರವಿಸಲಾಯಿತು.ಶ್ರೀ ಕೋದಂಡರಾಮ ಸ್ವಾಮಿ ಸಂಘದ ಅಧ್ಯಕ್ಷರಾದ ರಾಮಣ್ಣ, ಕಾರ್ಯದರ್ಶಿ ವೆಂಕಟೇಶ್, ಅರ್ಚಕರಾದ ಪ್ರಸನ್ನ ಭಟ್, ತೊಗರಿಹಂಕಲ್ನ ಶಿಕ್ಷಕಿ ಸುನೀತಾ, ಸಂಘದ ಪದಾಧಿಕಾರಿಗಳು, ಸದಸ್ಯರು, ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ನೇಕಾರ ಸಂಘದ ವಾಸುದೇವ್ ನಿರೂಪಿಸಿ, ವಂದಿಸಿದರು.