ಬಸವಕಲ್ಯಾಣ: ಕಂಪ್ಯೂಟರ್ ಶಿಕ್ಷಣ ಹೊಸ ಕ್ರಾಂತಿಗೆ ನಾಂದಿಯಾಗಿದೆ. ಮಾಹಿತಿ ಮತ್ತು ಪ್ರಸಾರ ಕ್ಷೇತ್ರದಲ್ಲಿ ಗಣನೀಯ ಬದಲಾವಣೆ ತಂದಿದೆ ಎಂದು ಬಿಡಿಪಿಸಿ ನಿರ್ದೇಶಕಿ ಪ್ರೊ. ವಿಜಯಲಕ್ಷ್ಮಿ ಗಡ್ಡೆ ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನದ ದೊಡ್ಡ ಭಾಗವಾದ ಕಂಪ್ಯೂಟರ್ ಶಿಕ್ಷಣ ಹೊಸ ಹೊಸ ತಿಳುವಳಿಕೆ ನೀಡುತ್ತದೆ. ಜಗತ್ತನ್ನು ಸರಳವಾಗಿ ಸಂಪರ್ಕಿಸುವಂತೆ ಮಾಡಿದೆ ಎಂದರು.
ಬಿಡಿಪಿಸಿ ನಿರ್ದೇಶಕ ಮಲ್ಲಯ್ಯ ಹಿರೇಮಠ ಮಾತನಾಡಿ, ಆಧುನಿಕ ಕಾಲದ ಹೊಸ ಜಗತ್ತು ಮಾಹಿತಿ ತಂತ್ರಜ್ಞಾನದಿಂದ ನಿರ್ಮಾಣವಾಗಿದೆ. ಕಂಪ್ಯೂಟರ್ ಶಿಕ್ಷಣ ಈ ಕಾಲಕ್ಕೆ ಅನಿವಾರ್ಯ ಮತ್ತು ಅಗತ್ಯ ಎಂದರು.ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ವೈಜ್ಞಾನಿಕ ಸಂಶೋಧನೆಗಳು, ಹೊಸ ಆವಿಷ್ಕಾರಗಳು ಈಗಿರುವ ಲೋಕವನ್ನು ತಂತ್ರಜ್ಞಾನದ ಜಗತ್ತಾಗಿ ರೂಪಿಸುತ್ತಿದೆ. ಶಿಕ್ಷಣ, ವೈದ್ಯಕೀಯ, ಆಡಳಿತ ಸೇರಿ ಮನುಷ್ಯ ಬದುಕಿನ ಬಹು ಭಾಗ ಗಣಕಯಂತ್ರಗಳೆ ಆವರಿಸಿಕೊಂಡಿವೆ. ಅದರ ಬಳಕೆಯ ವಿವೇಕ, ವಿವೇಚನೆಯ ಅರಿವು ಎಲ್ಲಕ್ಕಿಂತ ಮೊದಲು ಇರಬೇಕಾದ ಅಗತ್ಯವಿದೆ ಎಂದರು.
ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಕೋಶಾಧ್ಯಕ್ಷ ರಾಜಕುಮಾರ ಹೊಳಕುಂದೆ, ಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ನಿರ್ದೇಶಕರಾದ ವೀರಣ್ಣ ಹಲಶೆಟ್ಟೆ, ಸುಭಾಷ ಹೊಳಕುಂದೆ , ಅಶೋಕ ನಾಗರಾಳೆ, ಮೊದಲಾದವರು ಇದ್ದರು. ಸನತ್ ರೆಡ್ಡಿ ಸ್ವಾಗತಿಸಿ, ಸಂಗೀತಾ ಮಹಾಗಾವೆ ನಿರೂಪಿಸಿ, ಡಾ. ಶಾಂತಲಾ ಪಾಟೀಲ ವಂದಿಸಿದರು.