ದಾವಣಗೆರೆ: ದೈವಜ್ಞ ಸಮಾಜ ಸಂಘದಿಂದ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ, ಹಾಗೂ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿಗಳ ದೈವಜ್ಞ ದರ್ಶನ ಕಾರ್ಯಕ್ರಮವನ್ನು ಜನವರಿ 1ರಂದು ಇಲ್ಲಿನ ದೈವಜ್ಞ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ದೈವಜ್ಞ ಸಮಾಜ ಸಂಘದ ಅಧ್ಯಕ್ಷ ಪ್ರಶಾಂತ್ ವಿ.ವೆರ್ಣೇಕರ್ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಾದ್ಯಂತ 90ಕ್ಕೂ ಅಧಿಕ ಕಡೆಗಳಲ್ಲಿ ದೈವಜ್ಞ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹರಿಹರ ಕಾರ್ಯಕ್ರಮ ಮುಗಿಸಿಕೊಂಡು ದಾವಣಗೆರೆಗೆ ಆಗಮಿಸಲಿರುವ ಉಭಯ ಜಗದ್ಗುರುಗಳನ್ನು ಜ.1ರಂದು ಸಂಜೆ 4.30ಕ್ಕೆ ಅಶೋಕ ಚಿತ್ರಮಂದಿರ ಸಮೀಪ ಬರಮಾಡಿಕೊಳ್ಳಲಾಗುವುದು. ಅಲ್ಲಿಂದ ಮಂಡಿಪೇಟೆ ಮಾರ್ಗವಾಗಿ ದೈವಜ್ಞ ಕಲ್ಯಾಣ ಮಂಟಪಕ್ಕೆ ಸುಮಾರು 500 ಮಹಿಳೆಯರ ಪೂರ್ಣಕುಂಭ ಮೆರವಣಿಗೆಯೊಂದಿಗೆ ಶ್ರೀಗಳನ್ನು ಕರೆತರಲಾಗುವುದು ಎಂದರು.ಸಂಜೆ 6 ಗಂಟೆಗೆ ದೈವಜ್ಞ ಕಲ್ಯಾಣ ಮಂಟಪದಲ್ಲಿ ಸಭಾ ಕಾರ್ಯಕ್ರಮ, ಶ್ರೀಗಳ ಪಾದುಕಾ ಪೂಜೆ, ಗುರುವಂದನೆ, ಫಲಪುಷ್ಪ ಸಮರ್ಪಣೆ, ಶ್ರೀಗಳಿಂದ ಆಶೀರ್ವಚನ, ಫಲ ಮಂತ್ರಾಕ್ಷತೆ, ಮಹಾ ಪ್ರಸಾದ ಇರುತ್ತದೆ. ದೈವಜ್ಞ ದರ್ಶನದ ಸೇವಾಕರ್ತರು, ಸಮಾಜದ ಮುಖಂಡರು ಉಪಸ್ಥಿತರಿರುವರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀಗಳ ಕೃಪಾಶೀರ್ವಾದ ಪಡೆಯಬೇಕೆಂದು ಕೋರಿದರು.ಸುದ್ದಿಗೋಷ್ಠಿಯಲ್ಲಿ ಪಾಂಡುರಂಗ ಎಸ್.ಭಟ್ ಆವಾಜಿ, ವಾಸುದೇವ ರಾಯ್ಕರ್, ರಾಘವೇಂದ್ರ ಡಿ.ರೇವಣಕರ್, ಪಿ.ಬಿ.ರಾಜೀವ್ ವೆರ್ಣೇಕರ್ ಇದ್ದರು.