ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ನರಸಿಂಹಸ್ವಾಮಿ ದೇವರ ಬ್ರಹ್ಮರಥೋತ್ಸವ ಏ. 29ರಂದು ನಡೆಯಲಿದೆ.ರಥೋತ್ಸವದ ಅಂಗವಾಗಿ ಏ. 22 ರಿಂದಲೇ ಶ್ರೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ. ಏ. 29ರಂದು 12 ರಿಂದ 1 ಗಂಟೆಯೊಳಗೆ ಸಲ್ಲುವ ಶ್ರೀ ಕ್ರೋಧಿ ನಾಮ ಸಂವತ್ಸರದ ಅಭಿಜಿನ್ ಲಗ್ನದಲ್ಲಿ ಶ್ರೀ ನರಸಿಂಹಸ್ವಾಮಿ, ಸೌಮ್ಯನಾಯಕಿ ಹಾಗೂ ರಂಗನಾಯಕಿ ಉತ್ಸವಮೂರ್ತಿಗಳನ್ನು ಪುಷ್ಪಾಲಂಕಾರ ರಥದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ರಥೋತ್ಸವ ಜರುಗಲಿದೆ.
ರಥೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಶ್ರೀ ನರಸಿಂಹ ಸ್ವಾಮಿ ಸೇವಾ ಸಂಘದ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಮದ್ದೂರಿನ ಕದಂಬ ನದಿ ತೀರದ ಅರ್ಜುನ ಕ್ಷೇತ್ರದಲ್ಲಿ ಇರುವ ಶ್ರೀ ನರಸಿಂಹಸ್ವಾಮಿ ದೇವಾಲಯ ಒಂದು ಇತಿಹಾಸವನ್ನು ಹೊಂದಿದೆ. ಹಿಂದೆ ದ್ವಾಪರಯುಗದ ಅಂತ್ಯದಲ್ಲಿ ಅರ್ಜುನನು ಶ್ರೀಕೃಷ್ಣನನ್ನು ಕುರಿತು ನರಸಿಂಹನ ಅವತಾರ ನೋಡಬೇಕು ಎಂದು ಅಪೇಕ್ಷೆ ಪಟ್ಟಾಗ, ಶ್ರೀ ಕೃಷ್ಣನು ಆ ಅವತಾರ ತೋರಿಸಲು ಸಾಧ್ಯವಿಲ್ಲ ಎಂದು ತಿಳಿಸಿ ಶಿಲಾ ರೂಪದಲ್ಲಿ ಬ್ರಹ್ಮ ದೇವರ ಮುಖಾಂತರ ನರಸಿಂಹಸ್ವಾಮಿ ವಿಗ್ರಹ ಪ್ರತಿಷ್ಠಾಪಿಸಿದ್ದನು. ಇದರಿಂದಾಗಿ ಮದ್ದೂರಿಗೆ ಅರ್ಜುನ ಪುರಿ ಕ್ಷೇತ್ರ ಎಂದು ಹೆಸರು ಬರಲು ಕಾರಣವಾಯಿತು.ಶ್ರೀ ನರಸಿಂಹಸ್ವಾಮಿ ದೇವರಿಗೆ 8 ಕೈಗಳು, ಮೂರು ಕಣ್ಣುಗಳು ಇದ್ದು. ಎಂಟು ಕೈಗಳ ಪೈಕಿ ಎರಡು ಕೈಗಳಿಂದ ತೊಡೆಯ ಮೇಲೆ ಮಲಗಿಸಿಕೊಂಡಿರುವ ಹಿರಣ್ಯಕಶಿಪುವಿನ ಕರುಳನ್ನು ಬಗೆಯುತ್ತಲೂ, ಮತ್ತೆರಡು ಕೈಗಳಲ್ಲಿ ಈ ಕರುಳನ್ನು ಮಾಲೆಯಾಗಿ ಹಾಕಿಕೊಳ್ಳುತ್ತಲೂ, ಇನ್ನೆರಡು ಕೈಗಳಲ್ಲಿ ಪಾಶಾಕುಶ ಗಳನ್ನು ಹೊಂದಿದ್ದು. ಉಳಿದ ಎರಡು ಕೈಗಳಲ್ಲಿ ಶಂಕಚಕ್ರದಾರಿಯಾಗಿ ಅವತರಿಸಿರುವುದನ್ನು ಕಾಣಬಹುದಾಗಿದೆ. ಶ್ರೀ ನರಸಿಂಹ ಸ್ವಾಮಿ ಮೂಲ ವಿಗ್ರಹದ ಎಡ ಭಾಗದಲ್ಲಿ ಗರುಡ ಮತ್ತು ಬಲಭಾಗದಲ್ಲಿ ಭಕ್ತ ಪ್ರಹ್ಲಾದನ ಮೂರ್ತಿ ಇದೆ. ವಿಗ್ರಹದ ಮೂರನೇ ಕಣ್ಣು ಹಿರಣ್ಯಕಶಿಪುವಿನ ಸಂಹಾರ ಕಾಲದಲ್ಲಿ ಉದ್ಭವಾಯಿತು ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ.