ಶಿರಹಟ್ಟಿ: ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕು ಬಂಜಾರಾ ಸಮಿತಿ ಸಂಯುಕ್ತಾಶ್ರಯದಲ್ಲಿ ಫೆ. 22ರಂದು ಸಂತ ಸೇವಾಲಾಲ್ ಮಹಾರಾಜರ ೨೮೬ನೇ ಜಯಂತಿಯನ್ನು ಅತ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಗುವುದು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು. ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೇವಾಲಾಲ್ ಜಯಂತಿ ಆಚರಣೆ ಕುರಿತು ಪತ್ರಿಕೆಗಳನ್ನು ಬಿಡುಗಡೆ ಗೊಳಿಸಿ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಬೆಳಗ್ಗೆ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸಂತ ಶ್ರೀ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಗುವುದು. ನಂತರ ಸಕಲ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ನಡೆಸಿ ಜ. ಫಕೀರೇಶ್ವರ ಮಠದಲ್ಲಿ ಸಮಾರೋಪಗೊಳ್ಳಲಿದೆ ಎಂದರು. ನಂತರ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಜ. ಫಕೀರ ಸಿದ್ದರಾಮ ಶ್ರೀಗಳು ಸಾನಿಧ್ಯ ವಹಿಸಲಿದ್ದು, ಜ. ಫಕೀರ ದಿಂಗಾಲೇಶ್ವರ ಶ್ರೀಗಳು ಉಪಸ್ಥಿತರಿರುವರು. ವಿಜಯ ಮಹಾಂತೇಶ್ವರ ಮಠದ ಜ. ಸಿದ್ದಲಿಂಗ ಶ್ರೀ, ವರವಿ ಮೌನೇಶ್ವರ ಮಠದ ಮೌನೇಶ್ವರ ಶ್ರೀ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹಾಜರಿರುವರು ಎಂದು ತಿಳಿಸಿದರು.
ಬಿಗ್ಬಾಸ್ ಸೀಸನ್ ವಿನ್ನರ್ ಹನುಮಂತ ಲಮಾಣಿ ಹಾಗೂ ಸರಿಗಮಪ ಖ್ಯಾತಿಯ ರಮೇಶ ಲಮಾಣಿ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪ್ರೌಢಶಾಲಾ ಶಿಕ್ಷಕ ವೆಂಕಟೇಶ ಅರ್ಕಸಾಲಿ ಉಪನ್ಯಾಸ ನೀಡಲಿದ್ದು, ಟೋಪಣ್ಣ ಲಮಾಣಿ ಪ್ರಾಸ್ಥಾವಿಕ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು. ಜಂಟಿ ತಾಲೂಕುಗಳ ೩೨ ತಾಂಡಾಗಳ ನಾಯಕ, ಡಾವ್, ಕಾರಬಾರಿ ಅವರನ್ನು ಸಹ ಆಹ್ವಾನಿಸಲಾಗುವುದು. ಕಾರ್ಯಕ್ರಮದಲ್ಲಿ ಯಾವುದೇ ಗೊಂದಲಗಳಿಲ್ಲ. ಸಮಾಜದ ಎಲ್ಲ ಮುಖಂಡರ ಸಹಕಾರದೊಂದಿಗೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ ಎಂದು ತಿಳಿಸಿದರು. ಮುಖಂಡರಾದ ಜಾನು ಲಮಾಣಿ, ರಾಮಣ್ಣ ಲಮಾಣಿ, ದೇವಪ್ಪ ಲಮಾಣಿ, ಚೋಕಲಪ್ಪ ಲಮಾಣಿ, ಪುಟ್ಟಪ್ಪ ಲಮಾಣಿ, ಪುಂಡಲಿಕ ಲಮಾಣಿ, ಈರಣ್ಣ ಚವ್ಹಾಣ, ಶಿವಾನಂದ ಲಮಾಣಿ, ಥಾವರೆಪ್ಪ ಲಮಾಣಿ, ಸೋಮರಡ್ಡಿ ಲಮಾಣಿ ಸೇರಿ ಅನೇಕರು ಇದ್ದರು.