ಇಂದು ಕಕ್ಕಡ ಮಾಸ 18ರ ಆಚರಣೆ ಸಂಭ್ರಮ

KannadaprabhaNewsNetwork |  
Published : Aug 03, 2024, 12:39 AM IST
 ಮದ್ದಿನ ಸೊಪ್ಪು. ಮದ್ದು ಪಾಯಸ. ಬಗೆ ಬಗೆಯ ಖಾದ್ಯ ಪದಾರ್ಥಗಳ. | Kannada Prabha

ಸಾರಾಂಶ

ಈ ತಿಂಗಳಲ್ಲಿ ಮದ್ದು ಸೊಪ್ಪಿನಿಂದ ತಯಾರಿಸಿದ ತಿನಿಸುಗಳಿಗೆ ವಿಶೇಷ ಬೇಡಿಕೆ. ಏಕೆಂದರೆ ಈ ತಿಂಗಳಲ್ಲಿ ಮದ್ದು ಸೊಪ್ಪು ಎನ್ನುವ ಸಸ್ಯದಲ್ಲಿ 18 ತರಹದ ಔಷಧ ತುಂಬಿರುತ್ತದೆ ಎಂಬ ನಂಬಿಕೆ.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕೊಡಗು ಜಿಲ್ಲೆಯಲ್ಲಿ ಕಕ್ಕಡ ತಿಂಗಳ 18ನೇ ದಿನ ವಿಶೇಷ ಹಬ್ಬದ ದಿನ. ಈ ಹಬ್ಬವು ಈ ಬಾರಿ ಕೊಡಗಿನಲ್ಲಿ ಸಾಂಪ್ರದಾಯಿಕವಾಗಿ ಆ.3ರಂದು ಆಚರಿಸಲಾಗುತ್ತಿದೆ.

ಕಕ್ಕಡ ಪದಿನೆಟ್ ಹಾಗೂ ತುಳು ಭಾಷಿಕರ ಆಟಿಯನ್ನು ಸಂಪ್ರದಾಯ ಬದ್ಧವಾಗಿ ಆಚರಿಸಲಾಗುತ್ತದೆ. ಕನ್ನಡದಲ್ಲಿ ಬಳಕೆಯಲ್ಲಿರುವ ಆಷಾಢ ಎಂಬ ಪದವೇ ಕೊಡವರ ಕಕ್ಕಡ ಹಾಗೂ ತುಳು ಭಾಷಿಕರ ಆಟಿ ಆಚರಣೆಯಾಗಿದೆ.

ಈ ತಿಂಗಳಲ್ಲಿ ಮದ್ದು ಸೊಪ್ಪಿನಿಂದ ತಯಾರಿಸಿದ ತಿನಿಸುಗಳಿಗೆ ವಿಶೇಷ ಬೇಡಿಕೆ. ಏಕೆಂದರೆ ಈ ತಿಂಗಳಲ್ಲಿ ಮದ್ದು ಸೊಪ್ಪು ಎನ್ನುವ ಸಸ್ಯದಲ್ಲಿ 18 ತರಹದ ಔಷಧ ತುಂಬಿರುತ್ತದೆ ಎಂಬ ನಂಬಿಕೆ. ಕಾಡಿನಲ್ಲಿ, ಬರೆ ಅಂಚುಗಳಲ್ಲಿ ಬೆಳೆಯುವ ಈ ಔಷಧೀಯ ಗಿಡ ಕಕ್ಕಡದ 18ನೇ ದಿನದಂದು ಸುವಾಸನೆಯನ್ನು ಬೀರುತ್ತದೆ.

* ಮದ್ದು ಸೊಪ್ಪು ತಿನಿಸು

ಈ ಸೊಪ್ಪನ್ನು ಕೊಯ್ದು ತಂದು ತೊಳೆದು ಪಾತ್ರೆಯಲ್ಲಿ ನೀರನ್ನು ಸೇರಿಸಿ ಬೇಯಿಸಿದರೆ ಸಿಗುವ ಕಡುನೇರಳೆ, ನೀಲಿ ಬಣ್ಣಯುಕ್ತ ನೀರಿನಿಂದ ಅಕ್ಕಿಪಾಯಸ, ಹಿಟ್ಟು ಹೀಗೆ ಬಗೆ ಬಗೆಯ ಖಾದ್ಯ ಪದಾರ್ಥಗಳನ್ನು ತಯಾರಿಸುತ್ತಾರೆ. ಪಾಯಸಕ್ಕೆ ತೆಂಗಿನ ಕಾಯಿ ಮತ್ತು ತುಪ್ಪವನ್ನು ಹಾಕಿ, ಜೇನು ಸೇರಿಸಿ ತಿನ್ನುವದು ರೂಢಿ. ಇದರ ಮೂಲ ಉದ್ದೇಶ ಸಿಹಿಯೊಂದಿಗೆ ದೇಹದ ಉಷ್ಣಾಂಶವನ್ನು ಹೆಚ್ಚಿಸಿ ಚಳಿಯಿಂದ ರಕ್ಷಿಸುವುದಾಗಿದೆ. ಪಾಯಸ ಸೇವಿಸಿ ಒಂದು ಗಂಟೆಯ ನಂತರ ಮೂತ್ರ ವಿಸರ್ಜಿಸಿದರೆ ಆ ಮೂತ್ರದ ಬಣ್ಣ ಕಡುನೇರಳೆ ಬಣ್ಣದಿಂದ ಕೂಡಿರುತ್ತದೆ.

ಆಟಿ ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಬಿರುಸಿನ ಮಳೆ, ಚಳಿ, ಗಾಳಿಗಳಿಂದ ಕೂಡಿರುವ ಹವಮಾನದಲ್ಲಿ ಮಾನವನ ದೇಹದ ಉಷ್ಣತೆಯ ಸಮತೋಲಕ್ಕಾಗಿ ಏಡಿ, ಮರಕೆಸ, ಕಣಿಲೆ, ಹಣಬೆ ಈ ಎಲ್ಲ ಪದಾರ್ಥಗಳನ್ನು ಸೇವಿಸಲಾಗುತ್ತದೆ. ಈ ಎಲ್ಲ ಪದಾರ್ಥಗಳು ಮಾನವನ ದೇಹದ ಉಷ್ಣಾಂಶ ಹೆಚ್ಚಿಸಲು ಸಹಾಯಕವಾಗುವ ತಿನಿಸುಗಳಾಗಿವೆ. ಹಿಂದಿನ ಕಾಲದ ಹಿರಿಯರು ಯಾವ ತಿನಿಸುಗಳನ್ನು, ಪದಾರ್ಥಗಳನ್ನು ತಯಾರಿಸಿದರೂ ಪೌಷ್ಟಿಕಾಂಶಗಳ ಹಾಗೂ ದೇಹಕ್ಕೆ ಚೈತನ್ಯ ನೀಡುವಂತಹ ವಸ್ತುಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದುದರ ಪರಿಣಾಮವಾಗಿ ಆ ಕಾಲದ ಜನರು ಹೆಚ್ಚು ದೃಢಕಾಯರಾಗಿಯೂ, ಆರೋಗ್ಯವಂತರಾಗಿಯೂ ಇರುತ್ತಿದ್ದರು.

ಈ ಆಚರಣೆಯ ಅಂಗವಾಗಿ ಇತ್ತೀಚಿಗೆ ವಿವಿಧ ಜನಾಂಗದವರು ತಿಂಗಳ ಒಂದು ದಿನದಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ ಎಲ್ಲರೂ ಒಟ್ಟುಗೂಡಿ ಹಬ್ಬದಂತೆ ಆಚರಿಸುತ್ತಾರೆ. ಈ ಹಬ್ಬದಲ್ಲಿ ವಿಶೇಷ ತಿನಿಸುಗಳ ಪ್ರದರ್ಶನ, ಸ್ಪರ್ಧೆ ಇರುತ್ತದೆ. ಎಲ್ಲವೂ ಮಳೆಗಾಲದಲ್ಲಿ ಲಭ್ಯವಿರುವ ವಸ್ತುಗಳಿಂದ ತಯಾರಿಸಿದ ಖಾದ್ಯಗಳೇ ಆಗಿರುತ್ತವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ : ಲಕ್ಷ್ಮೀ
ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!