ಇಂದು ಬನ್ನಿಗೋಳ ಹೊರಗೈ ಆಂಜನೇಯನ ಜಾತ್ರೆ

KannadaprabhaNewsNetwork | Published : Apr 12, 2025 12:46 AM

ಜಾತ್ರೆಯಲ್ಲಿ ಡೊಳ್ಳು, ನಂದಿಕೋಲು, ಹಲಗೆ ಬಡಿಯುವುದು ನೋಡುಗರ ಮೈಜುಮ್ಮೆನ್ನುವಂತೆ ಮಾಡುತ್ತದೆ

ಹಗರಿಬೊಮ್ಮನಹಳ್ಳಿ: ತಾಲೂಕಿನ ಬನ್ನಿಗೋಳ ಗ್ರಾಮದಲ್ಲಿ ಪ್ರತಿ ವರ್ಷ ದವನದ ಹುಣ್ಣಿಮೆಯ (ಏ. 12ರಂದು) ದಿನದಂದು ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗುತ್ತದೆ.

ಈ ಜಾತ್ರೆ ಬನ್ನಿಗೋಳ ಸುತ್ತಮುತ್ತಲ ಗ್ರಾಮಗಳ ಜಾತ್ರೆಯೂ ಹೌದು. ಪಕ್ಕದ ಗ್ರಾಮಗಳಾದ ತಂಬ್ರಹಳ್ಳಿ, ಬಸರಕೋಡು, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಕೊಪ್ಪಳ, ಗಂಗಾವತಿ, ಗದಗ, ಹುಬ್ಬಳ್ಳಿ ಹೀಗೆ ಹತ್ತಾರು ಊರುಗಳಿಂದ ಜನರು ಈ ಜಾತ್ರಾ ಮಹೋತ್ಸವಕ್ಕೆ ಆಗಮಿಸಿರುತ್ತಾರೆ. ಜಾತ್ರೆಯಲ್ಲಿ ಡೊಳ್ಳು, ನಂದಿಕೋಲು, ಹಲಗೆ ಬಡಿಯುವುದು ನೋಡುಗರ ಮೈಜುಮ್ಮೆನ್ನುವಂತೆ ಮಾಡುತ್ತದೆ. ಸಂಸ್ಕೃತಿ, ಸಂಪ್ರದಾಯಗಳ ಕುರಿತು ಶ್ರೀಗಳಿಂದ ವಿಶೇಷ ಪ್ರವಚನ ಜತೆಗೆ ರಂಗ ಕಲಾವಿದರಿಂದ ಜನಪದ ಕಲೆ ಅನಾವರಣಗೊಳಿಸಲು ಭವ್ಯವಾದ ವೇದಿಕೆ ನಿರ್ಮಾಣ ಮಾಡಿ ಮನೋರಂಜನೆ ನೀಡಲಾಗುತ್ತದೆ. ದೇವರ ಗುಡಿ ಜತೆಗೆ ಗ್ರಾಮದ ಮುಖ್ಯಬೀದಿಗಳು ದೀಪಾಲಂಕಾರಗಳೊಂದಿಗೆ ನೋಡುಗರನ್ನು ರೋಮಾಂಚನಗೊಳಿಸುತ್ತದೆ. ರೈತರು ಎತ್ತುಗಳನ್ನು ಶೃಂಗಾರ ಮಾಡಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ. ಬೇರೆ ಕಡೆಯಿಂದ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿರುತ್ತದೆ. ಭಕ್ತಾದಿಗಳು ತಮ್ಮ ಇಷ್ಟಾರ್ಥ ನೆರವೇರಿಸಿಕೊಳ್ಳಲು ಹಾಗೂ ದೇವರ ಮೇಲಿನ ಭಕ್ತಿಯಿಂದ ದೀಡ್‌ ನಮಸ್ಕಾರ ಹಾಕುವ ಮೂಲಕ ತಮ್ಮ ಹರಕೆ ತೀರಿಸುತ್ತಾರೆ. ಹೀಗೆ ಬನ್ನಿಗೋಳ ಹೊರಗೈ ಆಂಜನೇಯನ ಜಾತ್ರಾ ಸಂಭ್ರಮ ಸಡಗರದೊಂದಿಗೆ ವಿಶೇಷವಾಗಿರುತ್ತದೆ.

ಊರಿನ ದೈವಸ್ಥರು ಎಲ್ಲ ಸಮುದಾಯದವರು ಪಕ್ಷಾತೀತವಾಗಿ ಜಾತ್ರೆ ಸಂಭ್ರಮದಲ್ಲಿ ತೊಡಗಿರುತ್ತಾರೆ. ಮಹಾರಥ ಐದು ದಿನದ ಮುಂಚೆಯೇ ಹೊರಗಡೆ ತಂದು ಅದನ್ನು ತಯಾರು ಮಾಡುವ (ಕಟ್ಟುವ) ಸಂಪ್ರದಾಯ ಇದೆ. ಬನ್ನಿಗೋಳ ಹೊರಗೈ ಆಂಜನೇಯ ತಮ್ಮ ಬೇಡಿಕೆಗಳನ್ನು ಈಡೇರಿಸುತ್ತಾನೆ ಎನ್ನುವ ಬಲವಾದ ನಂಬಿಕೆ ಭಕ್ತರಲ್ಲಿ ಇದೆ. ಈ ಜಾತ್ರೆಯ ಮೊದಲ ದಿನ ಉಚ್ಚಯ್ಯ ಎನ್ನುವ ದೇವರನ್ನು ಪೂಜಿಸಿ ಮೆರವಣಿಗೆ ಮಾಡುವ ಮೂಲಕ ಆಚರಣೆ ಮಾಡಲಾಗುತ್ತದೆ. ಎರಡನೆಯ ದಿನ ಆಂಜನೇಯ ಸ್ವಾಮಿಯ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗುತ್ತದೆ.

ಈ ರಥೋತ್ಸವಕ್ಕೂ ಮುಂಚೆ ಆಂಜನೇಯ ಸ್ವಾಮಿಯ ಪಟಾಕಿಯನ್ನು ಎಲ್ಲರ ಸಮ್ಮುಖದಲ್ಲಿ ಹರಾಜು ಕೂಗಲಾಗುತ್ತದೆ. ಗ್ರಾಮದ ವಾಲ್ಮೀಕಿ ಸಮುದಾಯದವರು ಮೂರು ದಿನಗಳ ಕಾಲ ಉಪವಾಸವಿದ್ದು, ಉತ್ಸವ ಮೂರ್ತಿ, ಮಹಾರಥೋತ್ಸವ, ಬ್ಯಾಟಿಗಿಡ ಉತ್ಸವ, ಕರಿಬೇಟಿ ಉತ್ಸವವನ್ನು ಅತ್ಯಂತ ಶಾಸ್ತ್ರೋಕ್ತವಾಗಿ ನೆರವೇರಿಸುತ್ತಾರೆ. ಎರಡನೆಯ ದಿನ ಬ್ಯಾಟಿಗಿಡದ ನಂತರ ರಾತ್ರಿ ೧೨:೩೦ಕ್ಕೆ ಅಗ್ನಿ ಹಾಯುವ ಕಾರ್ಯಕ್ರಮ ಆಂಜನೇಯನ ಪೂಜಾರಿ ಪೂಜಾರ ಉಮೇಶಪ್ಪ ಎಂಬುವವರು ಅಗ್ನಿಯಲ್ಲಿ ನಡೆಯುವ ಮೂಲಕ ನೆರವೇರಿಸುತ್ತಾರೆ. ಇದೇ ಸಂದರ್ಭದಲ್ಲಿ ಪೂಜಾರಿ ಹೇಳಿಕೆ ನುಡಿಯುತ್ತಾರೆ. ಈ ಹೇಳಿಕೆಯನ್ನು ಸುತ್ತಮುತ್ತಲಿನ ಗ್ರಾಮದವರು ಇಡೀ ವರ್ಷ ಆಚರಣೆ ಮಾಡುತ್ತಾರೆ. ಮತ್ತೊಂದು ವಿಶೇಷತೆ ಏನೆಂದರೆ ಮಕ್ಕಳಿಲ್ಲದವರು ಮಕ್ಕಳ ಭಾಗ್ಯ ಕರುಣಿಸೆಂದು ಬೇಡಿಕೊಂಡಾಗ, ಅವರಿಗೆ ಉಡಿ ತುಂಬುವುದು ಜತೆಗೆ ಹಾಲನ್ನು ಅವರಿಗೆ ಕುಡಿಸುತ್ತಾರೆ. ಈ ಎರಡು ಕಾರ್ಯಗಳ ನಂತರ ಒಂದು ವರ್ಷದಲ್ಲಿ ಮಕ್ಕಳ ಫಲ ದೊರೆಯುತ್ತದೆ ಎಂಬ ಬಲವಾದ ನಂಬಿಕೆ ಈ ಗ್ರಾಮಸ್ಥರದ್ದಾಗಿದೆ. ಆನಂತರ ನೀರುಗೊಂಡ ಎನ್ನುವ ಕಾರ್ಯಕ್ರಮ ಆಚರಣೆ ಮಾಡುತ್ತಾರೆ. ಇದನ್ನು ಗಡಾದ ಪಾಂಡಪ್ಪ ಎನ್ನುವ ವ್ಯಕ್ತಿ ನೀರಿನಲ್ಲಿ ಹಾರುವುದರ ಮೂಲಕ ಮೇಲೆ ಕಟ್ಟಿರುವ ತೆಂಗಿನ ಕಾಯಿ ಹಿಡಿದೆನೆಂದು ಎಲ್ಲರಿಗೂ ತೋರಿಸುವುದರ ಮೂಲಕ ಜಯಭೇರಿ ಬಾರಿಸುತ್ತಾರೆ.

ಬನ್ನಿಗೋಳ ಗ್ರಾಮದ ಆಂಜನೇಯ ಸ್ವಾಮಿ ಇತಿಹಾಸ:

ಬನ್ನಿಗೋಳದ ಆಂಜನೇಯ ಸ್ವಾಮಿಯನ್ನು ವಿಜಯನಗರ ಸಾಮ್ರಾಜ್ಯದ ರಾಜಗುರು ವ್ಯಾಸರಾಯರು ಪ್ರತಿಷ್ಠಾಪನೆ ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ವ್ಯಾಸರಾಯರು ತಮ್ಮ ತಪ ಶಕ್ತಿಯಿಂದ ಯುಗ ಯುಗಗಳ ಹಿಂದಕ್ಕೆ ಹೋದಾಗ ತಾವು ಕುಳಿತ ಸ್ಥಳದಲ್ಲಿ ತ್ರೇತಾಯುಗದಲ್ಲಿ ಪ್ರಭು ಶ್ರೀರಾಮ ಹಾಗೂ ಹನುಮಂತ ಭೇಟಿಯಾದ ಸ್ಥಳವಾಗಿತ್ತು. ಹಾಗಾಗಿ ವ್ಯಾಸರಾಯರು ೧೦೧ ಆಂಜನೇಯನ ಮೂರ್ತಿಗಳನ್ನು ತುಂಗಭದ್ರಾ ನದಿಯ ದಂಡೆಯ ಮೇಲೆ ಸ್ಥಾಪನೆ ಮಾಡಲು ನಿರ್ಧಾರ ಮಾಡುತ್ತಾರೆ. ಅದರಂತೆ ಮೊದಲು ಹಂಪಿಯ ಚಕ್ರತೀರ್ಥ ಆಂಜನೇಯನ ಸ್ಥಾಪನೆ ಮಾಡುತ್ತಾರೆ. ೧೦೧ ಆಂಜನೇಯನ ಮೂರ್ತಿಗಳಲ್ಲಿ ತುಂಗಭದ್ರಾ ನದಿಯ ದಡದ ಮೇಲೆ ಇರುವ ಬನ್ನಿಗೋಳ ಗ್ರಾಮದ ಆಂಜನೇಯ ಸ್ವಾಮಿ ಕೂಡ ಒಂದು. ಮತ್ತೊಂದು ವಿಶೇಷವೆಂದರೆ ಪ್ರತಿವರ್ಷ ವಿಜಯನಗರ ಸಾಮ್ರಾಜ್ಯದ ಆರಾಧ್ಯ ದೈವ ವಿರೂಪಾಕ್ಷನ ರಥೋತ್ಸವದಂದೆ ಬನ್ನಿಗೋಳ ಆಂಜನೇಯ ಸ್ವಾಮಿಯ ರಥೋತ್ಸವ ನಡೆಯುತ್ತದೆ.

ಬನ್ನಿಗೋಳ ಹೊರಗೈ ಆಂಜನೇಯ ಸ್ವಾಮಿ ಒಂದು ಅದ್ಭುತ ಶಕ್ತಿ. ಎಲ್ಲ ಭಕ್ತರ ಇಷ್ಠಾರ್ಥಗಳನ್ನು ಸಿದ್ಧಿಸುತ್ತಾನೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸ್ಥಾಪನೆಯಾದ ಬನ್ನಿಗೋಳ ಹೊರಗೈ ಆಂಜನೇಯ ಭಕ್ತರ ಭಾಗ್ಯವಿಧಾತ. ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ ಗ್ರಾಮದಲ್ಲಿ ಸಾಮರಸ್ಯ ನೆಲೆಸಿದ್ದಾನೆ ಎಂದು ಡಾ. ಅಂಜಿನಪ್ಪ ಗಡಾದ್ ಬನ್ನಿಗೋಳ ತಿಳಿಸಿದ್ದಾರೆ.

ಸರ್ವ ಜನಾಂಗದ ಶಾಂತಿಯ ತೋಟ ಎಂಬ ಮಾತಿನಂತೆ ಎಲ್ಲ ಜನ ಸಮುದಾಯದವರು ಒಟ್ಟಿಗೆ ಸೇರಿ ಯಾವುದೇ ಪಕ್ಷಪಾತ ಮಾಡದೆ ವಿಜೃಂಭಣೆಯಿಂದ ಬನ್ನಿಗೋಳ ಗ್ರಾಮದ ಹೊರಗೈ ಆಂಜನೇಯ ಸ್ವಾಮಿ ಜಾತ್ರೆಯನ್ನು ಅತ್ಯಂತ ಸಡಗರದಿಂದ ಆಚರಿಸುತ್ತೇವೆ ಎಂದು ಹ್ಯಾಟಿ ಆನಂದರೆಡ್ಡಿ ಹೇಳಿದರು.