ಪವಾಡ ಪುರುಷ, ಮಹಾನ್ ಸನ್ಯಾಸಿ ಎನಿಸಿಕೊಂಡ ತಾಲೂಕಿನ ದೋಟಿಹಾಳದ ಶುಖಮುನಿ ಸ್ವಾಮಿಗಳ 86ನೇ ಆರಾಧನಾ ಮಹೋತ್ಸವದ ನಿಮಿತ್ತ ವಿಶೇಷ ಪೂಜೆ ಪುನಸ್ಕಾರದ ಕಾರ್ಯಕ್ರಮಗಳು ಸೆ.3ರಂದು ನಡೆಯಲಿವೆ.
ರಾತ್ರಿ ಪಲ್ಲಕ್ಕಿ ಉತ್ಸವ
ಕನ್ನಡಪ್ರಭ ವಾರ್ತೆ ಕುಷ್ಟಗಿ
ಪವಾಡ ಪುರುಷ, ಮಹಾನ್ ಸನ್ಯಾಸಿ ಎನಿಸಿಕೊಂಡ ತಾಲೂಕಿನ ದೋಟಿಹಾಳದ ಶುಖಮುನಿ ಸ್ವಾಮಿಗಳ 86ನೇ ಆರಾಧನಾ ಮಹೋತ್ಸವದ ನಿಮಿತ್ತ ವಿಶೇಷ ಪೂಜೆ ಪುನಸ್ಕಾರದ ಕಾರ್ಯಕ್ರಮಗಳು ಸೆ.3ರಂದು ನಡೆಯಲಿವೆ.
ಬೆಳಗ್ಗೆ ಅವಧೂತ ಶುಖಮುನಿ ಸ್ವಾಮಿಗಳ ಗದ್ದುಗೆ ಹಾಗೂ ಮೂರ್ತಿಗೆ ವಿಶೇಷ ಪೂಜೆಮ ಪುನಸ್ಕಾರಗಳು ಹಾಗೂ ಭಕ್ತರ ಹರಕೆ, ದೀರ್ಘ ದಂಡ ನಮಸ್ಕಾರ, ಜವಳ ಕಾರ್ಯಕ್ರಮಗಳು ಸೇರಿದಂತೆ ಅನೇಕ ಧಾರ್ಮಿಕ ವಿಧಿ ವಿಧಾನಗಳು ಜರುಗಲಿವೆ.
ರಾತ್ರಿ ಪಲ್ಲಕ್ಕಿ ಉತ್ಸವ:
ತಾಲೂಕಿನ ದೋಟಿಹಾಳ ಶುಖಮುನಿ ಸ್ವಾಮಿಗಳ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ವಿಶೇಷ. ಪಲ್ಲಕ್ಕಿಯಲ್ಲಿರುವ ತೊಟ್ಟಿಲಿನಲ್ಲಿ ಅವಧೂತ ಶುಖಮುನಿ ಸ್ವಾಮಿಗಳವರ ಭಾವಚಿತ್ರ ಇಟ್ಟುಕೊಂಡು ದೋಟಿಹಾಳ ಹಾಗೂ ಕೇಸೂರು ಅವಳಿ ಗ್ರಾಮಗಳಲ್ಲಿ ವಾದ್ಯಮೇಳದೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ನಡೆಯಲಿದೆ. ಈ ಪಲ್ಲಕ್ಕಿ ಉತ್ಸವದಲ್ಲಿ ಸಾವಿರಾರು ಜನರು ಭಾಗವಹಿಸಿ ಯಶ್ವಸಿಗೊಳಿಸುತ್ತಾರೆ.
ಸಾಧುಗಳ ಮಠದಲ್ಲಿ ಗದ್ದುಗೆ ಸ್ಥಾಪನೆ:
ಶುಖಮುನಿ ಸ್ವಾಮಿಗಳು ಆ. 26, 1938ರಂದು ಭಾದ್ರಪದ ಶುದ್ಧ ಪ್ರತಿಫದ ದಿನದಂದು ದೋಟಿಹಾಳ ಗ್ರಾಮದ ರುದ್ರಮುನಿ ಸ್ವಾಮಿಗಳ ಮಠದ ಹತ್ತಿರ ಶರೀರ ತ್ಯಾಗ ಮಾಡುತ್ತಾರೆ. ಅಂದಿನಿಂದ ಇಂದಿನವರೆಗೂ ಈ ದಿನದಂದು ಆರಾಧನಾ ಮಹೋತ್ಸವ ಆಚರಣೆ ಮಾಡಲಾಗುತ್ತದೆ.
ಶ್ರೀಗಳು ಶರೀರವನ್ನು ತ್ಯಾಗ ಮಾಡಿದ ನಂತರ ಊರಿನ ಹಿರಿಯರು ಸೇರಿಕೊಂಡು ಇವರ ಗದ್ದುಗೆಯನ್ನು ಸಾಧುಗಳ ಮಠದಲ್ಲಿ ಸ್ಥಾಪಿಸುತ್ತಾರೆ. ಶಿವರಾತ್ರಿ ಅಮಾವಾಸ್ಯೆಯಂದು ಜಾತ್ರಾ ಮಹೋತ್ಸವ ಹಾಗೂ ಜಾತ್ರೆ ನಂತರದ ಆರು ತಿಂಗಳಿಗೆ ಬರುವ ಭಾದ್ರಪದ ಶುದ್ಧ ಪ್ರತಿಫದ ದಿನದಂದು ಆರಾಧನೆ ಮಹೋತ್ಸವ ಆಚರಿಸಲಾಗುತ್ತಿದೆ.
ಆರಾಧನಾ ಮಹೋತ್ಸವದ ಕಾರ್ಯಕ್ರಮ ಹಾಗೂ ಪಲ್ಲಕ್ಕಿ ಉತ್ಸವದಲ್ಲಿ ದೋಟಿಹಾಳ, ಕೇಸೂರು, ಇಲಕಲ್ಲ, ಕುಷ್ಟಗಿ, ಗದಗ, ಕೊಪ್ಪಳ, ಬಾಗಲಕೋಟೆ, ಸಿಂಧನೂರು, ರಾಯಚೂರು, ಸುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಜನರು ಪಾಲ್ಗೊಳ್ಳುತ್ತಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.