ದುಬೈನಲ್ಲಿ ಅಸುನೀಗಿದ್ದವರ ಕಳೆಬರಹ ಇಂದು ಗೋಕಾಕಗೆ

KannadaprabhaNewsNetwork |  
Published : Sep 13, 2024, 01:40 AM IST
ಗೋಕಾಕ | Kannada Prabha

ಸಾರಾಂಶ

ದುಬೈನ ಹೈಮಾದಲ್ಲಿ ಆ.26ರಂದು ನಡೆದ ಅಪಘಾತದಲ್ಲಿ ಅಸುನೀಗಿದ್ದ ನಾಲ್ವರು. ಇಬ್ಬರ ಪಾರ್ಥಿವ ಶರೀರಕ್ಕೆ ಇಂದು ಅಂತ್ಯಕ್ರಿಯೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಗೋಕಾಕ

ವಿಸಿಟಿಂಗ್ ವಿಸಾದ ಮೇಲೆ ದುಬೈಗೆ ತೆರಳಿದ್ದಾಗ ಕಳೆದ ಆ.26ರಂದು ಹೈಮಾ ಪ್ರದೇಶದಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದ ಗೋಕಾಕ ಮೂಲದ ನಾಲ್ವರ ಕಳೆಬರಹ ಭಾರತೀಯ ರಾಯಭಾರಿ ಕಚೇರಿಗೆ ಆಗಮಿಸಿದ್ದು, ಇಬ್ಬರ ಕಳೆಬರಹ ಸೆ.13ರಂದು ಗೋಕಾಕಗೆ ಆಗಮಿಸುತ್ತಿವೆ.ವಿಸಿಟಿಂಗ್ ವಿಸಾದ ಮೇಲೆ ದುಬೈಗೆ ತೆರಳಿದ್ದ ತಾಯಿ, ಮಗ, ಮಗಳು ಹಾಗೂ ಅಳಿಯ ಹೈಮಾಕ್‌ ಪ್ರದೇಶದ ರಸ್ತೆ ಅಪಘಾತದಲ್ಲಿ ಅಸುನೀಗಿದ್ದರು. ಮೃತ ಪೂಜಾ ಆದಿಶೇಷ ಉಪ್ಪಾರ (21), ಆದಿಶೇಷ ಬಸವರಾಜ ಉಪ್ಪಾರ (35) ಪಾರ್ಥಿವ ಶರೀರ ರಾಯಚೂರಿನ ದೇವದುರ್ಗ ತಲುಪಿದ್ದು ಬುಧವಾರವೇ ಅಂತ್ಯಕ್ರಿಯೆ ಜರುಗಿದೆ.

ಇನ್ನುಳಿದಂತೆ ಗೋಕಾಕ ನಿವಾಸಿಗಳಾದ ವಿಜಯಾ ಮಾಯಪ್ಪ ತಹಶೀಲದಾರ (52), ಪವನಕುಮಾರ ಮಾಯಪ್ಪ ತಹಶೀಲದಾರ (22) ಅವರ ಪಾರ್ಥಿವ ಶರೀರ ಹೈದರಾಬಾದ್ ಮಾರ್ಗವಾಗಿ ಸೆ.13ರಂದು ಬೆಳಗ್ಗೆ ಗೋಕಾಕ ನಗರಕ್ಕೆ ಆಗಮಿಸಲಿದೆ. ನಗರದ ಕುಂಬಾರಗಲ್ಲಿಯ ರುದ್ರಭೂಮಿಯಲ್ಲಿ ಅಂತಿಮ ವಿಧಿ ವಿಧಾನಗಳ ಮೂಲಕ ಶುಕ್ರವಾರ ಅಂತ್ಯಸಂಸ್ಕಾರ ಜರುಗಲಿದೆ ಎಂದು ತಹಶೀಲದಾರ ಕುಟುಂಬದ ಮೂಲಗಳು ತಿಳಿಸಿದೆ.

ಆದಿಶೇಷ ಹಾಗೂ ಪೂಜಾ ದಂಪತಿ ದುಬೈನ ಸಲಾಲಾನಲ್ಲಿ ನೆಲೆಸಿದ್ದರು. ಗರ್ಭಿಣಿಯಾಗಿದ್ದ ಮಗಳನ್ನು ಸೀಮಂತ ಕಾರ್ಯಕ್ಕೆ ಕರೆತರಲು ದುಬೈಗೆ ತಾಯಿ ಮಗ ವಿಸಿಟಿಂಗ್ ವಿಸಾದ ಮೇಲೆ ತೆರಳಿದ್ದರು. ಆ.26ರ ಸೋಮವಾರ ರಾತ್ರಿ 10ಗಂಟೆಗೆ ಕಾರ್ ಮೂಲಕ ಸಾಲಾಲಾದಿಂದ ಮಸ್ಕತ್‌ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಮೃತರ ಶರೀರವನ್ನು ಹೈಮಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಂತರ ಶವಾಗಾರದಲ್ಲಿ ಇರಿಸಲಾಗಿತ್ತು. ಮೃತರ ಶರೀರದ ಡಿಎನ್‌ಎ ಟೆಸ್ಟ್ ಸೇರಿ ಭಾರತೀಯ ರಾಯಭಾರ ಕಚೇರಿಗೆ ಸಂಬಂಧಿಸಿದ ಕ್ರಮಗಳು ವಿಳಂಬವಾದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿದ 17 ದಿನಗಳ ನಂತರ ಮೃತರ ಪಾರ್ಥಿವ ಶರೀರ ಭಾರತಕ್ಕೆ ಆಗಮಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!