ಪ್ರತಿಭೆಯನ್ನು ಗುರುತಿಸಿ ಹಾಕಿದ ಹಾರವೇ ಇಂದು ಜನಿವಾರವಾಗಿ, ಕೊನೆಗೆ ಜಾತಿಯಾಗಿ ಮಾರ್ಪಟ್ಟಿದೆ ಎಂದು ವಿಧಾನಸಭೆಯ ಮಾಜಿ ಸಭಾಪತಿ ಕೆ.ಆರ್. ರಮೇಶ್ ಕುಮಾರ್ ಹೇಳಿದರು.
ಕನ್ನಡಪ್ರಭ ವಾರ್ತೆ, ತುಮಕೂರು
ಪ್ರತಿಭೆಯನ್ನು ಗುರುತಿಸಿ ಹಾಕಿದ ಹಾರವೇ ಇಂದು ಜನಿವಾರವಾಗಿ, ಕೊನೆಗೆ ಜಾತಿಯಾಗಿ ಮಾರ್ಪಟ್ಟಿದೆ ಎಂದು ವಿಧಾನಸಭೆಯ ಮಾಜಿ ಸಭಾಪತಿ ಕೆ.ಆರ್. ರಮೇಶ್ ಕುಮಾರ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಶ್ರೀ ಡಿ. ದೇವರಾಜ ಅರಸು ಅಧ್ಯಯನ ಪೀಠದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಜನಮುಖಿ ಅರಸು ಕೃತಿಯ ಲೋಕಾರ್ಪಣೆ ಹಾಗೂ ಡಿ. ದೇವರಾಜ ಅರಸು: ಸಮಸಮಾಜದ ಕನಸುಗಾರ ವಿಷಯದ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ವರ್ಣಗಳು ಒಂದಾಗಬಾರದು, ಅಂತರ್ಜಾತಿ ವಿವಾಹಗಳು ನಡೆಯಬಾರದು ಎಂಬ ನಿಯಮಗಳ ಹಿಂದೆ ಜ್ಞಾನ, ವಿವೇಕ ಮತ್ತು ಜೀನ್ಸ್ ಅದಲು ಬದಲಾಗಬಾರದು ಎಂಬ ಸ್ವಾರ್ಥವಿತ್ತು. ಇಂತಹ ವ್ಯವಸ್ಥೆಯ ವಿರುದ್ಧ ಬಾಬಾಸಾಹೇಬ ಅಂಬೇಡ್ಕರ್ ಅವರು ಭ್ರಾತೃತ್ವ ಮತ್ತು ಸಮಾನತೆಯ ಪೀಠಿಕೆ ಹಾಕಿದರು. ಆದರೆ ಇಂದು ಜನರಿಂದ ಆಯ್ಕೆಯಾದವರೇ ಭ್ರಾತೃತ್ವ, ಸಮಾನತೆಯನ್ನು ಹಾಳು ಮಾಡುವ ಹಂತಕ್ಕೆ ತಲುಪಿದ್ದಾರೆ. ನಮ್ಮ ಅಗತ್ಯ, ಆಲೋಚನೆ, ವಿಚಾರ, ಆಚಾರ ಹಾಗೂ ವೇಷಭೂಷಣಗಳು ಭಿನ್ನವಾಗಿದ್ದರೂ, ಎಲ್ಲರನ್ನೂ ಒಳಗೊಳ್ಳುವ ಸಮಸಮಾಜದ ಕನಸು ಕಂಡವರು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು. ಸದನದಲ್ಲಿ ಮುಖ್ಯಮಂತ್ರಿಯಾಗುವ ಮುನ್ನ ಅರಸು ಅವರು ಹಿಂದುಳಿದ ವರ್ಗಗಳ ಹಾಗೂ ಭೂ ಸುಧಾರಣೆಯ ವಿಚಾರ ಪ್ರಸ್ತಾಪಿಸಿದಾಗ ಅವರ ಮಾತನ್ನು ಯಾರೂ ಕೇಳಲಿಲ್ಲ, ಓದಲೂ ಇಲ್ಲ. ಆದರೆ, ಅವರಿಗೆ ಅಧಿಕಾರ ಸಿಕ್ಕಾಗ ಅದನ್ನೆಲ್ಲಾ ಜಾರಿಗೆ ತಂದರು. ಇಡೀ ವಿಧಾನಸಭೆಯ ಇತಿಹಾಸದಲ್ಲೇ ಅವಿರೋಧವಾಗಿ ಆಯ್ಕೆಯಾದ ಮೊದಲಿಗರು ದೇವರಾಜ ಅರಸು. ಅವರು ಯಾರ ವಿರೋಧಿಯೂ ಆಗಿರಲಿಲ್ಲ 3600 ವರ್ಷಗಳ ಹಿಂದೆ ಸಮಾಜದಲ್ಲಿ ಹರಡಿದ್ದ ಜಾಡ್ಯವನ್ನು ತೊಡೆದುಹಾಕಲು ಅರಸು ಶ್ರಮಿಸಿದರು.
ಶಾಂತವೇರಿ ಗೋಪಾಲಗೌಡರನ್ನು ಹೊರತುಪಡಿಸಿ ಕರ್ನಾಟಕದ ಇತಿಹಾಸವನ್ನು ಬರೆಯಲು ಸಾಧ್ಯವಿಲ್ಲ. ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಅರಸು ಅವರಿಗೆ ಟ್ರಾವೆಲ್ ಏಜೆನ್ಸಿಯೊಂದಕ್ಕೆ 20 ಸಾವಿರ ರುಪಾಯಿ ಹಣ ನೀಡಲು ಸಾಧ್ಯವಾಗಿರಲಿಲ್ಲ. ಆದರೂ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಲಾಯಿತು. ವಿಧಾನಸಭೆಯಲ್ಲಿ ಏಕಾಏಕಿ ಕುಳಿತು ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸಿದ್ದಕ್ಕೆ, ಅವರ ಮೇಲಿನ ಹೊಟ್ಟೆಯುರಿಯಿಂದ ಇಂತಹ ಸುಳ್ಳು ಅಪವಾದಗಳನ್ನು ಹೊರಿಸಲಾಯಿತು. ನಮ್ಮ ಪರಂಪರೆಯಲ್ಲಿ ಬದುಕಿದ್ದಾಗ ಗೌರವ ಕೊಡುವುದಕ್ಕಿಂತ, ಸತ್ತಾಗ ಗೌರವಿಸುವುದು ಹೆಚ್ಚು. ಇದಕ್ಕೆ ವೈದಿಕ ಪರಂಪರೆಯೇ ಕಾರಣ ಎಂದರು.
ತುಮಕೂರು ವಿ.ವಿ. ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಮಾತನಾಡಿ, ಯುವ ಜನಾಂಗ ಮತ್ತು ವಿದ್ಯಾರ್ಥಿಗಳು ತಮ್ಮಲ್ಲಿ ಅತ್ಯುತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ನಿಮ್ಮ ಸಾಧನೆ ಕೇವಲ ಸ್ಥಳೀಯ ಮಟ್ಟಕ್ಕೆ ಸೀಮಿತವಾಗದೆ, ದೇಶದ ಮೂಲೆ ಮೂಲೆಯಲ್ಲೂ ನಿಮ್ಮ ಹೆಸರು ಧ್ವನಿಸುವಂತಾಗಬೇಕು. ಹುಟ್ಟು ಮತ್ತು ಸಾವಿನ ನಡುವಿನ ಅವಧಿಯಲ್ಲಿ ನಮ್ಮ ಜೀವನದ ನಿಜವಾದ ಮೌಲ್ಯವನ್ನು ನಾವು ಅರಿತುಕೊಳ್ಳಬೇಕು. ಡಿ. ದೇವರಾಜ ಅರಸು, ಶಾಂತವೇರಿ ಗೋಪಾಲಗೌಡರು, ಸೂರಜ್ ಹೆಗ್ಡೆ ಹಾಗೂ ಸ್ವಾಮಿ ವಿವೇಕಾನಂದ ಅವರಂತಹ ಮಹನೀಯರು ತೀರಾ ಸಣ್ಣ ವಯಸ್ಸಿನಲ್ಲೇ ದೇಶವೇ ಹೆಮ್ಮೆಪಡುವಂತಹ ಐತಿಹಾಸಿಕ ಸಾಧನೆ ತೋರಿದವರು. ಇವರ ಜೀವನ ನಮಗೆ ದಾರಿದೀಪವಾಗಬೇಕು. ಪ್ರತಿಯೊಬ್ಬರ ಜೀವನಕ್ಕೂ ಪ್ರಾಮಾಣಿಕತೆ ಎಂಬುದು ಅಗತ್ಯ ಎಂದರು.
ಪರೀಕ್ಷಾಂಗ ಕುಲಸಚಿವ ಪ್ರೊ. ಎಚ್. ಎಸ್. ಮೋಹನ ಅವರು ಜನಮುಖಿ ಅರಸು ಕೃತಿಯ ಪರಿಚಯ ಮಾಡಿದರು. ಡಿ. ದೇವರಾಜ ಅರಸು ಅಧ್ಯಯನ ಪೀಠದ ಸಂಯೋಜಕರಾದ ಡಾ. ಗುಂಡೇಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿ, ಸ್ವಾಗತಿಸಿದರು. ಹಿರಿಯ ಪ್ರಾಧ್ಯಾಪಕ ಪ್ರೊ. ಬಿ ಕರಿಯಣ್ಣ ವಂದಿಸಿದರು.
ಚುನಾವಣಾ ವ್ಯವಸ್ಥೆ ಮತ್ತು ಇಂದಿನ ರಾಜಕಾರಣದ ಪತನ ಅಂದಿನ ಚುನಾವಣಾ ಆಯೋಗಕ್ಕೂ ಇಂದಿನ ಆಯೋಗಕ್ಕೂ ಆಕಾಶ ಭೂಮಿಯ ವ್ಯತ್ಯಾಸವಿದೆ. ಅಂದು ರಾಷ್ಟ್ರಪತಿಗಳಿಂದ ಆಯ್ಕೆಯಾದ ಆಯೋಗವು ನ್ಯಾಯಯುತವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಿತ್ತು. ಆದರೆ ಇಂದು ಪ್ರಜಾಪ್ರಭುತ್ವದಲ್ಲಿ ರಾಜಕೀಯ ಮಾರಾಟವಾಗಿದೆ. ಮುಂಬರುವ ದಿನಗಳಲ್ಲಿ ನಿಮ್ಮ ಮತ ಕೇವಲ ಚುನಾವಣಾ ಪಟ್ಟಿಗೆ ಮಾತ್ರ ಸೀಮಿತವಾದರೂ ಅಚ್ಚರಿಯಿಲ್ಲ. ರಾಜಕೀಯ ಪಕ್ಷಗಳ ನಾಯಕರೆಲ್ಲರೂ ಒಳಗೆ ಅನ್ಯೋನತೆಯಿಂದಿದ್ದಾರೆ, ಹೊರಗೆ ಕೇವಲ ರಾಜಕೀಯ ನಾಟಕವಾಡುತ್ತಾ ವೈರಿಗಳಂತೆ ನಟಿಸುತ್ತಿದ್ದಾರೆ ಎಂದರು. ಅಂದು ಗೋಪಾಲಕೃಷ್ಣ ಗೌಡರ ಹಾಗೂ ಎಸ್. ನಿಜಲಿಂಗಪ್ಪನವರ ಕಾಲದ ಪ್ರಜಾಪ್ರಭುತ್ವಕ್ಕೂ ಇಂದಿನ ರಾಜಕಾರಣಿಗಳ ಆಟಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಂದು ವಿರೋಧ ಪಕ್ಷಗಳು ಸರ್ಕಾರಕ್ಕೆ ಚಾವುಟಿ ಬೀಸಿ ತಪ್ಪುಗಳನ್ನು ತಿದ್ದುತ್ತಿದ್ದವು. ಆದರೆ ಇಂದು ನಿನ್ನ ಭ್ರಷ್ಟಾಚಾರ ಎಷ್ಟು, ನನ್ನ ಭ್ರಷ್ಟಾಚಾರ ಎಷ್ಟು? ಎಂದು ಲೆಕ್ಕ ಹಾಕುವುದೇ ಇಂದಿನ ಪ್ರಜಾಪ್ರಭುತ್ವವಾಗಿದೆ. ಉಳ್ಳವರ ಮನೆಗೆ ಹೋಗಿ ಬರುವಾಗ ಅವರ ಮನೆಯ ಧೂಳು ಕೂಡ ನಮ್ಮ ಅಂಗಾಲಿಗೆ ಅಂಟಿಕೊಳ್ಳಬಾರದು ಎಂಬ ಎಚ್ಚರ ನಮಗಿರಬೇಕು. ಮತದಾರರ ಪೆಟ್ಟಿಗೆಯಿಂದ ಹೊರಬರುವವರೇ ನಿಜವಾದ ದೇವರು ಎಂದು ನಂಬಿದ್ದವರು ಅರಸು ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.