ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕಳೆದ ವರ್ಷ ಸುಮಾರು ರು. ೧.೫೦ಕೋಟಿ ವೆಚ್ಚದಲ್ಲಿ ನವೀಕರಣಗೊಂಡಿರುವ ಕಟ್ಟಡದಲ್ಲಿ ಇಂದಿಗೂ ಚಿಕ್ಕಪುಟ್ಟ ಕೆಲಸಗಳು ಬಾಕಿಯಾಗಿದ್ದು, ಗುತ್ತಿಗೆದಾರರಿಗೆ ಮಾತ್ರ ಪೂರ್ಣ ಬಿಲ್ ಪಾವತಿಸಲಾಗಿದ್ದು, ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮಕ್ಕೆ ಜನರು ಒತ್ತಾಯಿಸಿದ್ದಾರೆ.
ಕಟ್ಟಡದಲ್ಲಿ ೪ ಶೌಚಗೃಹ ನಿರ್ಮಾಣ ಮಾಡಲಾಗಿದೆ. ಅದರಲ್ಲಿ ಸಾರ್ವಜನಿಕರಾಗಿ ಎರಡನ್ನು ಮೀಸಲಿಡಲಾಗಿದೆ. ಆದರೆ ಇದುವರೆಗೆ ಬೀಗ ತೆಗೆದಿಲ್ಲ. ಎರಡು ಶೌಚಗೃಹವನ್ನು ಇಲಾಖೆಯ ಸಿಬ್ಬಂದಿ ಉಪಯೋಗಿಸಿಕೊಂಡು ಬೀಗ ಜಡಿಯುತ್ತಾರೆ.ಪ್ರತಿದಿನ ಕೆಲಸಕ್ಕಾಗಿ ನೂರಾರು ಸಾರ್ವಜನಿಕರು ತಾಲೂಕು ಕಚೇರಿಗೆ ಆಗಮಿಸುತ್ತಾರೆ. ಅದರಲ್ಲೂ ಮಹಿಳೆಯರು, ವೃದ್ಧರು ಕೆಲಸಕ್ಕಾಗಿ ಸಂಜೆ ವರೆಗೂ ಕಾಯುತ್ತಿರುತ್ತಾರೆ. ಅವರ ಸಮಸ್ಯೆಯನ್ನು ಯಾರೊಂದಿಗೂ ಹೇಳಿಕೊಳ್ಳಲು ಸಾಧ್ಯವಾಗದೆ ಪರದಾಡುತ್ತಿರುತ್ತಾರೆ.
ಗುತ್ತಿಗೆದಾರರು ಬಿಲ್ ತಗೊಂಡಿದ್ದಾರೆ. ಕಾಮಗಾರಿ ಮುಗಿಸಿಲ್ಲ. ಪಿಟ್ ನೀರಿನ ವ್ಯವಸ್ಥೆ ಆಗಿದೆ. ಇನ್ನೊಂದಿಷ್ಟು ಕೆಲಸ ಬಾಕಿಯಿದೆ. ಈಗಾಗಲೇ ಗುತ್ತಿಗೆದಾರರಿಗೆ ತಿಳಿಸಿದ್ದೇನೆ. ಕಾಮಗಾರಿ ಮುಗಿಸಿದ ತಕ್ಷಣ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಿಕೊಡಲಾಗುವುದು.