ಟೊಮೆಟೋ ದರ ಮತ್ತೆ ಗಗನಮುಖಿ: ರೈತರಿಗೆ ಸಂತಸ

KannadaprabhaNewsNetwork |  
Published : Aug 01, 2024, 12:32 AM IST
ಸಿಕೆಬಿ-2 ಮಾರ್ಕೆಟ್ ನ ಮಳಿಗೆಯಲ್ಲಿ ವ್ಯಾಪಾರಕ್ಕೆ ಜೋಡಿಸಿರುವ ತರಕಾರಿಗಳು | Kannada Prabha

ಸಾರಾಂಶ

ಇನ್ನು ಒಂದು ವಾರದ ಕಾಲ ಇದೇ ಬೆಲೆ ಮುಂದುವರೆಯಲಿದ್ದು ಮತ್ತೆ ಬೆಲೆ ಏರಿಕೆ ಆಗುವ ಸಾಧ್ಯತೆಗಳಿದೆ ಎಂದು ಎಪಿಎಂಸಿ ಮಾರುಕಟ್ಟೆ ಟೊಮೆಟೊ ಮಂಡಿ ವರ್ತಕರು ಅಭಿಪ್ರಾಯ ಪಟ್ಟಿದ್ದಾರೆ. ಬೇರೆ ರಾಜ್ಯಗಳಲ್ಲಿ ಟೊಮೆಟೋ ಇಳುವರಿ ಕುಸಿತ ಇದಕ್ಕೆ ಕಾರಣ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕಳೆದೆರಡು ತಿಂಗಳಿಂದ ಸತತ ಏರಿಕೆ ಕಂಡು ಕಳೆದ ವಾರ ಇಳಿಕೆ ಕಂಡಿದ್ದ ಟೊಮೆಟೋ ಬೆಲೆ ಮತ್ತೆ ಕೊಂಚ ಏರಿಕೆ ಕಂಡಿದೆ. ಹಾಗೇಯೆ ಇಳಿ ಮುಖವಾಗಿದ್ದ ತರಕಾರಿಗಳ ಬೆಲೆಯೂ ದುಪ್ಪಟ್ಟಾಗಿದ್ದು ರೈತರ ಮೊಗದಲ್ಲಿ ಹರ್ಷತಂದರೆ, ಗ್ರಾಹಕ ಜೇಬಿಗೆ ಕತ್ತರಿ ಹಾಕಿದೆ.

ಅನೇಕರಿಗೆ ಟೊಮೆಟೊ ಇಲ್ಲದೆ ಅಡುಗೆಯೇ ರುಚಿಸುವುದಿಲ್ಲ. ಸದ್ಯ ಉತ್ತಮ ಗುಣಮಟ್ಟದ ಟೊಮೇಟೊ ಬೆಲೆ ಒಂದು ಕೆಜಿಗೆ ರೂ70 ರಿಂದ ರೂ 90 ವರೆಗೆ ಮಾರಾಟವಾಗುತ್ತಿದೆ. ಟೊಮೇಟೊ ಹೊರತಾಗಿ ಎಲ್ಲ ಬಗೆಯ ತರಕಾರಿಗಳ ಬೆಲೆಯೂ ಏರಿಕೆಯಾಗಿದೆ. ಕಳೆದ ವರ್ಷ ಟೊಮೇಟೊ ಬೆಲೆ ಸಾಕಷ್ಟು ಏರಿಕೆಯಾಗಿ ಟೊಮೆಟೊ ರೈತರು ಉತ್ತಮ ಆದಾಯ ಗಳಿಸಿದ್ದರು.

14 ಕೆಜಿ ಬಾಕ್ಸ್‌ಗೆ ₹600

ದರ ಹೆಚ್ಚಾಗಿದ್ದಾಗ ಟೊಮೆಟೋ ಕಳ್ಳತನ ಪ್ರಕರಣಗಳೂ ನಡೆದಿದ್ದವು. ಮತ್ತೆ ಅಂತಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಏಕೆಂದರೆ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಚಿಕ್ಕಬಳ್ಳಾಪುರ ಎಪಿಎಂಸಿಯಲ್ಲಿ ಟೊಮೆಟೊ ಬೆಲೆ ಮತ್ತೆ ಏರಿಕೆಯಾಗಿದೆ. ಕಳೆದ ಒಂದು ವಾರದ ವರೆಗೂ 14 ಕೆಜಿ ತೂಕದ ಒಂದು ಬಾಕ್ಸ್ ಟೊಮೆಟೊ ಬೆಲೆ 1000 ದಿಂದ 1300ವರೆಗೂ ಗಡಿ ದಾಟಿತ್ತು. ಆದರೆ ಈ ವಾರ 14 ಕೆಜಿ ತೂಕದ ಒಂದು ಬಾಕ್ಸ್ ಬೆಲೆ 100 ರಿಂದ 300 ರೂಪಾಯಿಗೆ ಕುಸಿತಗೊಂಡಿದ್ದು ರೈತರಿಗೆ ಭಾರೀ‌ ನಿರಾಸೆ ಉಂಟಾಗಿತ್ತು. ಇದೀಗ ಟೊಮೊಟೊ ಬೆಲೆಯಲ್ಲಿ ಮತ್ತೆ ಚೇತರಿಕೆ ಕಂಡಿದ್ದು, ಕನಿಷ್ಟ 200 ರೂ ಹಾಗೂ ಗರಿಷ್ಠ 600 ರೂಪಾಯಿ ವರೆಗೆ ಟೊಮೆಟೊ ಮಾರಾಟವಾಗುತ್ತಿದೆ.

ಇನ್ನು ಒಂದು ವಾರದ ಕಾಲ ಇದೇ ಬೆಲೆ ಮುಂದುವರೆಯಲಿದ್ದು ಮತ್ತೆ ಬೆಲೆ ಏರಿಕೆ ಆಗುವ ಸಾಧ್ಯತೆಗಳಿದೆ ಎಂದು ಎಪಿಎಂಸಿ ಮಾರುಕಟ್ಟೆ ಟೊಮೆಟೊ ಮಂಡಿ ವರ್ತಕರು ಅಭಿಪ್ರಾಯ ಪಟ್ಟಿದ್ದಾರೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್ ಗಢ, ದೆಹಲಿ, ಜಾರ್ಖಂಡ್, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತಿತರ ರಾಜ್ಯಗಳಿಗೆ ಟೊಮೇಟೊ ರಫ್ತು ಮಾಡಲಾಗುತ್ತಿದೆ. ಆ ರಾಜ್ಯಗಳಲ್ಲಿ ಟೊಮೆಟೋ ಇಳುವರಿ ಕಡಿಮೆಯಾದ್ದರಿಂದ ಇಲ್ಲಿ ಟೊಮೇಟೊಗೆ ಬೇಡಿಕೆ ಬಂದಿದೆ ಎಂಬುದು ವ್ಯಾಪಾರಿಗಳ ಅಭಿಪ್ರಾಯ.ಮಳೆಯಿಂದ ತರಕಾರಿ ಬೆಳೆಗೆ ಹಾನಿ

ಅದೇ ರೀತಿ ಎರಡು ತಿಂಗಳು ರಾಜ್ಯಾದ್ಯಂತ ಸಾಕಷ್ಟು ಮಳೆ ಬಿದ್ದ ಪರಿಣಾಮ ತರಕಾರಿ ಬೆಳೆಗಳು ಹಾಳಾಗಿದ್ದು, ಹೆಚ್ಚಿನ ತರಕಾರಿ ಬೆಲೆ ಏರುಗತಿಯಲ್ಲೇ ಇದೆ. ಸದಾ ರೂ 20ರಿಂದ 30ರ ಆಸುಪಾಸಿನಲ್ಲಿರುತ್ತಿದ್ದ ಬೀಟ್‌ರೂಟ್‌ ದರ ಇದೀಗ 60 ರೂ.ಗೆ ಏರಿಕೆಯಾಗಿದೆ. ಕ್ಯಾರಟ್‌ ದರ ಎರಡು ತಿಂಗಳಿಂದ ಕೆ.ಜಿ.ಗೆ 100 ರೂ. ಇದೆ. ಹಾಗಲಕಾಯಿ 53 ರೂ., ಸೋರೆಕಾಯಿ 56 ರೂ. ಇದೆ. ಮೂಲಂಗಿ, ಬದನೆಕಾಯಿ ಮತ್ತಿತರ ತರಕಾರಿಗಳ ದರವೂ ಏರಿಕೆಯಾಗಿದೆ.

ದಿಢೀರ್ ದರ ಏರಿಕೆ ಕಂಡಿದ್ದ ಕೊತ್ತಂಬರಿ ಸೊಪ್ಪು, ಬೀನ್ಸ್‌ ದರ ಇಳಿಕೆಯಾಗಿದೆ. ಈರುಳ್ಳಿ,ಬೆಳ್ಳುಳ್ಳಿ,ಶುಂಠಿ ದರ ಮತ್ತೆ ಏರಿಕೆಯಾಗಿದೆ.ಕೆ.ಜಿ.ಗೆ 300 ರೂ. ತಲುಪಿದ್ದ ಕೊತ್ತಂಬರಿ ಸೊಪ್ಪು ಇದೀಗ 30 ರು.ಗೆ ಇಳಿದಿದೆ. 200 ರೂ. ತಲುಪಿದ್ದ ಬೀನ್ಸ್‌ ಕೆ.ಜಿ.ಗೆ 60 ರು.. ಆಲೂಗಡ್ಡೆ 50 ರು. ನಂತೆ ಮಾರಾಟವಾಗುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ