ಗದಗ: ಲಿಂ.ಸಿದ್ಧಲಿಂಗ ಶ್ರೀಗಳ ಪಾದಾರ್ಪಣೆ ನಂತರ ಈ ಮಠದ ಕೀರ್ತಿ ದೇಶದ ಉದ್ದಗಲಕ್ಕೂ ಹರಡಿತು. ಕೇವಲ ಧಾರ್ಮಿಕತೆಗೆ ಸೀಮಿತವಾಗಿದ್ದ ಈ ಮಠವನ್ನು ಲಿಂಗೈಕ್ಯ ಗುರುಗಳು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಿದರು ಎಂದು ಸಾಹಿತಿ, ಡಾ.ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ.ವೀರಣ್ಣ ರಾಜೂರ ಹೇಳಿದರು.
ಪೂಜ್ಯರು ಶ್ರೀಮಠದ ಪೀಠಾಧಿಪತಿಯಾಗಿದ್ದ 44 ವರ್ಷಗಳಲ್ಲಿ ನೂರು ವರ್ಷಗಳಿಗಾಗುವಷ್ಟು ಸಾಧನೆ ಮಾಡಿ ತೋರಿಸಿದ್ದು, ಸಮಾಜಸೇವೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಹೀಗೆ ಅನೇಕ ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆ ತಂದಿದ್ದಾರೆ. ಅವರು ಲಿಂಗೈಕ್ಯರಾದ ನಂತರ ಅವರ ಕುರಿತು 60ಕ್ಕೂ ಹೆಚ್ಚು ಪುಸ್ತಕಗಳು ಬಿಡುಗಡೆಯಾಗಿರುವುದು ಅವರ ಮಹಾನ್ ಕತೃರ್ತಶಕ್ತಿಗೆ ಸಾಕ್ಷಿಯಾಗಿದ್ದು, ಅವರ ಪಟ್ಟಾಧಿಕಾರ ರಜತಮಹೋತ್ಸವದ ಹಿನ್ನೆಲೆಯಲ್ಲಿ ಪ್ರತಿ ವಾರ ಶಿವಾನುಭವ ಕಾರ್ಯಕ್ರಮದಲ್ಲಿ ಅವರ ಸಾಧನೆಗಳ ಕುರಿತು ಉಪನ್ಯಾಸ ಏರ್ಪಡಿಸಬೇಕಿದೆ. ಅವರು ಆರಂಭಿಸಿದ ಶಿವಾನುಭವ ಕಾರ್ಯಕ್ರಮಗಳು ಅಪೂರ್ವ ದಾಖಲೆಯಾಗಿದ್ದು, ಎಲ್ಲ ಜಾತಿ-ಜನಾಂಗಗಳ ಮಾನವೀಯ ಮೌಲ್ಯಗಳ ಕುರಿತು ಈ ವೇದಿಕೆಯಲ್ಲಿ ಚರ್ಚೆಗಳು ನಡೆದಿವೆ. ಶ್ರೀಗಳ ಪುಸ್ತಕ ಪ್ರೇಮ ನಮಗೆಲ್ಲ ಮಾದರಿಯಾಗಿದ್ದು, ಅವರನ್ನು ನೆನೆಯುವುದೇ ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.
ಪತ್ರಕರ್ತರಾದ ಡಾ. ವಿಲಾಸ ನಾಂದೋಡ್ಕರ ಹಾಗೂ ರಘುನಾಥ ಚ.ಹ ಅವರಿಗೆ ಡಾ.ತೋಂಟದ ಸಿದ್ಧಲಿಂಗಶ್ರೀ ಪುರಸ್ಕಾರ ಪ್ರಧಾನ ಮಾಡಲಾಯಿತು.ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಆಶೀರ್ವಚನ ನೀಡಿದರು. ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರುದ್ನೂರಿನ ತೋಂಟದಾರ್ಯ ಶಾಖಾಮಠಕ್ಕೆ ಉತ್ತರಾಧಿಕಾರಿಗಳಾಗಿ ಆಯ್ಕೆಯಾಗಿರುವ ಚೆನ್ನಮಲ್ಲಿಕಾರ್ಜುನ ದೇವರನ್ನು ಸನ್ಮಾನಿಸಲಾಯಿತು.
ಡಾ. ತೋಂಟದ ಸಿದ್ಧಲಿಂಗಶ್ರೀ ಪುರಸ್ಕಾರ ಸಮಿತಿಯ ಸಿದ್ದು ಸತ್ಯಣ್ಣವರ ಹಾಗೂ ಪದಾಧಿಕಾರಿಗಳು, ರಾಜೇಶ ಹಾಗೂ ಗಿರೀಶ ಈಶ್ವರಪ್ಪ ಮಾನ್ವಿ ದಾಸೋಹ ಸೇವೆ ವಹಿಸಿದ್ದರು. ಶಶಿಕುಮಾರ ಬಂಡಿ ಧರ್ಮಗ್ರಂಥ ಪಠಿಸಿದರು. ರೋಹಿತ ತೊಂಡಿಹಾಳ ವಚನ ಚಿಂತನಗೈದರು.ಗುರುಮಠಕಲ್ನ ಶಾಂತವೀರ ಮುರುಘರಾಜೇಂದ್ರ ಶ್ರೀಗಳು, ನೇರಡಗಂಬಾ ಸಿದ್ಧಲಿಂಗೇಶ್ವರ ಮಠದ ಪಂಚಮ ಸಿದ್ಧಲಿಂಗೇಶ್ವರ ಸ್ವಾಮಿಗಳು, ರುದ್ನೂರು ತೋಂಟದ ಸಿದ್ಧೇಶ್ವರ ಸಮಿತಿಯ ಅಧ್ಯಕ್ಷ ಶಿವರಾಜ ಪಾಟೀಲ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸಿಇಒ ಮಲ್ಲಿಕಾರ್ಜುನ ಶೆಲ್ಲಿಕೇರಿ, ಮಾಜಿ ಸಚಿವ ಎಸ್.ಎಸ್. ಪಾಟೀಲ ಇದ್ದರು.