ಬಳ್ಳಾರಿ: ಮಧ್ಯಸ್ಥಿಕೆಯನ್ನು ಕಾನೂನುಬದ್ಧಗೊಳಿಸಲಾಗಿದೆ, ವಿವಾದದಲ್ಲಿರುವ ಕಕ್ಷಿದಾರರ ನಡುವೆ ಸಂಧಾನ ಮೂಡಿಸುವಲ್ಲಿ ನ್ಯಾಯಾಧೀಶರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಯಾವ ಪ್ರಕರಣಗಳನ್ನು ಮಧ್ಯಸ್ಥಿಕೆಗೆ ಕಳುಹಿಸಬೇಕು ಎಂಬುದನ್ನು ನ್ಯಾಯಾಧೀಶರೇ ನಿರ್ಧರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ, ಬಳ್ಳಾರಿ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶ ನ್ಯಾಯಮೂರ್ತಿ ಆರ್. ನಟರಾಜ್ ಹೇಳಿದರು.
ಭಾರತದಲ್ಲಿ ಮಧ್ಯಸ್ಥಿಕೆ ಅಥವಾ ಸಂಧಾನ ಎಂಬುದು ಹೊಸದೇನಲ್ಲ, ಮೊದಲಿನಿಂದಲೂ ವಿವಾದಗಳನ್ನು ಸಂಧಾನದ ಮೂಲಕವೇ ಬಗೆಹರಿಸಿಕೊಳ್ಳುವ ಸಂಪ್ರದಾಯವನ್ನು ಭಾರತವು ಹೊಂದಿದೆ. ಕುಟುಂಬದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದ ಹಿಡಿದು ಹಳ್ಳಿಯ ಪಂಚಾಯಿತಿ ವರೆಗೆ ನಮ್ಮ ದೈನಂದಿನ ಜೀವನದಲ್ಲಿ ಪೋಷಕರು ಮತ್ತು ಹಿರಿಯರು ಮಧ್ಯಸ್ಥಿಕೆ ವಹಿಸುತ್ತಾ ಬಂದಿದ್ದಾರೆ. ಇಂದು ನಾವು ಸಾಂಸ್ಥಿಕ ನ್ಯಾಯದಾನದ ವ್ಯವಸ್ಥೆಗೆ ಬದಲಾಗಿದ್ದರೂ ನಮ್ಮ ಇತಿಹಾಸ ಮತ್ತು ಪುರಾಣಗಳಲ್ಲಿ ಮಧ್ಯಸ್ಥಿಕೆಗೆ ಅಗ್ರಸ್ಥಾನವಿದೆ ಎಂದರು.
ಮಧ್ಯಸ್ಥಿಕೆಯು ಕೇವಲ ಪ್ರಕರಣಗಳನ್ನು ಇತ್ಯರ್ಥಪಡಿಸುವುದಿಲ್ಲ, ಬದಲಿಗೆ ಕರಗಿಹೋದ ಸಂಬಂಧಗಳನ್ನು ಬೆಸೆಯುತ್ತದೆ. ಉಭಯ ಪಕ್ಷಗಳ ನಡುವಿನ ದ್ವೇಷವನ್ನು ತಣಿಸಿ, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದದಿಂದ ಬದುಕಲು ದಾರಿ ಮಾಡಿಕೊಡುತ್ತದೆ ಎಂದು ಆಶಿಸುತ್ತಾ ತರಬೇತಿ ಶಿಬಿರಕ್ಕೆ ಶುಭ ಹಾರೈಸಿದರು.ನ್ಯಾ. ಸಿ.ಎಂ. ಪೂಣಚ್ಚ ವರ್ಚುವಲ್ ಮೂಲಕ ಭಾಗವಹಿಸಿ ಮಾತನಾಡಿ, ನ್ಯಾಯಾಲಯಗಳ ಮೇಲಿರುವ ಅಗಾಧವಾದ ಕೆಲಸದ ಹೊರೆಯನ್ನು ಕಡಿಮೆ ಮಾಡಲು ಮತ್ತು ಕಕ್ಷಿದಾರರ ನಡುವಿನ ಬಾಂಧವ್ಯ ಉಳಿಸಲು ಪರ್ಯಾಯ ವಿವಾದ ಬಗೆಹರಿಕೆ ವ್ಯವಸ್ಥೆ, ಅದರಲ್ಲೂ ವಿಶೇಷವಾಗಿ ಮಧ್ಯಸ್ಥಿಕೆ ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೇಳಿದರು.
ಕರ್ನಾಟಕ ಮಧ್ಯಸ್ಥಿಕೆ ಕೇಂದ್ರದ ತರಬೇತುದಾರರಾದ ಬೃಂದಾ ನಂದಕುಮಾರ್, ಜೋ ಜೋಸೆಫ್ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡರು.