ಸೋಮವಾರಪೇಟೆ: ತೊರೆನೂರು ಗ್ರಾಮ ಪಂಚಾಯಿತಿಯ ಅರಸಿನಕುಪ್ಪೆ-ಸಿದ್ಧಲಿಂಗಪುರದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ಮಂಜುನಾಥಸ್ವಾಮಿ ದೇವಾಲಯದ ಗರ್ಭಗುಡಿಗೆ ಕಲ್ಲು ಜೋಡಿಸುವ ಕಾರ್ಯಕ್ಕೆ ಕ್ಷೇತ್ರದ ಗುರುಗಳಾದ ರಾಜೇಶ್ನಾಥ್ ಗುರೂಜಿ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಕ್ಷೇತ್ರದ ಅಧ್ಯಕ್ಷ ನಾಪಂಡ ಮುತ್ತಪ್ಪ, ಗೌರವಾಧ್ಯಕ್ಷ ನಾಪಂಡ ಮುದ್ದಪ್ಪ ಮುಂದಾಳತ್ವದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಶ್ರೀ ಮಂಜುನಾಥಸ್ವಾಮಿ ಹಾಗೂ ಸಪರಿವಾರ ದೇವರುಗಳ ದೇವಾಲಯ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, ಕಾರ್ಕಳದ ಶಿಲ್ಪಿ ಸುರೇಶ್ ಮತ್ತು ತಂಡ ನಿರಂತರವಾಗಿ ಕೆಲಸವನ್ನು ಮಾಡುತ್ತಿದ್ದು, ನವರಾತ್ರಿಯ ಒಳಗೆ ಪಾದುಕನ್ಯಾಸ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ಕ್ಷೇತ್ರದ ಅಧ್ಯಕ್ಷ ನಾಪಂಡ ಮುತ್ತಪ್ಪ ಮಾತನಾಡಿ, ಜನವರಿ ೧೫ರ ಸಂಕ್ರಾಂತಿಯ ನಂತರ ಷಡಾಧರ ಪ್ರತಿಷ್ಠೆಗೆ ಸಜ್ಜುಗೊಳಿಸುವಂತೆ ಶಿಲ್ಪಿಗಳಿಗೆ ಸೂಚನೆ ನೀಡಲಾಗಿದೆ. ಅದರಂತೆ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.