ಹೊಸಪೇಟೆ: ಪ್ರವಾಸಿ ಮಾರ್ಗದರ್ಶಿಗಳು ಕೇವಲ ಮಾಹಿತಿ ನೀಡುವವರಲ್ಲ, ಅವರು ನಮ್ಮ ಜಿಲ್ಲೆಯ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ರಾಯಭಾರಿಗಳು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.
ಇಂದು ವಿತರಿಸಲಾದ ಸಮವಸ್ತ್ರಗಳು ಕೇವಲ ಸೌಲಭ್ಯವಲ್ಲ, ಬದಲಿಗೆ ಮಾರ್ಗದರ್ಶಿಗಳ ವೃತ್ತಿಪರತೆಯ ಗುರುತಾಗಿದೆ. ಸಮವಸ್ತ್ರ ಧರಿಸುವುದರಿಂದ ಪ್ರವಾಸಿಗರಲ್ಲಿ ವಿಶ್ವಾಸ ಮೂಡುವುದಲ್ಲದೆ, ಸುರಕ್ಷಿತ ಭಾವನೆ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಸಮವಸ್ತ್ರ ಬಳಸಬೇಕು ಎಂದರು.
ಪ್ರವಾಸೋದ್ಯಮ ಕ್ಷೇತ್ರ ದಿನೇ ದಿನೇ ಬೆಳೆಯುತ್ತಿದೆ. ಮಾರ್ಗದರ್ಶಿಗಳೂ ಕೇವಲ ಹಳೆಯ ಇತಿಹಾಸಕ್ಕೆ ಸೀಮಿತವಾಗದೆ, ಜಿಲ್ಲೆಯ ಹೊಸ ಪ್ರವಾಸಿ ತಾಣಗಳ ಬಗ್ಗೆಯೂ ನಿಖರ ಹಾಗೂ ಆಸಕ್ತಿದಾಯಕ ಮಾಹಿತಿ ಹೊಂದಿರಬೇಕು. ಈ ನಿಮ್ಮ ಆಸಕ್ತಿದಾಯಕ ಮಾರ್ಗದರ್ಶನ ಮತ್ತು ಜಿಲ್ಲೆಯ ಆತಿಥ್ಯದಿಂದ ಪ್ರಭಾವಿತರಾದ ಪ್ರವಾಸಿಗರು ಪುನಃ ಭೇಟಿ ನೀಡುವಂತಾಗಬೇಕು. ಆಗ ಮಾತ್ರ ಜಿಲ್ಲೆಯ ಪ್ರವಾಸೋದ್ಯಮದ ನೈಜ ಅಭಿವೃದ್ಧಿ ಸಾಧ್ಯ ಎಂದರು.ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಾದ ಪ್ರಭುಲಿಂಗ ತಳಕೇರಿ ಹಾಗೂ ಇಲಾಖೆಯ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.