ಟ್ರ್ಯಾಕ್‌ ಶೂಟ್ ಹೊಲಿಸಿ ವಿತರಿಸಿ ಮಕ್ಕಳ ದಿನಾಚರಣೆ

KannadaprabhaNewsNetwork |  
Published : Nov 17, 2024, 01:22 AM IST
68 | Kannada Prabha

ಸಾರಾಂಶ

ಮಕ್ಕಳು ಓದುವ ವಯೋಮಾನದಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್, ಟಿವಿ ವೀಕ್ಷಣೆಗಾಗಿ ಸಮಯವನ್ನು ವ್ಯರ್ಥಮಾಡದೇ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಎಚ್‌.ಡಿ. ಕೋಟೆ

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದ ಚಾಮಲಾಪುರ ಶಾಲೆ ಮುಖ್ಯಶಿಕ್ಷಕ ಸಾಲುಂಡಿ ದೊರೆಸ್ವಾಮಿ ಅವರು ಪ್ರಶಸ್ತಿಯಿಂದ ಬಂದ 5 ಸಾವಿರ ಜೊತೆಗೆ ತಮ್ಮ ವೇತನದ ಹಣವನ್ನು ಸರಿದೂಗಿಸಿ ತಮ್ಮ ಶಾಲೆಯ ಮಕ್ಕಳಿಗೆ ಟ್ರ್ಯಾಕ್‌ ಶೂಟ್ ಹೊಲಿಸಿ ವಿತರಿಸಿ ವಿಶಿಷ್ಟವಾಗಿ ಮಕ್ಕಳ ದಿನ ಆಚರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೋಟೆಲ್‌ ಉದ್ಯಮಿ ಹಾಗೂ ಸಮಾಜ ಸೇವಕ ಬೈಪಾಸ್ ಮಂಜುನಾಥ್, ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಈ ದೇಶ ಕಂಡ ಪ್ರಥಮ ಪ್ರಧಾನಿ ಪಂಡಿತ್‌ ಜವಾಹರ್‌ ಲಾಲ್ ನೆಹರು ಅವರ ಜನ್ಮ ದಿನ. ಅವರು ನಮ್ಮ ದೇಶಕ್ಕೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದು, ಅವರಿಗೆ ಮಕ್ಕಳೆಂದರೆ ಅತೀವ ಪ್ರೀತಿ, ಹಾಗಾಗಿ ಅವರ ಜನ್ಮದಿನವನ್ನೇ ಮಕ್ಕಳ ದಿನಾಚರಣೆಯನ್ನಾಗಿ ಮಾಡಬೇಕು ಎಂದು ಅಪೇಕ್ಷೆಪಟ್ಟಿದ್ದರು.

ಅದರಂತೆ ಇಂದು ದೇಶದ್ಯಾದಂತ ಮಕ್ಕಳ ದಿನಾಚರಣೆ ಆಯೋಜಿಸುತ್ತಿದ್ದು, ಮಕ್ಕಳಾದ ನೀವು ಇಂತಹ ಮಹನೀಯರ ಜೀವನ ಚರಿತ್ರೆಯನ್ನು ಓದಿ, ಅವರ ತತ್ತ್ವ, ಸಿದ್ಧಾಂತ, ಮೌಲ್ಯಗಳನ್ನು ಅಳವಡಿಸಿಕೊಂಡು ದೇಶದ ಸತ್ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.

ಎಂಜಿನಿಯರ್‌ ಅಭಿಷೇಕ್ ಮಾತನಾಡಿ, ಮಕ್ಕಳು ಓದುವ ವಯೋಮಾನದಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್, ಟಿವಿ ವೀಕ್ಷಣೆಗಾಗಿ ಸಮಯವನ್ನು ವ್ಯರ್ಥಮಾಡದೇ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಶಿಕ್ಷಕ ಸಾಲುಂಡಿ ದೊರೆಸ್ವಾಮಿ ಮಾತನಾಡಿ, ಈ ಬಾರಿ ನನಗೆ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿದ್ದು, ಇದಕ್ಕೆ ಕಾರಣ ನನ್ನ ಶಾಲೆಯ ಮಕ್ಕಳು. ಹಾಗಾಗಿ ಅಲ್ಲಿಂದ ಬಂದಂತಹ ಹಣವನ್ನು ನನ್ನ ಶಾಲಾ ಮಕ್ಕಳ ಶ್ರೇಯೋಭಿವೃದ್ಧಿಗೆ ವ್ಯಯಿಸಿರುವುದು ನನಗೆ ಅತೀವ ಸಂತೋಷವನ್ನುಂಟು ಮಾಡಿದೆ. ಹಾಗೇ ನನ್ನ ಶಾಲೆಯಲ್ಲಿ 22 ವರ್ಷಗಳಿಂದಲೂ ನಿರಂತರವಾಗಿ ದಾನಿಗಳು ಒಂದು ಶೈಕ್ಷಣಿಕ ವರ್ಷಕ್ಕೆ ಬೇಕಾಗಿರುವ ಎಲ್ಲಾ ಶೈಕ್ಷಣಿಕ ಸಾಮ್ರಾಗಿಗಳನ್ನು ವಿತರಣೆ ಮಾಡುತ್ತಿದ್ದು ಇದು ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿದೆ ಎಂದು ಎಲ್ಲಾ ದಾನಿಗಳನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ನೆರೆಹೊರೆಯ ಶಾಲೆಯ ಮುಖ್ಯಶಿಕ್ಷಕರಾದ ಎಂ. ಮರಿಕಾಳಯ್ಯ, ಪ್ರೇಮಕುಮಾರ್, ಪೃಥ್ವಿ ಬಿ.ಗೌಡ, ಎಸ್.ಡಿ.ಎಂ.ಸಿ. ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷೆ ವಿಜಯಕುಮಾರಿ, ಸದಸ್ಯರಾದ ಸ್ವಾಮಿಶೆಟ್ಟಿ, ಮಹಾದೇವು, ನಿಂಗಶೆಟ್ಟಿ, ಮಂಜುನಾಥ್, ಶಿವರಾಜು, ಸುಕನ್ಯಾ ಮಂಜುನಾಥ್, ಪುಟ್ಟಸ್ವಾಮಿ, ವಕೀಲ ಮನು ಇದ್ದರು. ಸಹ ಶಿಕ್ಷಕ ಡಿ. ನಾಗರಾಜು ಕಾರ್ಯಕ್ರಮ ನಿರ್ವಹಿಸಿದರು.

PREV

Latest Stories

ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ರಾತ್ರೋ ರಾತ್ರಿ ಬೀಗ - ಭಕ್ತರಲ್ಲಿ ಸಂಚಲನ
ಕಾರ್ಕಳ ಪರಶುರಾಮನ ವಿಗ್ರಹ ಕಂಚಲ್ಲ, ಹಿತ್ತಾಳೆ: ಚಾರ್ಜ್‌ಶೀಟ್‌!
ಡ್ರಗ್ಸ್‌ ಸಾಗಣೆ ಕೇಸಲ್ಲಿ ಕಲಬುರಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಂಧನ