ಬದಲಾವಣೆಗನುಗುಣವಾಗಿ ತರಬೇತಿ ಅಗತ್ಯ: ಜಿ.ಟಿ. ಹೆಗಡೆ

KannadaprabhaNewsNetwork |  
Published : Feb 13, 2026, 02:45 AM IST
ಸಹಕಾರ ಸಂಘ, ಬ್ಯಾಂಕುಗಳ ಮುಖ್ಯ ಕಾರ್ಯನಿರ್ವಾಹಕರ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಸಹಕಾರ ಸಂಘಗಳ ಕಾರ್ಯನಿರ್ವಹಣೆಯು ಬದಲಾಗುತ್ತಿರುವ ಕಾಯ್ದೆ, ಕಾನೂನುಗಳಿಗೆ ಅನುಗುಣವಾಗಿ ಇರಬೇಕು.

ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ ನಡೆದ ಜಿಲ್ಲಾ ಮಟ್ಟದ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಶಿರಸಿ

ಸಹಕಾರ ಸಂಘಗಳ ಕಾರ್ಯನಿರ್ವಹಣೆಯು ಬದಲಾಗುತ್ತಿರುವ ಕಾಯ್ದೆ, ಕಾನೂನುಗಳಿಗೆ ಅನುಗುಣವಾಗಿ ಇರಬೇಕು. ಇಲ್ಲದಿದ್ದಲ್ಲಿ ವಾಸ್ತವಿಕತೆಗೆ ಹತ್ತಿರವಾಗಿ ವ್ಯವಹರಿಸುವುದು ಕಷ್ಟಸಾಧ್ಯ ಎಂದು ಟಿಎಂಎಸ್‌ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟೀಸರ ಹೇಳಿದರು.

ಮಂಗಳವಾರ ಟಿಎಂಎಸ್‌ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉತ್ತರಕನ್ನಡ ಜಿಲ್ಲಾ ಸಹಕಾರ ಯೂನಿಯನ್‌ ಕುಮಟಾ, ಟಿಎಂಎಸ್, ಟಿಆರ್‌ಸಿ ಹಾಗೂ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಸಹಕಾರ ಸಂಘ, ಬ್ಯಾಂಕುಗಳ ಮುಖ್ಯ ಕಾರ್ಯನಿರ್ವಾಹಕರ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬದಲಾಗುವ ಪರಿಸ್ಥಿತಿಗೆ ಅನುಗುಣವಾಗಿ ತರಬೇತಿ ಪಡೆದು ಕಾರ್ಯನಿರ್ವಹಿಸುವುದು ಸಹಕಾರ ಸಂಘಗಳ ಪರಿಣಾಮಕಾರಿ ಬೆಳವಣಿಗೆಗೆ ಸಹಾಯಕವಾಗಬಲ್ಲದು. ಇಂತಹ ಬದಲಾವಣೆಗಳನ್ನು ತರಲು ಕಾಲಕಾಲಕ್ಕೆ ನಡೆಯುವ ಮಾಹಿತಿ ಕಾರ್ಯಾಗಾರಗಳಿಂದ ಮಾತ್ರ ಸಾಧ್ಯ ಎಂದರು.

ಕೆಡಿಸಿಸಿ ಬ್ಯಾಂಕ್‌ ನಿರ್ದೇಶಕ ಹಾಗೂ ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ,ಸಹಕಾರ ವ್ಯವಸ್ಥೆಗೆ ನಮ್ಮ ಜಿಲ್ಲೆ ಮಾದರಿಯಾದ ಜಿಲ್ಲೆಯಾಗಿತ್ತು. ಆದರೆ ಪ್ರಸ್ತುತ ಅತಿಯಾದ ರಾಜಕೀಯ ಮಧ್ಯಪ್ರವೇಶದಿಂದ ಈ ವ್ಯವಸ್ಥೆಗೆ ಕಾಯಕಲ್ಪ ನೀಡುವ ಪರಿಸ್ಥಿತಿ ಬಂದೊದಗಿದೆ. ಹಿರಿಯ ಸಹಕಾರಿಗಳ ಆಶೋತ್ತರಗಳನ್ನು, ತತ್ವಾದರ್ಶಗಳನ್ನು ಮರುಸ್ಥಾಪಿಸಿ ಸಹಕಾರ ವುವಸ್ಥೆಯ ಘನತೆಯನ್ನು ಕಾಪಾಡುವುದು ನಮ್ಮೆಲ್ಲರಿಗೆ ಇಂದಿನ ಅನಿವಾರ್ಯತೆಯಾಗಿದೆ ಎಂದರು.

ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜಿತ್‌ ಶಿರಹಟ್ಟಿ, ಟಿಎಸ್‌ಎಸ್‌ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ವಿಶ್ರಾಂತ ಜಂಟಿ ನಿರ್ದೇಶಕ ಮಂಜುನಾಥ ಹೆಗಡೆ ಸಹಕಾರ ಸಂಘಗಳ ದಾಖಲೆ ನಿರ್ವಹಣೆಯ ಕುರಿತು ಹಾಗೂ ಸಿಬ್ಬಂದಿಗಳ ವಿಷಯ ಕುರಿತು ತರಬೇತಿ ನೀಡಿದರು.

ಯಶ್ಸಸ್ವಿನಿ ಯೋಜನೆಯ ಜಿಲ್ಲಾ ಸಂಯೋಜಕ ಗಜೇಂದ್ರ ಪಾಲನಕರ ಯಶಸ್ವಿನಿ ಯೋಜನೆಯ ಅನುಷ್ಠಾನ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕ ಮಹೇಂದ್ರ ಭಟ್ಟ ಸಾಲೆಕೊಪ್ಪ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಕೆಡಿಸಿಸಿ ಬ್ಯಾಂಕ್‌ ನಿರ್ದೇಶಕ ರವಿ ಗಜಾನನ ಹೆಗಡೆ ಹುಳಗೋಳ, ಸಹಕಾರ ಸಂಘಗಳ ಮಾರಾಟಾಧಿಕಾರಿ ಬಿ.ಡಿ. ಡಿಸೋಜಾ, ಟಿಎಂಎಸ್‌ ಮುಖ್ಯಕಾರ್ಯನಿರ್ವಾಹಕ ವಿನಯ ಹೆಗಡೆ ಮಂಡೆಮನೆ ಉಪಸ್ಥಿತರಿದ್ದರು. ರಶ್ಮಿ ಹೆಗಡೆ ಪ್ರಾರ್ಥಿಸಿದರು. ಟಿಆರ್‌ಸಿಯ ಜಿ.ಜಿ. ಹೆಗಡೆ ಕುರುವಣಿಗೆ ಸ್ವಾಗತಿಸಿದರು. ಟಿಆರ್‌ಸಿ ಮುಖ್ಯ ಕಾರ್ಯನಿರ್ವಾಹಕ ಕಿರಣ ಭಟ್‌ ಮಾವಿನಕೊಪ್ಪ ಹಾಗೂ ತಟ್ಟೀಸರ ಸೊಸೈಟಿ ಮುಖ್ಯಕಾರ್ಯನಿರ್ವಾಹಕ ಜಿ.ವಿ. ಭಟ್‌ ಅತಿಥಿಗಳಿಗೆ ಪುಸ್ತಕ ನೀಡಿ ಗೌರವಿಸಿದರು. ಕುಮಟಾ ಯೂನಿಯನ್‌ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲ ನಾಯಕ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನೂರಕ್ಕು ಹೆಚ್ಚು ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರು ಪಾಲ್ಗೊಂಡು ತರಬೇತಿ ಪ್ರಯೋಜನ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಚ್ಛ ಕೊಡಗು ನಿರ್ಮಾಣ ಎಲ್ಲರ ಜವ್ಬಬ್ದಾರಿ: ಡಾ. ಮಂತರ್‌ ಗೌಡ
ವಿರಾಜಪೇಟೆ ಸಂತ ಅನ್ನಮ್ಮ ಚರ್ಚ್ ವಾರ್ಷಿಕ ಮಹೋತ್ಸವ