ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಸಹಾಯಕ ಚುನಾವಣಾಧಿಕಾರಿ ಪ್ರವೀಣ್ ಜೈನ್, ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರ ನೇತೃತ್ವದಲ್ಲಿ ಸೆಕ್ಟರ್ ಅಧಿಕಾರಿಗಳು ಹಾಗೂ ಮಾಸ್ಟರ್ ಟ್ರೇನರ್ಗಳು ಎರಡನೇ ಹಂತದ ತರಬೇತಿಯನ್ನು ಪ್ರೊಜೆಕ್ಟರ್ ಬಳಸಿ ಮತಗಟ್ಟೆ ಮತ್ತು ಮತದಾನದ ಕುರಿತು ಮಾಹಿತಿ ನೀಡಿದರು. ಇ.ಡಿ.ಸಿ ಗಾಗಿ ಸೌಲಭ್ಯ ಕೇಂದ್ರ ಹಾಗೂ ಪ್ರಥಮ ಚಿಕಿತ್ಸೆ ವಿಭಾಗ ಹಾಗೂ ಮಾಹಿತಿ ಕೇಂದ್ರಗಳ ವ್ಯವಸ್ಥೆಯನ್ನು ಮಾಡಿದ್ದು ವಿಶೇಷವಾಗಿತ್ತು.
ನಂತರ ಸುದ್ದಿಗಾರರ ಜೊತೆ ಸಹಾಯಕ ಚುನಾವಣಾಧಿಕಾರಿ ಪ್ರವೀಣ್ ಜೈನ್ ಹಾಗೂ ತಹಸೀಲ್ದಾರ್ ಪ್ರಕಾಶ ಸಿಂದಗಿ ಅವರು ಮಾತನಾಡಿ, ಪಟ್ಟಣದ ಎ.ಬಿ.ಸಾಲಕ್ಕಿ ಪದವಿ ಪೂರ್ವ ಕಾಲೇಜಿನಲ್ಲಿ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ನಡೆಯಲಿದೆ. ಚುನಾವಣೆಯಲ್ಲಿ ಮತದಾನದ ಪ್ರಕ್ರಿಯೆ ಸುಗಮವಾಗಿ ನಡೆಯಬೇಕಾದರೆ ಮತಗಟ್ಟೆ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದ್ದು. ಮತಗಟ್ಟೆ ಸಿಬ್ಬಂದಿ, ಹೆಚ್ಚಿನ ಜವಾಬ್ದಾರಿಯಿಂದ ಪಾರದರ್ಶಕವಾಗಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಮತಗಟ್ಟೆಯಲ್ಲಿ ಅನುಸರಿಸಬೇಕಾದ ಕ್ರಮಗಳು ಹಾಗೂ ಇವಿಎಂ ಬಳಕೆ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಲಾಯಿತು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ತಾಳಿಕೋಟಿ ತಹಸೀಲ್ದಾರ್ ಕೀರ್ತಿ ಚಾಲಕ, ಸೆಕ್ಟರ್ ಅಧಿಕಾರಿ ಎಲ್.ಡಿ.ಮುಲ್ಲಾ, ಕಂದಾಯ ಶಿರಸ್ತೇದಾರ ಸುರೇಶ ಮ್ಯಾಗೇರಿ ಸೇರಿದಂತೆ ಮಾಸ್ಟರ್ ಟ್ರೇನರಗಳು, ಚುನಾವಣಾ ಕಾರ್ಯಕ್ಕೆ ಆಗಮಿಸಿದ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಮತಗಟ್ಟೆ ಅಧಿಕಾರಿಗಳು ಉಪಸ್ಥಿತರಿದ್ದರು.