ಸಂಡೂರು: ಪಟ್ಟಣದಲ್ಲಿ ವಸತಿ ರಹಿತರಿಗೆ ಸೂರನ್ನು ಕಲ್ಪಿಸುವ ಉದ್ದೇಶದೊಂದಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಜಿ+೨ ಮಾದರಿಯಲ್ಲಿ ೨೧೭೨ ಮನೆಗಳನ್ನು ನಿರ್ಮಿಸುತ್ತಿದೆ. ಇವುಗಳಲ್ಲಿ ಮುಕ್ತಾಯ ಹಂತದಲ್ಲಿರುವ ೬೦೦ ಮನೆಗಳನ್ನು ಲಾಟರಿ ಮೂಲಕ ಪಾರದರ್ಶಕವಾಗಿ ವಸತಿ ರಹಿತರಿಗೆ ಹಂಚಿಕೆ ಮಾಡಲಾಗುತ್ತಿದೆ. ಜನತೆ ಇವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕಿ ಅನ್ನಪೂರ್ಣ ಈ ತುಕಾರಾಂ ತಿಳಿಸಿದರು.ಪಟ್ಟಣದ ಪುರಸಭೆ ಕಚೇರಿಯ ಆವರಣದಲ್ಲಿ ಸೋಮವಾರ ಲಾಟರಿ ಮೂಲಕ ಗುಂಪುಮನೆಗಳನ್ನು ವಸತಿ ರಹಿತರಿಗೆ ಹಂಚಿಕೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಬಿ.ವಿನಯ್ಕುಮಾರ್ಗೌಡ ಮಾತನಾಡಿ, ಪ್ರತಿ ಮನೆಗೆ ₹೬.೨೫ ಲಕ್ಷ ವೆಚ್ಚವಾಗಲಿದೆ. ಇದರಲ್ಲಿ ಕೇಂದ್ರ ಸರ್ಕಾರದ ₹೧.೫೦ ಲಕ್ಷ, ರಾಜ್ಯ ಸರ್ಕಾರದ ₹೨ ಲಕ್ಷ ಹಾಗೂ ಡಿಎಂಎಫ್ ಅನುದಾನ ₹೧ ಲಕ್ಷ ಅನುದಾನ ದೊರೆಯಲಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡ ವರ್ಗದವರು ₹೧.೭೫ ಲಕ್ಷ ಹಾಗೂ ಸಾಮಾನ್ಯ ವರ್ಗದವರು ₹೨.೨೫ ಲಕ್ಷ ವಂತಿಗೆಯನ್ನು ನೀಡಬೇಕು. ಲೋನ್ ಮೂಲಕ ಅಥವಾ ನಗದು ಹಣವನ್ನು ತುಂಬಬಹುದಾಗಿದೆ. ಹಂಚಿಕೆಯಾಗುತ್ತಿರುವ ೬೦೦ ಮನೆಗಳಲ್ಲಿ ೩೯೩ ಸಾಮಾನ್ಯ ವರ್ಗಕ್ಕೆ, ಪರಿಶಿಷ್ಟ ಜಾತಿಗೆ ೯೮ ಹಾಗೂ ಪರಿಶಿಷ್ಟ ಪಂಗಡಕ್ಕೆ ೧೦೯ ಮನೆಗಳನ್ನು ಉಂಚಿಕೆ ಮಾಡಲಾಗುತ್ತಿದೆ. ಉಳಿದ ಮನೆಗಳನ್ನು ಇನ್ನು ೫-೬ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಪೂರ್ಣಗೊಂಡ ನಂತರ, ಉಳಿದ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪುರಸಭೆಯ ಆಡಳಿತಾಧಿಕಾರಿ ಪಿ. ಪ್ರಮೋದ್ ಮಾತನಾಡಿ, ಸರ್ಕಾರದ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.ಗ್ರೇಡ್ ೨ ತಹಶೀಲ್ದಾರ್ ಸುಧಾ ಅರಮನೆ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಅಕ್ಷಯ್ ಲಾಡ್, ಪುರಸಭೆಯ ಸಿಬ್ಬಂದಿ, ನೂರಾರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.