ಪಾರದರ್ಶಕ ಮತ ಎಣಿಕೆ ನಡೆಯಬೇಕು: ಎಚ್‌.ಡಿ.ರೇವಣ್ಣ

KannadaprabhaNewsNetwork | Published : Jun 3, 2024 12:30 AM

ಸಾರಾಂಶ

ಪಾರದರ್ಶಕವಾಗಿ ಮತ ಎಣಿಕೆ ನಡೆಸಬೇಕು. ಈ ನಿಟ್ಟಿನಲ್ಲಿ ಮಾಧ್ಯಮದವರನ್ನು ಮತ ಎಣಿಕಾ ಕೇಂದ್ರದ ಒಳಗೆ ಇಟ್ಟುಕೊಳ್ಳಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು. ಸಕಲೇಶಪುರದ ಹರದನಹಳ್ಳಿಯ ತಮ್ಮ ನಿವಾಸದಲ್ಲಿ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಬಾಲಕೃಷ್ಣ ಹಾಗೂ ಹಾಸನ ಕ್ಷೇತ್ರದ ಎಚ್.ಪಿ.ಸ್ವರೂಪ್ ಪ್ರಕಾಶ್ ಹಾಗೂ ಕಾರ್ಯಕರ್ತರ ಜತೆಗೆ ಸಭೆ ನಡೆಸಿದ ನಂತರ ಮಾತನಾಡಿದರು.

ವಿವಿಧ ದೇವಾಲಯಗಳಲ್ಲಿ ಪೂಜೆ । ಮತ ಎಣಿಕೆ ಏಜೆಂಟರ ಗುರುತಿನ ಚೀಟಿ ಇಟ್ಟು ಹಳೆಬೀಡು ರಂಗನಾಥನಿಗೆ ಕೋರಿಕೆ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಾರದರ್ಶಕವಾಗಿ ಮತ ಎಣಿಕೆ ನಡೆಸಬೇಕು. ಈ ನಿಟ್ಟಿನಲ್ಲಿ ಮಾಧ್ಯಮದವರನ್ನು ಮತ ಎಣಿಕಾ ಕೇಂದ್ರದ ಒಳಗೆ ಇಟ್ಟುಕೊಳ್ಳಬೇಕು. ಈ ಬಗ್ಗೆ ಚುನಾವಣಾ ಆಯೋಗ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಡೈರೆಕ್ಷನ್ ಕೊಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.

ತಾಲೂಕಿನ ಹರದನಹಳ್ಳಿಯ ತಮ್ಮ ನಿವಾಸದಲ್ಲಿ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಬಾಲಕೃಷ್ಣ ಹಾಗೂ ಹಾಸನ ಕ್ಷೇತ್ರದ ಎಚ್.ಪಿ.ಸ್ವರೂಪ್ ಪ್ರಕಾಶ್ ಹಾಗೂ ಕಾರ್ಯಕರ್ತರ ಜತೆಗೆ ಸಭೆ ನಡೆಸಿದ ನಂತರ ಮಾತನಾಡಿದರು. ‘ನಾನು, ಬಾಲಣ್ಣ, ಸ್ವರೂಪ್ ಎಲ್ಲಾ ಸೇರಿ ಮೀಟಿಂಗ್ ಮಾಡಿದ್ದೇವೆ. ನಾಡಿದ್ದು ಬೆಳಿಗ್ಗೆ ಆರು ಗಂಟೆಗೆ ಕೌಂಟಿಂಗ್‌ಗೆ ಹೋಗ್ತಾರೆ. ಎಲ್ಲರೂ ಕೌಂಟಿಂಗ್ ವೇಳೆ ಇರುತ್ತಾರೆ’ ಎಂದು ತಿಳಿಸಿದರು.

ಹಳೇಕೋಟೆ ಬೆಟ್ಟದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಶಾಸಕ ಎಚ್.ಡಿ.ರೇವಣ್ಣ ಹಾಗೂ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಉಪಸ್ಥಿತಿಯಲ್ಲಿ ಮುಚ್ಚಿದ ಲಕೋಟೆಯಲ್ಲಿ ನೀಡಿದ ಮತ ಎಣಿಕೆ ಕೇಂದ್ರದ ಏಜೆಂಟರ ಗುರುತಿನ ಚೀಟಿಗಳಿಗೆ ಅರ್ಚಕರು ಪೂಜೆ ಸಲ್ಲಿಸಿದರು ನಂತರ ಶಾಸಕರು ತೀರ್ಥ ಪ್ರಸಾದ ಸ್ವೀಕರಿಸಿ ಲಕೋಟೆಯೊಂದಿಗೆ ತೆರಳಿದರು.

ಭಾನುವಾರ ಮುಂಜಾನೆ ಹರದನಹಳ್ಳಿಯಲ್ಲಿ ಇರುವ ಮನೆದೇವರು ಶ್ರೀ ದೇವೇಶ್ವರ ದೇವಾಲಯ, ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಶ್ರೀ ರಘುಪತಿ ದೇವಾಲಯದಲ್ಲಿ ಎಚ್‌.ಡೊಇ.ರೇವಣ್ಣ ಪೂಜೆ ಸಲ್ಲಿಸಿದರು. ರೇವಣ್ಣಗೆ ಹೈಕೋರ್ಟ್‌ ನೋಟಿಸ್‌

ಕನ್ನಡಪ್ರಭ ವಾರ್ತೆ ಹಾಸನಲೈಂಗಿಕ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿ ಇದೀಗ ಜಾಮೀನಿನ ಮೇಲೆ ಹೊರಬಂದಿರುವ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಜಾಮೀನು ರದ್ದುಪಡಿಸುವಂತೆ ಕೋರಿ ಎಸ್‌ಐಟಿ ಹೈಕೋರ್ಟ್‌ ಗೆ ಮೇಲ್ಮನವಿ ಸಲ್ಲಿಸಿರುವ ಹಿನ್ನೆಲೆ ಹೈಕೋರ್ಟ್‌ ರೇವಣ್ಣ ಅವರಿಗೆ ನೋಟಿಸ್‌ ಜಾರಿ ಮಾಡಿದೆ.ಜಾಮೀನು ಪಡೆದು ಹೊರಬಂದ ನಂತರದಲ್ಲಿ ಹೆಚ್ಚಾಗಿ ದೇವಾಲಯಗಳನ್ನು ಸುತ್ತುತ್ತಿರುವ ಎಚ್‌.ಡಿ.ರೇವಣ್ಣ ಅವರು ಭಾನುವಾರ ಕೂಡ ಹೊಳೆನರಸೀಪುರದ ಲಕ್ಷ್ಮಿನರಸಿಂಹಸ್ವಾಮಿ, ಹರದನಹಳ್ಳಿಯ ದೇವೇಶ್ವರ ಹಾಗೂ ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ದೇವಾಲಯಗಳಿಗೆ ಭೇಟಿ ನೀಡಿದ್ದರು. ಇದಾದ ನಂತರ ಹರದನಹಳ್ಳಿಯ ತಮ್ಮ ಮನೆಯಲ್ಲಿ ಜಿಲ್ಲೆಯ ಜೆಡಿಎಸ್‌ ಶಾಸಕರೊಂದಿಗೆ ಸಭೆ ನಡೆಸುವ ಸಂದರ್ಭದಲ್ಲಿ ಹೊಳೇನರಸೀಪುರ ಪೊಲೀಸ್‌ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಅಜಯ್‌ ಅವರು ಈ ನೋಟಿಸ್‌ ಅನ್ನು ರೇವಣ್ಣ ಅವರಿಗೆ ತಲುಪಿಸಿದರು.ನೋಟಿಸ್‌ ಪ್ರಕಾರ ರೇವಣ್ಣ ಅವರು ಇನ್ನು ಐದು ದಿನಗಳ ಒಳಗಾಗಿ ವಕೀಲರ ಮೂಲಕ ಕೋರ್ಟ್‌ಗೆ ಹಾಜರಾಗುವಂತೆ ಅದರಲ್ಲಿ ತಿಳಿಸಲಾಗಿದೆ. ಒಂದು ವೇಳೆ ಎಸ್‌ಐಟಿ ಮೇಲ್ಮನವಿಯನ್ನು ಹೈಕೋರ್ಟ್‌ನಲ್ಲಿ ಪರಿಗಣಿಸಿದ್ದೇ ಆದಲ್ಲಿ ರೇವಣ್ಣ ಅವರು ಮತ್ತೆ ಜೈಲು ಸೇರಬೇಕಾಗುತ್ತದೆ ಎನ್ನಲಾಗಿದೆ.

Share this article