ಸಾರಿಗೆ ಬಸ್ ಡಿಕ್ಕಿ: ವಕೀಲ, ಜೆಡಿಎಸ್ ಮುಖಂಡ ಸ್ಥಳದಲ್ಲೇ ಸಾವು

KannadaprabhaNewsNetwork |  
Published : May 19, 2026, 01:45 AM IST
18ಕೆಎಂಎನ್ ಡಿ23,24 | Kannada Prabha

ಸಾರಾಂಶ

ಕಾರಿಗೆ ಸಾರಿಗೆ ಬಸ್ ಡಿಕ್ಕಿಯಾಗಿ ವಕೀಲ, ಜೆಡಿಎಸ್ ಮುಖಂಡ ಕಣಿವೆ ಯೋಗೇಶ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಾಂಡವಪುರ ತಾಲೂಕಿನ ಕಣಿವೆ ಗೇಟ್ ಸಮೀಪದ ಬೋರೆ ಬಳಿ ಸೋಮವಾರ ಸಂಜೆ ನಡೆದಿದೆ. ಕಣಿವೆಕೊಪ್ಪಲು ಗ್ರಾಮದ, ಟಿಎಪಿಸಿಎಂಎಸ್‌ ಮಾಜಿ ನಿರ್ದೇಶಕ, ವಕೀಲರೂ ಆದ ಕಣಿವೆ ಯೋಗೇಶ್ ಸಾವು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕಾರಿಗೆ ಸಾರಿಗೆ ಬಸ್ ಡಿಕ್ಕಿಯಾಗಿ ವಕೀಲ, ಜೆಡಿಎಸ್ ಮುಖಂಡ ಕಣಿವೆ ಯೋಗೇಶ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಣಿವೆ ಗೇಟ್ ಸಮೀಪದ ಬೋರೆ ಬಳಿ ಸೋಮವಾರ ಸಂಜೆ ನಡೆದಿದೆ.

ತಾಲೂಕಿನ ಕಣಿವೆಕೊಪ್ಪಲು ಗ್ರಾಮದ, ಟಿಎಪಿಸಿಎಂಎಸ್‌ ಮಾಜಿ ನಿರ್ದೇಶಕ, ವಕೀಲರೂ ಆದ ಕಣಿವೆ ಯೋಗೇಶ್(49) ಅವರು ಪಾಂಡವಪುರ- ಕೆ.ಆರ್.ಪೇಟೆ ಮುಖ್ಯರಸ್ತೆಯಲ್ಲಿ ಚಿನಕುರಳಿ ಕಡೆಯಿಂದ ಪಾಂಡವಪುರ ಕಡೆಗೆ ಕಾರ್‌ನಲ್ಲಿ ಬರುತ್ತಿದ್ದಾಗ ಮೈಸೂರು ಕಡೆಯಿಂದ ವೇಗವಾಗಿ ಬಂದ ಸಾರಿಗೆ ಬಸ್ ನೇರವಾಗಿ ಕಾರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ವಿಷಯ ತಿಳಿದು ಸಾರ್ವಜನಿಕರು ಆಗಮಿಸಿ ಸಾರಿಗೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಡಿಪೋ ಮ್ಯಾನೇಜರ್ ಅವರನ್ನು ಸ್ಥಳಕ್ಕೆ ಕರೆಸಬೇಕು. ಅಧಿಕಾರಿ ಸ್ಥಳಕ್ಕೆ ಬರುವವರೆಗೂ ಮೃತದೇಹ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು.

ನಂತರ ಕೆಎಸ್ ಆರ್‌ಟಿಸಿ ಅಧಿಕಾರಿ ಬಂದು ಪರಿಹಾರ ನೀಡುವುದಾಗಿ ಭರವಸೆ ನೀಡಿದ ಬಳಿಕ ಮೃತದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಯಿತು. ವರ್ಷದ ಹಿಂದಷ್ಟೇ ಪುತ್ರಿ ಮತ್ತು ತಂದೆಯನ್ನು ಕಳೆದುಕೊಂಡಿದ್ದ ಕಣಿವೆ ಯೋಗೇಶ್ ಬಾಳಿನಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಮೃತರಿಗೆ ಪತ್ನಿ ತಾಪಂ ಮಾಜಿ ಸದಸ್ಯೆ ಗೀತಾ, ಓರ್ವ ಪುತ್ರ ಇದ್ದಾನೆ.

ಪಾಂಡವಪುರ ತಾಲೂಕು ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಜೆಡಿಎಸ್ ಪಕ್ಷದಲ್ಲಿ ದಲಿತ ಸಮುದಾಯದ ಪ್ರಭಾವಿ ಮುಖಂಡ ಎನಿಸಿದ್ದರು. ಯೋಗೇಶ್ ನಿಧನ ಹಿನ್ನೆಲೆಯಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮನ್ಮುಲ್‌ ನಿರ್ದೇಶಕ ಸಿ.ಶಿವಕುಮಾರ್, ಜಿಪಂ ಮಾಜಿ ಸದಸ್ಯ ಸಿ.ಅಶೋಕ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಬೆಳಗ್ಗೆ ತಾಲೂಕಿನ ಕಣಿವೆಕೊಪ್ಪಲು ಗ್ರಾಮದ ಸ್ವಜಮೀನಿನಲ್ಲಿ ಮೃತರ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.ಪತ್ರ ಬರೆದಿಟ್ಟು ಇಬ್ಬರು ಅಪ್ರಾಪ್ತೆಯರು ನಾಪತ್ತೆ

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಬಾಲಕಿಯರಿಬ್ಬರು ಮನೆಯಲ್ಲಿ ಪತ್ರ ಬರೆದಿಟ್ಟು ನಾಪತ್ತೆಯಾಗಿರುವ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ 16 ಹಾಗೂ 14 ವರ್ಷದ ಅಪ್ರಾಪ್ತ ಹೆಣ್ಣು ನಾಪತ್ತೆಯಾಗಿದ್ದಾರೆ.

ಮೇ 17ರ ಬೆಳಗ್ಗೆ ಹೆಣ್ಣು ಮಕ್ಕಳಿಬ್ಬರು ಬೇರೆಯವರಿಗೆ ಪೋನ್ ಮಾಡಲು ಪಕ್ಕದ ಮನೆಯವರ ಪೋನ್ ಕೇಳಿದ್ದಾರೆ. ಈ ವಿಚಾರ ತಿಳಿದ ತಾಯಿ ಯಾರಿಗೆ ಪೋನ್ ಮಾಡಲು ಪೋನ್ ಕೇಳಿದ್ದೀರಿ? ಎಂದು ತಮ್ಮ ಮಕ್ಕಳಿಗೆ ಗದರಿಸಿ ತಿಳಿವಳಿಕೆ ಹೇಳಿದ್ದಾರೆ. ಮಧ್ಯಾಹ್ನ 2.45ರ ಸಮಯದಲ್ಲಿ ಮನೆಯಿಂದ ಹೊರಗೆ ಇದ್ದ ಇಬ್ಬರೂ ಹೆಣ್ಣು ಮಕ್ಕಳು ಯಾರಿಗೂ ಹೇಳದೆ ಮನೆಬಿಟ್ಟು ಹೊರಟು ಹೋಗಿದ್ದಾರೆ.ನಂತರ ಮನೆಯಲ್ಲಿ ಒಂದು ಕಾಗದ ಸಿಕ್ಕಿದ್ದು, ಅದರಲ್ಲಿ ‘ಅಮ್ಮ-ಅಪ್ಪ ಸಾರಿ ನಿಮ್ಮ ಕಣ್ಣ ಮುಂದೆ ಸಾಯೋಕ್ಕೆ ಆಗಲ್ಲ ಅಂತ ನಾವು ದೂರ ಹೋಗಿ ಸತ್ತಿದ್ದೇವೆ ಸಾರಿ, ನಮ್ಮಿಬ್ಬರನ್ನು ಮರೆತುಬಿಡಿ’ ಎಂದು ಬರೆದಿದ್ದು, ಇದು ಬಾಲಕಿಯ ಕೈ ಬರಹ ಆಗಿದೆ. ಇವರನ್ನು ಪತ್ತೆ ಮಾಡಿಕೊಡಿ ಎಂದು ಪೋಷಕರು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂತ್ರಜ್ಞಾನ ಸರಿಯಾಗಿ ಬಳಸಿ ಕ್ರಿಯಾಶೀಲತೆ ಮೆರೆಯಿರಿ
.ಗ್ರಾಮ ಒನ್ ಸುಲಿಗೆ ಅಡ್ಡೆ ಮೇಲೆ ಅಧಿಕಾರಿಗಳ ದಾಳಿ