ನರಸಿಂಹರಾಜಪುರ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಮೂಲಕ 1650 ಖಾಯಿಲೆಗಳಿಗೆ ಚಿಕಿತ್ಸೆ ಪಡೆಬಹುದು ಎಂದು ಸರ್ಕಾರಿ ಆಸ್ಪತ್ರೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ವಿಭಾಗದ ಆರೋಗ್ಯ ಮಿತ್ರ ಮಂಜಳಾ ತಿಳಿಸಿದರು.
ನರಸಿಂಹರಾಜಪುರ : ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಮೂಲಕ 1650 ಖಾಯಿಲೆಗಳಿಗೆ ಚಿಕಿತ್ಸೆ ಪಡೆಬಹುದು ಎಂದು ಸರ್ಕಾರಿ ಆಸ್ಪತ್ರೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ವಿಭಾಗದ ಆರೋಗ್ಯ ಮಿತ್ರ ಮಂಜಳಾ ತಿಳಿಸಿದರು. ಶುಕ್ರವಾರ ರೋಟರಿ ಹಾಲ್ ನಲ್ಲಿ ರೋಟರಿ ಕ್ಲಬ್ ಹಾಗೂ ಹಿರಿಯ ನಾಗರಿಕ ವೇದಿಕೆ ಏರ್ಪಡಿಸಿದ್ದ ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಹಿಂದೆ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತಂದಿತ್ತು. ನಂತರ ರಾಜ್ಯ ಸರ್ಕಾರ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ತಂದಿತು. ನಂತರ ರಾಜ್ಯ ಸರ್ಕಾರ ಎರಡೂ ಯೋಜನೆಗಳನ್ನು ಒಟ್ಟು ಮಾಡಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಎಂಬ ಯೋಜನೆ ಜಾರಿಗೆ ತರಲಾಯಿತು. ಈ ಯೋಜನೆ ಪ್ರಕಾರ ಬಿಪಿಎಲ್ ಕಾರ್ಡುದಾರರಿಗೆ 5 ಲಕ್ಷದವರೆಗೆ ಚಿಕಿತ್ಸೆ ಪಡೆಯಲು ಅವಕಾಶವಿದೆ. ಎಪಿಎಲ್ ಕಾರ್ಡುದಾರರಿಗೆ 1.50 ಲಕ್ಷ ರುಪಾಯಿವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು.
ಪ್ರಥಮ ಹಂತದ ಖಾಯಿಲೆಗಳಿಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ದ್ವಿತೀಯ ಹಂತದ ಖಾಯಿಲೆಗಳಿಗೆ ತಾಲೂಕು ಅಥವಾ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ತೃತೀಯ ಹಂತದ ಖಾಯಿಲೆಗಳಾದ ಕ್ಯಾನ್ಸರ್, ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮುಂತಾದ ದೊಡ್ಡ ಖಾಯಿಲೆಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಆದರೆ, ತಾಲೂಕು ಅಥವಾ ಜಿಲ್ಲಾ ಸರ್ಕಾರಿ ಆಸ್ಪತ್ರೆ ವೈದ್ಯರಿಂದ ಲೆಟರ್ ತರುವುದು ಕಡ್ಡಾಯ ವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯಿಂದಲೇ ಹಣ ಭರಿಸಲಾಗುವುದು. ಆಯುಷ್ಮಾನ್ ಆರೋಗ್ಯ ಕರ್ನಾಟಕ ಕಾರ್ಡು, ರೇಷನ್ ಕಾರ್ಡು, ಆಧಾರ್ ಕಾರ್ಡುನ್ನು ಆಸ್ಪತ್ರೆಗಳಿಗೆ ತೋರಿಸಬೇಕು. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾದಾಗ ಚಿಕಿತ್ಸೆ ಮಾಡುತ್ತಾರೆ. ನಂತರ ಆಯಾ ತಾಲೂಕು ಸರ್ಕಾರಿ ಆಸ್ಪತ್ರೆಯಿಂದ ಪತ್ರ ನೀಡಬೇಕಾಗುತ್ತದೆ ಎಂದರು.
ಸಭೆಯಲ್ಲಿ ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಶಿವಮೊಗ್ಗ ಶಾಖೆ ಸೀನಿಯರ್ ಮ್ಯಾನೇಜರ್ ಉಮೇಶ್ ನಾಯಕ್ ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಬಗ್ಗೆ ಮಾಹಿತಿ ನೀಡಿ, ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಕಂಪನಿ ದೇಶದಾದ್ಯಂತ 16ಸಾವಿರ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರಾಜ್ಯದಲ್ಲಿ 4 ರಿಂದ 5 ಸಾವಿರ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ದೇಶದಲ್ಲಿ ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ನ 951 ಶಾಖೆಗಳಿವೆ. ರಾಜ್ಯದಲ್ಲಿ 250 ಶಾಖೆಗಳಿದ್ದು ನಮ್ಮ ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಕಂಪನಿ ಯಲ್ಲಿ 550 ನುರಿತ ವೈದ್ಯರಿದ್ದಾರೆ ಎಂದು ವಿವರಿಸಿದರು.
ಸಭೆ ಅಧ್ಯಕ್ಷತೆಯನ್ನು ತಾಲೂಕು ಹಿರಿಯ ನಾಗರಿಕ ಸಮಿತಿ ಅಧ್ಯಕ್ಷ ಎಚ್.ಆರ್.ದಿನೇಶ್ ವಹಿಸಿದ್ದರು. ಅತಿಥಿಗಳಾಗಿ ರೋಟರಿ ಕ್ಲಬ್ ಅಧ್ಯಕ್ಷ ಎನ್.ಕೆ.ಕಿರಣ್, ರೋಟರಿ ಕ್ಲಬ್ ಕಾರ್ಯದರ್ಶಿ ಪಿ.ಎಸ್.ವಿದ್ಯಾನಂದಕುಮಾರ್ ಇದ್ದರು.