ಕನ್ನಡಪ್ರಭ ವಾರ್ತೆ ಮಧುಗಿರಿ
ಶನಿವಾರ ತಾಲೂಕಿನ ಕಸಬಾ ಹೋಬಳಿ ತಿಮ್ಲಾಪುರ ಅಭಯಾರಣ್ಯದಲ್ಲಿ ಅರಣ್ಯ ಇಲಾಖೆಯಿಂದ ಕಾಡುಗಳಲ್ಲಿ ಆಕಸ್ಮಿಕವಾಗಿ ತಗಲುವ ಬೆಂಕಿ ಅವಗಡಗಳು ಹಾಗೂ ಪರಿಸರ ಸಂರಕ್ಷಣೆ ಪ್ರಾತ್ಯಕ್ಷಿತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಮೂಲ್ಯವಾದ ಹಸಿರನ್ನು ಸಂರಕ್ಷಿಸುವ ಹೊಣೆಗಾರಿಕೆ ನಾಗರಿಕರದ್ದು, ಆದರೆ ಒಮ್ಮೊಮ್ಮೆ ಪ್ರಾಕೃತಿಕ ಅವಘಡಗಳಿಗೆ ಸಿಲುಕಿ ಇಡೀ ಹಸಿರು ನಾಶವಾಗುವ ಸಾಧ್ಯತೆಗಳಿವೆ. ಅವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಜೀವರಾಶಿ ಉಳಿದು ಬದುಕಲು ಅವಕಾಶ ಕಲ್ಪಿಸಬೇಕಿದೆ.1898ರಲ್ಲಿ ಸಾಮಾಜಿಕ ಅರಣ್ಯವಾಗಿದ್ದ ಈ ಪ್ರದೇಶವು 2002ರಲ್ಲಿ ಅಭಯಾರಣ್ಯವಾಗಿ ಗುರುತಿಸಲ್ಪಟ್ಟಿದೆ. ತಿಮ್ಲಾಪುರ ಅರಣ್ಯ ಪ್ರದೇಶವು ಸುಮಾರು 5086 ಹೇಕ್ಟೇರ್ ವ್ಯಾಪ್ತಿಯಲ್ಲಿದ್ದು, ಇಲ್ಲಿ ಹಲವು ಬಗೆಯ ಮರಗಳು ಔಷಧಿ ಸಸಿಗಳು, ಜಿಂಕೆ, ಹೆಬ್ಬಾವು, ಸಾರಂಗ, ಕರಡಿ, ಚಿರತೆ, ನವಿಲು ಮತ್ತಿತರ ಪ್ರಾಣಿ ಪಕ್ಷಿಗಳು ಹತ್ತಾರು ವನ್ಯ ಜೀವಿಗಳು ಇಲ್ಲಿ ರಕ್ಷಣೆ ಪಡೆದು ತಮ್ಮ ಸಂತತಿಯ ತಳಿಯನ್ನು ಅಭಿವೃದ್ಧಿ ಪಡಿಸುತ್ತಾ ಪ್ರವಾಸಿಗರಿಗೆ ಕೈ ಬೀಸಿ ಕರೆಯುವ ಮೂಲಕ ಜನಾಕರ್ಷಣೆಯ ತಾಣವಾಗಿದೆ. ಇದರಿಂದ ಪ್ರವಾಸಿಗರು ಆಗಾಗ ಭೇಟಿ ನೀಡುವ ಮೂಲಕ ಈ ಅರಣ್ಯವನ್ನು ಇತರೆ ಭಾಗದ ಜನತೆಗೆ ಪರಿಚಯಿಸುವ ಕೆಲಸವಾಗುತ್ತಿದೆ. ಜನಸಾಮಾನ್ಯರು ಉರುವಲು ಬಳೆಕೆಗಾಗಿ ಮರಗಳನ್ನು ಕಡಿದು ಸ್ವಾರ್ಥಕ್ಕೆ ಬಳಸಿಕೊಳ್ಳುವರು. ಈಗ ಮರ ಗಿಡಗಳ ಮಾರಣ ಹೋಮವನ್ನು ತಡೆಗಟ್ಟದಿದ್ದರೆ ಮುಂದೆ ವನ್ಯ ಪ್ರಾಣಿಗಳನ್ನು ಕಾಪಾಡುವುದು, ನೋಡುವುದು ಕೂಡ ಕಷ್ಟವಾದೀತು. ಕೆಲವು ಭಾಗದಲ್ಲಿ ಅರಣ್ಯ ಒತ್ತುವರಿಯಿಂದಾಗಿ ವನ್ಯ ಪ್ರಾಣಿಗಳು ಕಾಡು ತೊರೆದು ನಾಡಿನತ್ತ ಮುಖ ಮಾಡಿದ್ದು, ಇಲಾಖೆಯ ಸಹಾಯಕ್ಕಾಗಿ 1926 ಉಚಿತ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಪ್ರಾಣಿಗಳ ಪಕ್ಷಿಗಳ ಬೇಟೆ ಕಾನೂನು ಬಾಹಿರವಾಗಿದ್ದು, ಇಂತಹ ಪ್ರಕರಣಗಳು ಕಂಡು ಬಂದರೆ ಕಾನೂನು ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಇಲಾಖೆಯವರಲ್ಲದೆ ಸುತ್ತಮುತ್ತಲ ಗ್ರಾಮಸ್ಥರು ಕಾಡು ಉಳಿಸಿ ನಾಡು ಬೆಳಸಲು ಸಹಕರಿಸಬೇಕು. ಮತ್ತು ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಕೈ ಜೋಡಿಸಿ ಪರಿಸರ ಉಳಿಸಿ ಬೆಳಸಲು ಮುಂದಾಗುವಂತೆ ಸುರೇಶ್ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಗಸ್ತು ಅರಣ್ಯ ಪಾಲಕ ಚಿದಾನಂದ್ ಎಸ್.ಚಲಗೇರಿ, ರಂಗನಾಥ್, ಟಿ.ಎಂ.ಶಿವರಾಜು, ಎಸ್.ರಮೇಶ್, ಪುಟ್ಟರಾಜು, ಪವನ್ ಕುಮಾರ್, ಚಿದಾನಂದ್ ,ಡಿ.ವಿ.ಹಳ್ಳಿ ಪ್ರೌಢಾಶಾಲೆ ಮತ್ತು ಸೋದೇನಹಳ್ಳಿ ಪ್ರೌಢಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.