ಮರಗಳ ತೆರವುಗೊಳಿಸಲು ಬಿಡೋದಿಲ್ಲ: ರೇಣುಕಾಚಾರ್ಯ

KannadaprabhaNewsNetwork |  
Published : May 12, 2026, 01:30 AM IST
11ಎಚ್.ಎಲ್.ಐ1  ತಾಲೂಕಿನ ಸುಂಕದಕಟ್ಟೆ ಗ್ರಾಮದ ಮಲ್ಲದೇವರಕಟ್ಟೆ  ಪ್ರದೇಶಕ್ಕೆ ಗ್ರಾಮದವರೊಂದಿಗೆ ಸೋಮವಾರ  ಭೇಟಿ ನೀಡಿ ಪರಿಶೀಲಿಸಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರುಈ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಗಿಡಮರಗಳನ್ನು ತೆರವುಗೊಳಿಸಬಾರದು ಇಲ್ಲಿನ ಜಾನುವಾರು ಪ್ರಾಣಿಪಕ್ಷಿಗಳಿಗೆ ತೊಂದರೆ ಕೊಡಬಾರದು ಎಂದು  ಕಟ್ಟು ನಿಟ್ಟಿನ ಎಚ್ಚರಿಕೆ ನೀಡಿದರು | Kannada Prabha

ಸಾರಾಂಶ

ಹೊನ್ನಾಳಿ ಪುರಸಭೆ ವ್ಯಾಪ್ತಿಯ ಸುಂಕದಕಟ್ಟೆ ಗ್ರಾಮ ಸಮೀಪದ ಮಲ್ಲದೇವರಕಟ್ಟೆ ಸರ್ವೆ ನಂ.4ರ 29.17 ಗುಂಟೆ ಅರಣ್ಯ ಪ್ರದೇಶದಲ್ಲಿ ನಿವೇಶನರಹಿತರಿಗೆ ವಸತಿ ಕಲ್ಪಿಸಲು ಮರಗಳ ತೆರವಿಗೆ ಅರಣ್ಯ, ಕಂದಾಯ, ಪುರಸಭೆ ಅಧಿಕಾರಿಗಳು ಸರ್ವೆಗೆ ಮುಂದಾಗಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಅರಣ್ಯ ಪ್ರದೇಶದಲ್ಲಿ ವಸತಿ ಕಲ್ಪಿಸಲು ಗಿಡ-ಮರಗಳನ್ನು ತೆರವುಗೊಳಿಸಲು ಬಿಡುವುದಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

- ಸುಂಕದಕಟ್ಟೆ ಗ್ರಾಮಸ್ಥರೊಂದಿಗೆ ತೆರಳಿ ವಿವಾದಿತ ಸ್ಥಳ ಪರಿಶೀಲಿಲನೆ

- - -

ಹೊನ್ನಾಳಿ: ಇಲ್ಲಿಯ ಪುರಸಭೆ ವ್ಯಾಪ್ತಿಯ ಸುಂಕದಕಟ್ಟೆ ಗ್ರಾಮ ಸಮೀಪದ ಮಲ್ಲದೇವರಕಟ್ಟೆ ಸರ್ವೆ ನಂ.4ರ 29.17 ಗುಂಟೆ ಅರಣ್ಯ ಪ್ರದೇಶದಲ್ಲಿ ನಿವೇಶನರಹಿತರಿಗೆ ವಸತಿ ಕಲ್ಪಿಸಲು ಮರಗಳ ತೆರವಿಗೆ ಅರಣ್ಯ, ಕಂದಾಯ, ಪುರಸಭೆ ಅಧಿಕಾರಿಗಳು ಸರ್ವೆಗೆ ಮುಂದಾಗಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಅರಣ್ಯ ಪ್ರದೇಶದಲ್ಲಿ ವಸತಿ ಕಲ್ಪಿಸಲು ಗಿಡ-ಮರಗಳನ್ನು ತೆರವುಗೊಳಿಸಲು ಬಿಡುವುದಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸೋಮವಾರ ಗ್ರಾಮಸ್ಥರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, 2020-21ರಲ್ಲಿ ತಾನು ಅಧಿಕಾರದಲ್ಲಿ ಇದ್ದಾಗ ಈ ಪ್ರದೇಶದ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಆದಕಾರಣ ಖುದ್ದಾಗಿ ಈ ಪ್ರದೇಶದಲ್ಲಿ ನಿವೇಶನ ರಹಿತರಿಗಾಗಿ ಜಾಗ ಮಂಜೂರಾತಿ ಮಾಡಿಸಿದ್ದೆ. ಅನಂತರ ಈ ಪ್ರದೇಶದ ಬಗ್ಗೆ ಸ್ಥಳೀಯ ಗ್ರಾಮಸ್ಥರು, ರೈತರಿಂದ ಸಮಗ್ರ ಮಾಹಿತಿ ಪಡೆದು 2023ರಲ್ಲಿ ತಾನೇ ಮಾಡಿಸಿದ್ದ ನಿವೇಶನ ಮಂಜೂರಾತಿ ಆದೇಶ ಕೂಡಲೇ ರದ್ದುಪಡಿಸುವಂತೆ ಜಿಲ್ಲಾಧಿಕಾರಿಗೆ ಪತ್ರ ಸಲ್ಲಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಮಲ್ಲದೇವರಕಟ್ಟೆ ಪ್ರದೇಶದ ಬಗ್ಗೆ ರಾಜಕೀಯ ಮಾಡಲಾರೆ. ಯಾರೂ ರಾಜಕೀಯ ಮಾಡದೇ ಸ್ಥಳೀಯರ ಕಷ್ಟ-ಸುಖಗಳಿಗೆ ಸ್ಪಂದಿಸುವುದು ಮುಖ್ಯವಾಗಿದೆ. ಗ್ರಾಮಸ್ಥರ ಕೋರಿಕೆ ಮೇರೆಗೆ ಇದೀಗ ಈ ಸ್ಥಳಕ್ಕೆ ಖುದ್ದಾಗಿ ಭೇಟಿ ಮಾಡಿ ಸಮಗ್ರ ಪ್ರದೇಶದ ಬಗ್ಗೆ ಮಾಹಿತಿಗಳನ್ನು ಪಡೆದಿದ್ದೇನೆ. ಈ ಪ್ರದೇಶಲ್ಲಿ 2 ಸಾವಿರಕ್ಕೂ ಹೆಚ್ಚು ಗಂಧದ ಮರಗಳು ಇವೆ. ಇನ್ನೂ ಅನೇಕ ಉತ್ತಮ ಜಾತಿಯ ಗಿಡ-ಮರಗಳಿವೆ. ಜೊತೆಗೆ ನವಿಲು, ಕರಡಿ ಸೇರಿದಂತೆ ವನ್ಯಜೀವಿಗಳು, ಪ್ರಾಣಿ-ಪಕ್ಷಿಗಳು ಆಶ್ರಯ ಪಡೆದಿವೆ. ಈ ಪ್ರದೇಶದ 4 ಎಕರೆ ವ್ಯಾಪ್ತಿಯಲ್ಲಿ ಕೆರೆ ಕೂಡ ಇದೆ. ಇದು ಇಲ್ಲಿನ ಜಾನುವಾರುಗಳಿಗೆ, ಪಕ್ಷಿಗಳಿಗೆ ಕುಡಿಯುವ ನೀರಿನ ಅಶ್ರಯ ತಾಣವಾಗಿದೆ ಎಂದು ರೇಣುಕಾಚಾರ್ಯ ಹೇಳಿದರು.

ಇಂತಹ ಅರಣ್ಯ ಪ್ರದೇಶವನ್ನು ನಿವೇಶನ ರಹಿತರಿಗಾಗಿ ವಸತಿ ಸೌಲ್ಯಭಕ್ಕಾಗಿ ಹಾಳು ಮಾಡುವುದು ಬೇಡ. ಇಲ್ಲಿನ ಪ್ರಕೃತಿ ಸೌಂದರ್ಯ ಗಮನಿಸಿ, ಇನ್ನಷ್ಟು ಅಭಿವೃದ್ಧಿಪಡಿಸಿದರೆ ಇದೊಂದು ಉತ್ತಮ ಪ್ರವಾಸಿ ತಾಣವೂ ಆಗುವುದರಲ್ಲಿ ಸಂಶಯವೇ ಇಲ್ಲ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಗ್ರಾಮದ ಹೋರಾಟಗಾರ ನರಸಿಂಹ ಮೂರ್ತಿ, ರೈತ ಮುಖಂಡ ಕರಿಬಸಪ್ಪ, ಅರಬಗಟ್ಟೆ ಗ್ರಾ.ಪಂ, ಮಾಜಿ ಅಧ್ಯಕ್ಷ ಎಸ್.ಆರ್.ಮಂಜುನಾಥ್, ಮಾಜಿ ಸದಸ್ಯ ಎ.ಕೆ. ರುದ್ರಪ್ಪ, ವಸಂತಪ್ಪ, ಎಸ್.ಮಂಜಪ್ಪ ಮುಂತಾದವರು ಇದ್ದರು.

- - -

(ಬಾಕ್ಸ್‌) * ಜಾನುವಾರುಗಳೊಂದಿಗೆ ಪ್ರತಿಭಟನೆ

ಮೇ 18ರಂದು ಸೋಮವಾರ ತಾಲೂಕು ಕಚೇರಿ ಮುಂಭಾಗದಲ್ಲಿ ಜಾನುವಾರುಗಳು, ಕುರಿ, ಮೇಕೆಗಳೊಂದಿಗೆ ಸಹಸ್ರಾರು ಸಂಖ್ಯೆಯಲ್ಲಿ ಸುಂಕದಕಟ್ಟೆ ಗ್ರಾಮಸ್ಥರೊಂದಿಗೆ ಆಗಮಿಸಿ ಅರಣ್ಯ ಪ್ರದೇಶದಲ್ಲಿ ನಿವೇಶನ ಮಾಡಲು ಹೊರಟಿರುವ ಸರ್ಕಾರದ ಕ್ರಮವನ್ನು ಉಗ್ರವಾಗಿ ಖಂಡಿಸಿ ಪ್ರತಿಭಟನೆ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಮಲ್ಲದೇವರಕಟ್ಟೆಯಲ್ಲಿಯೇ ಟೆಂಟ್ ಹಾಕಿ ಧರಣಿ ನಡೆಸಲಾಗುವುದು. ಅಗತ್ಯಬಿದ್ದರೆ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲು ಸಿದ್ಧ ಎಂದು ರೇಣುಕಾಚಾರ್ಯ ಹೇಳಿದರು.

- - -

-11ಎಚ್.ಎಲ್.ಐ1:

ಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಗ್ರಾಮದ ಮಲ್ಲದೇವರಕಟ್ಟೆ ಪ್ರದೇಶಕ್ಕೆ ಸೋಮವಾರ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಗ್ರಾಮದವರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭತ್ತದ ಬೆಳೆ ರಕ್ಷಣೆಗೆ ನೀರು ಹರಿಸಲು ರವೀಂದ್ರ ಶ್ರೀಕಂಠಯ್ಯ ಆಗ್ರಹ
ನೀರಿದ್ದಾಗ ತಾತ್ಸಾರ, ಬರವಿದ್ದಾಗ ಲೆಕ್ಕಾಚಾರ..!