ಬುಡಕಟ್ಟು ಜನಾಂಗದವರು ಶಿಕ್ಷಣದತ್ತ ಹೆಚ್ಚು ಗಮನಹರಿಸಬೇಕು : ತಮ್ಮಯ್ಯ

KannadaprabhaNewsNetwork | Published : May 26, 2025 12:05 AM
ಚಿಕ್ಕಮಗಳೂರು, ಪ್ರಕೃತಿಯ ನಡುವೆ ಜೀವನ ರೂಪಿಸಿಕೊಂಡಿರುವ ಆದಿವಾಸಿ ಬುಡಕಟ್ಟು ಜನಾಂಗದವರು ಮೊದಲು ಶಿಕ್ಷಣಕ್ಕೆ ಆದ್ಯತೆ ನೀಡಿ ಸಮರ್ಥ ವ್ಯಕ್ತಿಗಳಾಗಬೇಕು ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಕರೆ ನೀಡಿದರು.

ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್‌, ಅಂಬೇಡ್ಕರ್‌ ಭವನದಲ್ಲಿ ವಿಚಾರ ಸಂಕಿರಣ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪ್ರಕೃತಿಯ ನಡುವೆ ಜೀವನ ರೂಪಿಸಿಕೊಂಡಿರುವ ಆದಿವಾಸಿ ಬುಡಕಟ್ಟು ಜನಾಂಗದವರು ಮೊದಲು ಶಿಕ್ಷಣಕ್ಕೆ ಆದ್ಯತೆ ನೀಡಿ ಸಮರ್ಥ ವ್ಯಕ್ತಿಗಳಾಗಬೇಕು ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಕರೆ ನೀಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್‌ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಪೂರ್ವಿಕರ ಕಾಲದಿಂದಲೂ ಕಾಡಿನ ಮಧ್ಯೆಯೇ ಬದುಕು ಕಟ್ಟಿಕೊಂಡು ಸಾಗುತ್ತಿ ರುವ ಜನಾಂಗದವರು ತಮ್ಮ ಮಕ್ಕಳ ಭವಿಷ್ಯವನ್ನು ಶಿಕ್ಷಣದಿಂದ ವಂಚಿತಗೊಳಿಸಬಾರದು. ಐಎಎಸ್, ಐಪಿಎಸ್ ಅಥವಾ ಸರ್ಕಾರಿ ಹುದ್ದೆಗಳ ಕನಸನ್ನು ಹೊತ್ತಿರುವ ಮಕ್ಕಳಿಗೆ ಪಾಲಕರು ಎಲ್ಲಾ ಹಂತದಲ್ಲೂ ಪ್ರೋತ್ಸಾಹಿಸಬೇಕು ಎಂದರು.

ಬುಡಕಟ್ಟು ಸಮುದಾಯವನ್ನು ಮೇಲ್ದರ್ಜೇಗೇರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ಸವಲತ್ತುಗಳನ್ನು ಪೂರೈಸಿ ಹೊಸ ಬದುಕನ್ನು ರೂಪಿಸುತ್ತಿದೆ. ಆ ನಿಟ್ಟಿನಲ್ಲಿ ಜನಾಂಗದ ಮಕ್ಕಳು ಕಠಿಣ ಪರಿಶ್ರಮ, ನಿರಂತರ ಕಲಿಕೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಜೊತೆಗೆ ಪೂರ್ವಿಕರ ಆಚಾರ ವಿಚಾರ, ಪೂಜಾ ಪದ್ಧತಿ, ಹಿಂದಿನ ಕಸುಬು ಉಳಿಸಬೇಕು ಎಂದು ತಿಳಿಸಿದರು.ಈಗಾಗಲೇ ಆದಿವಾಸಿ ಪರಿಷತ್ ರಾಜ್ಯಾದ್ಯಂತ ಸಂಘಟನೆಯಲ್ಲಿ ತೊಡಗಿಸಿಕೊಂಡು ಬುಡಕಟ್ಟು ಜನಾಂಗದವರನ್ನು ಒಗ್ಗೂಡಿಸುತ್ತಿದೆ. ಪರಿಷತ್‌ನ ಹೋರಾಟಗಳಿಗೆ ಜನಾಂಗದವರು ಕೈಜೋಡಿಸಬೇಕು. ಅಲ್ಲದೇ ಸಂಕಷ್ಟದ ನೆರವಿಗೆ ಆಸರೆ ಯಾಗುತ್ತಿರುವ ಪರಿಷತ್ ಮುಖಂಡರ ಕೈಬಲಪಡಿಸಬೇಕು ಎಂದರು.ಆದಿವಾಸಿ ಬುಡಕಟ್ಟು ಪರಿಷತ್ ಗೌರವಾಧ್ಯಕ್ಷ ಡಾ. ಕೆ.ಎಂ.ಮೈತ್ರಿ ಮಾತನಾಡಿ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಆದಿವಾಸಿ ಜನಾಂಗ ನೆಲೆಯೂರಿದೆ. ಪ್ರಸ್ತುತ ರಾಜ್ಯ ಸರ್ಕಾರ ಸಮುದಾಯಕ್ಕೆ ನೀಡುತ್ತಿರುವ ಸೌಕರ್ಯ ತಮಿಳುನಾಡಿನಲ್ಲಿ ಸಿಗುತ್ತಿಲ್ಲ. ಕೇವಲ ಜಾತಿ ಪ್ರಮಾಣ ಪತ್ರ ಪಡೆಯಲು ನ್ಯಾಯಾಲಯದ ಮೆಟ್ಟಿಲೇರಬೇಕಿದೆ ಎಂದರು.ಬುಡಕಟ್ಟು ಜನರನ್ನು ಕಾಡಿನಿಂದ ಹೊರಕಳಿಸುವ ಕೆಲಸಕ್ಕೆ ಕೈಹಾಕಿದರೆ ಸಮುದಾಯ ಕ್ಷೀಣಿಸಲಿದೆ. ಹೀಗಾಗಿ ಹೊರ ತೆರಳಿರುವ ಜನರನ್ನು ಮತ್ತೊಮ್ಮೆ ಕರೆತರುವ ಪ್ರಯತ್ನಕ್ಕೆ ಮುಂದಾಗುವ ಮೂಲಕ ಸರ್ಕಾರದ ಮುಂದೆ ಶಕ್ತಿ ಪ್ರದರ್ಶಿಸ ಬೇಕು. ನಿರ್ಲಕ್ಷ್ಯ ವಹಿಸಿದರೆ ಜನಾಂಗದ ಸಂತತಿ ಅವಿನಾಶದತ್ತ ಸಾಗಲಿದೆ ಎಂದು ಎಚ್ಚರಿಸಿದರು.ಮುಂದಿನ ಪೀಳಿಗೆ ಮಕ್ಕಳಿಗೆ ಕಾಡು ವೃಕ್ಷಗಳನ್ನು ಪೂಜಿಸುವ ಸಂಪ್ರದಾಯ, ಪದ್ಧತಿಗಳನ್ನು ಪರಿಚಯಿಸುವುದು ಅತಿ ಮುಖ್ಯ. ಆಧುನಿಕತೆಗೆ ಒಗ್ಗಿದರೆ ಕಾಲಕ್ರಮೇಣ ಎಲ್ಲಾವೂ ಮರೆಯಾಗಲಿದೆ. ಜೊತೆಗೆ ಪರಿಷತ್‌ನ ಸಭೆ, ವಿಚಾರ ಸಂಕಿರಣ ಕಾರ್ಯಕ್ರಮ ಹಿಂದಿನಂತೆ ವೃಕ್ಷದಡಿ ಅಥವಾ ಜಲಪಾತಗಳ ಸಮೀಪ ನಡೆಸಬೇಕು ಎಂದು ಕಿವಿಮಾತು ಹೇಳಿದರು.ಇತ್ತೀಚೆಗೆ ಅಲೆಮಾರಿ ಜನಾಂಗದ ಮಕ್ಕಳನ್ನು ಅತ್ಯಾಚಾರಗೈದು ಮುಚ್ಚಿಹಾಕುವ ಪ್ರಕರಣಗಳು ಬಲಾಡ್ಯ ಜನಾಂಗ ಮಾಡುತ್ತಿದೆ. ಅಲ್ಲದೇ ಸಮಾಜದ ವ್ಯವಸ್ಥೆ ಬಲಾಡ್ಯರ ಪರವಾಗಿ ನಿಂತಿರುವುದು ದುರ್ದೈವ, ಇದನ್ನು ತಡೆಗಟ್ಟಲು ಪರಿಷತ್‌ನ ಸಂಘಟನಾತ್ಮಕ ಶಕ್ತಿಯಿಂದ ಮಾತ್ರ ಸಾಧ್ಯವಿದೆ ಎಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಮ್ ಅಮಟೆ ಮಾತನಾಡಿ, ಆದಿವಾಸಿ ಜನಾಂಗದವರ ಮೇಲೆ ದೌರ್ಜನ್ಯ, ಶೋಷಣೆ ಅಥವಾ ಇನ್ಯಾವುದೇ ಸಂಕಷ್ಟಗಳು ಎದುರಾದರೆ ಕಾನೂನಾತ್ಮಕವಾಗಿ ಪೊಲೀಸ್ ಇಲಾಖೆ ಸದಾ ಜೊತೆ ಗಿರಲಿದೆ. ಅಲ್ಲದೇ ಬುಡಕಟ್ಟು ಸಮುದಾಯಕ್ಕೆ ಎಲ್ಲಾ ರೀತಿಯಲ್ಲೂ ಸಹಕಾರ ಅತ್ಯವಶ್ಯ ಎಂದು ತಿಳಿಸಿದರು.ಅಖಿಲ ಭಾರತ ಆದಿವಾಸಿ ವಿಕಾಸ ಪರಿಷತ್ ದಕ್ಷಿಣ ಪ್ರಾಂತಿಯ ಅಧ್ಯಕ್ಷ ತಿರುಕೇಶವನ್, ಸದಸ್ಯ ತಿರುಮಾ ಧವನ್, ತಮಿಳುನಾಡು ಅಧ್ಯಕ್ಷ ಡಿ.ಲೋಕನಾಥನ್ ಮಾತನಾಡಿದರು.ಈ ಸಂದರ್ಭದಲ್ಲಿ ರಾಜ್ಯ ಆದಿವಾಸಿ ರಕ್ಷಣಾ ಪರಿಷತ್ ಕಾರ್ಯಾಧ್ಯಕ್ಷ ಮಹಾಂತೇಶ್ ಎಸ್.ಕೌಲಗಿ, ಕಾನೂನು ಸಲಹೆಗಾರ ಡಾ. ಮಧುಕುಮಾರ್, ಪ್ರಧಾನ ಕಾರ್ಯದರ್ಶಿ ಪಿ.ರಾಜೇಶ್, ಖಜಾಂಚಿ ಶ್ರೀನಿವಾಸ್‌ಗೌಡ್ಲು, ಸಂಚಾಲಕ ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಡೆನೆರಳು ಶಂಕರ್, ಲ್ಯಾಂಪ್ಸ್ ಮಹಾಮಂಡಳ ಅಧ್ಯಕ್ಷ ಬಿ.ಕಾವೇರ, ಹರಿಣಾಶಿಕಾರಿ ಬುಡಕಟ್ಟಿನ ಮುಖಂಡ ಸಿದ್ದಣ್ಣ ಕಾಳೆ, ಹಕ್ಕಿ ಪಿಕ್ಕಿ ಬುಡಕಟ್ಟು ಮುಖಂಡ ಶಿಕಾರಿ ರಾಮು, ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಮಾಣಿಕ್ ಉಪಸ್ಥಿತರಿದ್ದರು. 25 ಕೆಸಿಕೆಎಂ 1ಚಿಕ್ಕಮಗಳೂರಿನ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್‌ ಭಾನುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಉದ್ಘಾಟಿಸಿದರು.