ಬದುಕಿನಲ್ಲಿ ಲಿಂಗತತ್ವ ಅಳವಡಿಸಿಕೊಂಡವರೇ ನಿಜವಾದ ಲಿಂಗಾಯತ: ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ

KannadaprabhaNewsNetwork |  
Published : Sep 10, 2026, 02:15 AM IST
ಮುಂಡರಗಿಯಲ್ಲಿ ಜರುಗಿದ ಹಡಪದ ಅಪ್ಪಣ್ಣನವರ 892ನೇ ಜಯಂತ್ಯುತ್ಸವವನ್ನು ಮಾಜಿ ಸಚಿವ ಎಸ್.ಎಸ್. ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ಯಾರು ಲಿಂಗತತ್ವವನ್ನು ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಾರೋ ಅವರು ನಿಜವಾದ ಲಿಂಗಾಯತ.

ಕನ್ನಡಪ್ರಭ ವಾರ್ತೆ ಮುಂಡರಗಿ

ಲಿಂಗವು ಯಾರೊಬ್ಬರ ವೈಯಕ್ತಿಕ ಅಥವಾ ಜಾತಿಯ ಸ್ವತ್ತಲ್ಲ. ಲಿಂಗವು ಲಿಂಗಾಯತರದ್ದಲ್ಲ, ವೀರಶೈವರದ್ದಲ್ಲ, ಜಂಗಮರದ್ದಲ್ಲ, ಪಂಚಾಚಾರ್ಯರದ್ದೂ ಅಲ್ಲ; ಯಾರು ಲಿಂಗತತ್ವವನ್ನು ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಾರೋ ಅವರು ನಿಜವಾದ ಲಿಂಗಾಯತ ಎಂದು ತಂಗಡಗಿಯ ಶಿವಶರಣ ಹಡಪದ ಅಪ್ಪಣ್ಣ ಸಂಸ್ಥಾನ ಮಠದ ಪೀಠಾಧಿಪತಿ ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮೀಜಿ ಹೇಳಿದರು.

ಪಟ್ಟಣದ ಪುರಸಭೆ ಪಕ್ಕದ ಪೊಲೀಸ್ ಪರೇಡ್ ಮೈದಾನದಲ್ಲಿ ತಾಲೂಕಾ ಮಟ್ಟದ ಶಿವಶರಣ ಹಡಪದ ಅಪ್ಪಣ್ಣನವರ 892ನೇ ಜಯಂತ್ಯುತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು. ಹಡಪದ ಸಮುದಾಯವು ಮೂಲತಃ ಲಿಂಗಾಯತ ಸಮುದಾಯವೇ ಆಗಿದೆ. ಆದರೆ ನಮ್ಮ ಸಮಾಜಕ್ಕೆ ಇಂದಿಗೂ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಿಗಬೇಕಾದ ಸೂಕ್ತ ಅಸ್ತಿತ್ವ ಸಿಕ್ಕಿಲ್ಲ. ಸರ್ಕಾರ ಮತ್ತು ಜನಪ್ರತಿನಿಧಿಗಳು ನಮ್ಮ ಸಮುದಾಯಕ್ಕೆ ನ್ಯಾಯಯುತವಾಗಿ ದೊರೆಯಬೇಕಾದ 2ಎ ಮೀಸಲಾತಿಯನ್ನು ಒದಗಿಸಿಕೊಡಬೇಕು. ನಮ್ಮ ಸಮಾಜದ ನೋವು, ಧ್ವನಿಯನ್ನು ಸರ್ಕಾರ ಆಲಿಸಬೇಕು. ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿಯವರೇ ಖುದ್ದಾಗಿ ನಮ್ಮ ಮಠ ಹಾಗೂ ಸಮಾಜದ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದರು.

ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಸಮಾನತೆಯೇ ಬಸವಧರ್ಮದ ಜೀವಾಳ. ಬಸವಾದಿ ಶರಣರ ಕಾಲದಲ್ಲಿ ಹಡಪದ ಅಪ್ಪಣ್ಣ, ಮಡಿವಾಳ ಮಾಚಿದೇವ, ಡೋಹರ ಕಕ್ಕಯ್ಯ, ಮಾದಾರ ಚನ್ನಯ್ಯ ಸೇರಿದಂತೆ ಸಮಾಜದ ಕಟ್ಟಕಡೆಯ ಶ್ರಮಿಕ ವರ್ಗದವರೆಲ್ಲರೂ ಸಮಾನತೆಯ ಹಕ್ಕನ್ನು ಪಡೆದಿದ್ದರು. ಬಸವಣ್ಣನವರು ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ಮಹಿಳೆಯರಿಗೆ ಸಮಾನ ಸ್ಥಾನಮಾನ ತಂದುಕೊಟ್ಟರು. ಆದರೆ, ಇಂದು ಬಸವತತ್ವದ ಮಠಗಳಲ್ಲಿಯೇ ಸಮಾನತೆ ಕಾಣೆಯಾಗುತ್ತಿರುವುದು ವಿಷಾದನೀಯ ಎಂದರು.

ನಂದಿವೇರಿ ಮಠದ ಶಿವಕುಮಾರಸ್ವಾಮಿಜಿ ಮಾತನಾಡಿ, ಶತಮಾನಗಳು ಕಳೆದರೂ ಆ ವಚನಗಳು ಇಂದಿಗೂ ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತಿವೆ. ನಾವು ಬಸವಣ್ಣ ಮತ್ತು ಅಪ್ಪಣ್ಣನವರ ಅನುಯಾಯಿಗಳಾಗಬೇಕಾದರೆ ಮೊದಲು ಇಷ್ಟಲಿಂಗವನ್ನು ಧರಿಸಿ, ನಿತ್ಯವೂ ಲಿಂಗಾರ್ಚನೆ ಮಾಡಬೇಕು ಎಂದರು. ತಾಲೂಕಾ ಶಿವಶರಣ ಹಡಪದ ಅಪ್ಪಣ್ಣ ಸಂಘದ ಈರಣ್ಣ ಹಡಪದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೊಸಹಳ್ಳಿಯ ಶಿಕ್ಷಕ ಎ.ವಿ. ಪ್ರಭು ಸಂಪಾದಿಸಿದ ನಿಜಸುಖಿ ಹಡಪದ ಅಪ್ಪಣ್ಣ ವಚನ ಪುಸ್ತಕವನ್ನು ಎಸ್.ಎಸ್. ಪಾಟೀಲ ಬಿಡುಗಡೆಗೊಳಿಸಿದರು. ರಾಜೀವಗಾಂಧಿ ವೈದ್ಯಕೀಯ ವಿವಿ ಸಿಂಡಿಕೇಟ್ ಸದಸ್ಯ ಡಾ. ವಿರೇಶ ಹಂಚಿನಾಳ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉದಯಕುಮಾರ ಯಲಿವಾಳ, ಪುರಸಭೆ ಮುಖ್ಯಾಧಿಕಾರಿ ಶಂಕರ್ ಹುಲ್ಲಮ್ಮನವರಗೆ ಹಡಪದ ಅಪ್ಪಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಡಾ. ಬಿ.ಎಸ್. ಮೇಟಿ, ಎಚ್.ಡಿ. ಪೂಜಾರ, ಲಕ್ಷ್ಮಣ ತಗಡಿನಮನಿ, ಮಹಾಂತೇಶ ನಾವಿ, ವಿಶ್ವನಾಥ ಅಬ್ಬೀಗೇರಿ, ತಿಪ್ಪಣ್ಣ ಹರ್ಲಾಪೂರ, ಡಾ. ಶಂಕರ ಭಾವಿಮನಿ, ರೇವಣಸಿದ್ದಪ್ಪ ಶಿವಾನಂದ ಹಡಪದ, ರವಿ ಹಡಪದ, ಕರಿಬಸಪ್ಪ ಹಡಪದ, ಸುರೇಶ ಹಡಪದ ಸೇರಿದಂತೆ ಅನೇಕರಿದ್ದರು. ಪಡಪದ ಅಪ್ಪಣ್ಣ ಸಮಾಜದ ರಾಜ್ಯಾಧ್ಯಕ್ಷ ದೇವು ಹಡಪದ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಹಡಪದ ಸ್ವಾಗತಿಸಿ, ಪಂಚಾಕ್ಷರಿ ಹಡಪದ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಡಾ: ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮರು ಮಾರಾಟ!
ದೇಶಕ್ಕೆ ಆರೋಗ್ಯವಂತ ಸಮಾಜ ಅತ್ಯಗತ್ಯ