ರಾಣಿಬೆನ್ನೂರು: ಹುಟ್ಟು ಸಾವು ನಮ್ಮ ಕೈಯಲ್ಲಿ ಇಲ್ಲ. ಆದರೆ ಬದುಕು ನಮ್ಮ ಕೈಯಲ್ಲಿದೆ. ಮಾತು ಒಂದುಗೂಡಿಸಬೇಕೇ ಹೊರತು ಒಡೆಯಬಾರದು. ಒಡೆದುಹೋದ ಮನಸ್ಸುಗಳನ್ನು ಬೆಸೆಯುವುದೇ ನಿಜವಾದ ಧರ್ಮವೆಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಸ್ವಾಮೀಜಿ ನುಡಿದರು.ತಾಲೂಕಿನ ಬೇಲೂರು ಗ್ರಾಮದಲ್ಲಿ ಬುಧವಾರ ಬಸವೇಶ್ವರ ಮಂಗಲ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಮಾನವ ಜೀವನ ಉತ್ಕೃಷ್ಟ ಅರಿವು ಆಚಾರಗಳಿಂದ ಸಮೃದ್ಧಗೊಳ್ಳಬೇಕು. ಧರ್ಮ, ಸಂಪ್ರದಾಯ, ಪರಂಪರೆಗಳಲ್ಲಿ ನಮ್ಮ ನಂಬಿಗೆ ವಿಶ್ವಾಸಗಳನ್ನು ಕಳೆದುಕೊಳ್ಳಬಾರದು. ಜೀವನಾಧಾರಕ್ಕೆ ನೀರು ಅನ್ನ ಗಾಳಿ ಮತ್ತು ಒಳ್ಳೆಯ ಮಾತು ಮುಖ್ಯ. ಹಾಗೆಯೇ ಜೀವನದ ಉಜ್ವಲ ಭವಿಷ್ಯಕ್ಕೆ ಧರ್ಮಾಚರಣೆ ಅಗತ್ಯವಾಗಿದೆ. ಜ್ಞಾನ ಕ್ರಿಯೆಗಳ ಸಂಗಮದ ಬದುಕು ಉತ್ಕರ್ಷ ಬದುಕಿಗೆ ಅಡಿಪಾಯವಾಗುತ್ತದೆ. ಉತ್ತಮ ಚಿಂತನೆಗಳು ನಮ್ಮ ಬದುಕಿಗೆ ಬೆಳಕು ತೋರುವುದು ಅಷ್ಟೇ ಅಲ್ಲ. ಪರರ ಬದುಕಿಗೂ ಬೆಳಕಾಗಿ ಕಾಣುತ್ತದೆ ಎಂದರು.ದಿಂಡದಹಳ್ಳಿ ಪಶುಪತಿ ಶಿವಾಚಾರ್ಯರು ಮಾತನಾಡಿ, ಎಲ್ಲವೂ ಇದ್ದು ಶಕ್ತಿಶಾಲಿಗಳು ಎನಿಸುವುದು ದೊಡ್ಡದಲ್ಲ. ಎಲ್ಲವೂ ಕಳೆದುಕೊಂಡರೂ ತೋರುವ ಧೈರ್ಯವೇ ನಿಜವಾದ ಶಕ್ತಿ. ಅಡವಿಗಳಲ್ಲಿ ರಾಮ ಅಲೆದರೂ ಕೆಡಲಿಲ್ಲ. ಅಂತಃಪುರದಲ್ಲಿ ರಾವಣ ಬೆಳೆದರೂ ಒಳ್ಳೆಯವನಾಗಲಿಲ್ಲ ಎಂದರು. ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯರು ಮಾತನಾಡಿ, ಉರಿಯುವ ದೀಪ ಸಹಸ್ರಾರು ಜನರಿಗೆ ಬೆಳಕು ನೀಡುವಂತೆ ಆಚಾರ್ಯರು ಮತ್ತು ಋಷಿಮುನಿಗಳು ತೋರಿದ ದಾರಿ ನಮ್ಮೆಲ್ಲರ ಬಾಳಿಗೆ ಬೆಳಕು ನೀಡುತ್ತವೆ. ಪರಶಿವನ ಸಾಕಾರ ರೂಪವೇ ಶ್ರೀ ಗುರು ಎಂದರು.ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ವಿಠಲಾಪುರ ಹಿರೇಮಠದ ಗಂಗಾಧರಸ್ವಾಮಿ ಇವರಿಂದ ಭಕ್ತಿಗೀತೆ ಜರುಗಿತು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ರಕ್ತದಾನ ಶಿಬಿರ ನಡೆಯಿತು. ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ಜರುಗಿತು.ಅಲೆಮಾರಿ ಕುಟುಂಬಗಳಿಗೆ ತಾಡಪತ್ರಿ ವಿತರಣೆ
ಹಾನಗಲ್ಲ: ನೀಡಿದ ಭರವಸೆಯಂತೆ ಪಟ್ಟಣದ ಹೊರವಲಯದ ಬಡಾವಣೆಯಲ್ಲಿ ವಾಸಿಸುತ್ತಿರುವ ಅಲೆಮಾರಿಗಳು ಹಾಗೂ ಡೊಂಬರು, ಸುಡುಗಾಡುಸಿದ್ಧ ಜನಾಂಗದವರು ಗುಡಿಸಲುಗಳನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಅಲೆಮಾರಿ ಅಭಿವೃದ್ಧಿ ನಿಗಮ 32 ಕುಟುಂಬಗಳಿಗೆ 38 ತಾಡಪತಿಗಳನ್ನು ವಿತರಿಸಲಾಯಿತು.ಈ ಅಲೆಮಾರಿಗಳ ವಸತಿಯಲ್ಲಿ ಹಲವು ಸೌಲಭ್ಯಗಳ ಕೊರತೆ ಕುರಿತು ಕನ್ನಡಪ್ರಭ ವರದಿ ಮಾಡಿತ್ತು. ರಸ್ತೆ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಹಲವು ತೊಂದರೆಗಳಿಂದ ಆತಂಕದಲ್ಲಿರುವ ಅಲೆಮಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ ಕನ್ನಡಪ್ರಭ ಸುದ್ದಿಯ ಪರಿಣಾಮವಾಗಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡ ಶೀಘ್ರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದ್ದರು.ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ, ಹಾಗೂ ರಸ್ತೆ, ವಿದ್ಯುತ್ ವ್ಯವಸ್ಥೆಯನ್ನು ಒದಗಿಸುವುದಾಗಿ ಪ್ರಕಟಿಸಿದ್ದರು. ಅಲ್ಲದೆ ಸಧ್ಯ ಮಳೆಗಾಲ ಇರುವುದರಿಂದ ತಾತ್ಕಾಲಿಕವಾಗಿ ಗುಡಿಸಲುಗಳನ್ನು ರಕ್ಷಿಸಿಕೊಳ್ಳಲು ಎಲ್ಲ ಮನೆಗಳಿಗೆ ತಾಡಪತ್ರಿಗಳನ್ನು ಒದಗಿಸುವ ಭರವಸೆಯನ್ನು ನೀಡಿದ್ದರು. ಅದರಂತೆ ಇಲ್ಲಿನ 32 ಕುಟುಂಬಗಳಿಗೆ 38 ತಾಡಪತ್ರಿಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅಲೆಮಾರಿ ಸಮುದಾಯದ ಮುಖಂಡ ಸೋಮಣ್ಣ ಕೂಡ್ಲಿಗಿ, ಸಮಾಜ ಕಲ್ಯಾಣ ಇಲಾಖೆ ಮೂಲಕ ತಾಡಪತ್ರಿಗಳು ತಲುಪಿವೆ. ಮಳೆಗಾಲ ಆರಂಭವಾಗಿದ್ದರಿಂದ ಈ ಸಂದರ್ಭದಲ್ಲಿ ನಮಗೆ ಅನುಕೂಲವಾಗಿದೆ ಎಂದರು.ತಾಡಪತ್ರಿಗಳನ್ನು ವಿತರಿಸಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗಂಗಾ ಹಿರೇಮಠ, ಅಲೆಮಾರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೆಶಕರು ಕಳಿಸಿದ 38 ತಾಡಪತ್ರಿಗಳನ್ನು ಗುಡಿಸಲಿನಲ್ಲಿ ವಾಸಿಸುತ್ತಿರುವ ಅಲೆಮಾರಿ ಸಮುದಾಯಕ್ಕೆ ವಿತರಿಸಲಾಗಿದೆ ಎಂದರು.