ಕನ್ನಡಪ್ರಭ ವಾರ್ತೆ ಮಂಡ್ಯ
ಸೋಮವಾರ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ನಾನೂ ವಿಜ್ಞಾನಿ ಕಾರ್ಯಕ್ರಮದಲ್ಲಿ ಟೆಲಿಸ್ಕೋಪ್ ತಯಾರಿಸಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಗೆ ಸೇರಿದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು. ವಿಜ್ಞಾನದತ್ತ ಮಕ್ಕಳು ಆಕರ್ಷಿತರಾದಾಗ ಮೂಢನಂಬಿಕೆಗಳನ್ನು ಸಂಪೂರ್ಣವಾಗಿ ತೊಲಗಿಸಲು ಸಾಧ್ಯವಾಗಲಿದೆ ಎಂದರು.
ಮೌಢ್ಯತೆಗೆ ಮತ್ತು ಭಾನುಮತಿ, ವಾಮಾಚಾರ ಅತಿ ಹೆಚ್ಚಾಗಿ ನಡೆಯುವ ಹಿಂದುಳಿದ ಜಿಲ್ಲೆ ಯಾದಗಿರಿಯಲ್ಲಿ ಡಿಸೆಂಬರ್ ೨೮, ೨೯, ೩೦ರಂದು ವೈಜ್ಞಾನಿಕ ಸಮ್ಮೇಳನ ಆಯೋಜನೆಗೊಂಡಿದೆ. ದೇಶ ಮತ್ತು ವಿದೇಶದ ವಿಜ್ಞಾನ ಸಂಸ್ಥೆಗಳ ವಿಜ್ಞಾನಿಗಳು ಭಾಗವಹಿಸಲಿದ್ದಾರೆ. ಪ್ರದರ್ಶನವೂ ಕೂಡ ನಡೆಯಲಿದೆ, ೪೦,೦೦೦ ವಿದ್ಯಾರ್ಥಿಗಳು ಮತ್ತು ನಾಗರಿಕರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.ರಾಜ್ಯದ ೧೬೩ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಒಂಬತ್ತು ದಿನಗಳ ಟೆಲಿಸ್ಕೋಪ್ ತಯಾರಿಕಾ ತರಬೇತಿ ನೀಡಿರುವುದು ಶ್ಲಾಘನೀಯ. ಇದಕ್ಕೆ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಘಟಕದ ಎಲ್ಲರ ಶ್ರಮವಿದೆ. ಮಕ್ಕಳು ಟೆಲಿಸ್ಕೋಪ್ ತಯಾರಿಕಾ ತರಬೇತಿಯಲ್ಲಿ ಪರಿಶ್ರಮ ಪಟ್ಟು ಟೆಲಿಸ್ಕೋಪ್ ನಿರ್ಮಾಣ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಜೀವನದಲ್ಲಿ ಯಾವುದೇ ಕಾರ್ಯದಲ್ಲಿ ಯಶಸ್ಸು ಕಾಣಬೇಕಾದರೆ ಅದಕ್ಕೆ ತಕ್ಕಂತೆ ಆಸಕ್ತಿ ಮತ್ತು ಶ್ರಮ ಇರಬೇಕು. ಮಕ್ಕಳ ಸಾಧನೆ ಅಮೋಘ. ಅವರ ಸಾಧನೆಗೆ ಸರ್ಕಾರದ ಪ್ರೋತ್ಸಾಹ ನಿರಂತರವಾಗಿರುತ್ತದೆ. ವಿದ್ಯಾರ್ಥಿಗಳು ಇದೇ ರೀತಿ ಹೊಸ ಹೊಸ ಆವಿಷ್ಕಾರಗಳೊಂದಿಗೆ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಆಶಿಸಿದರು.
ಟೆಲಿಸ್ಕೋಪ್ ತಯಾರಿಸಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಸೇರಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಜಿಲ್ಲಾಧಿಕಾರಿ ಡಾ ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಮುಡಾ ಅಧ್ಯಕ್ಷ ನಯೀಂ, ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷ ಸಿ.ಶಿವಲಿಂಗಯ್ಯ, ಮಾರ್ಗದರ್ಶಕಿ ಸುನಂದಾ, ಗೌರವಾಧ್ಯಕ್ಷ ಎಂ.ಸಿ.ಬಸವರಾಜು, ರಾಜ್ಯ ಸಮಿತಿ ನಿರ್ದೇಶಕಿ ಪುಷ್ಪಲತಾ, ಉಪಾಧ್ಯಕ್ಷೆ ವಸಂತಮ್ಮ, ಪ್ರಧಾನ ಕಾರ್ಯದರ್ಶಿ ಕೆಂಪರಾಜು, ಸಹಕಾರ್ಯದರ್ಶಿ ಎಂ.ವಿನಯ್ಕುಮಾರ್, ಎಂ.ಸಿ ಲಂಕೇಶ್, ಅನುಪಮಾ, ದೇವರಾಜ್ ಕೊಪ್ಪ ಇತರರಿದ್ದರು.