ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಗ್ರಾಮ ಹಾಗೂ ಸುತ್ತಮುತ್ತ ಬೆಳೆಯುವ ಹಲಸು ತನ್ನ ಬಣ್ಣ, ಸುವಾಸನೆ ಮತ್ತು ರುಚಿಯಿಂದ ವಿಶೇಷವಾಗಿದ್ದು, ಈಗ ಈ ಭಾಗದ ಎಂಟು ತಳಿಗಳಿಗೆ ರಾಷ್ಟ್ರಮಟ್ಟದಲ್ಲಿ ಪೇಟೆಂಟ್ ದೊರೆತಿದೆ.
ಈ ನಿಟ್ಟಿನಲ್ಲಿ ತೂಬಗೆರೆ ಹಲಸು ಬೆಳೆಗಾರರ ಸಂಘ, ಜಿಲ್ಲಾ ತೋಟಗಾರಿಕೆ ಇಲಾಖೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಬುಧವಾರ "ಹಕ್ಕು ಸ್ವಾಮ್ಯ ಪ್ರಮಾಣಪತ್ರ ವಿತರಣೆ ಮತ್ತು ಕೃಷಿ - ವಿಜ್ಞಾನಿಗಳೊಂದಿಗೆ ಸಂವಾದ " ಕಾರ್ಯಕ್ರಮ ನಡೆಯಿತು.ಕೇಂದ್ರ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಬರುವ ‘ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಪ್ರಾಧಿಕಾರ’ (ಪಿಪಿಎಫ್ಆರ್ಎ) ದಿಂದ ತೂಬಗೆರೆ ಸುತ್ತಮುತ್ತಲಿನ ಎಂಟು ಹಲಸು ತಳಿಗಳಿಗೆ, ಹಲಸಿನ ಹಣ್ಣಿನಲ್ಲೇ ಉತ್ಕೃಷ್ಟ ಎಂದು ಗುರುತಿಸಿರುವ ಹಕ್ಕು ಸ್ವಾಮ್ಯ (ಪೇಟೆಂಟ್) ಪ್ರಮಾಣ ಪತ್ರವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ನಾರಾಯಣಗೌಡ ವಿತರಿಸಿ ಮಾತನಾಡಿದರು.
ಹಲಸಿನ ಹಣ್ಣಿನ ಬಗ್ಗೆ ಕೆಲವು ವರ್ಷಗಳಿಂದ ಸಂಶೋಧನೆಗಳು ನಡೆಯುತ್ತಿವೆ. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ ಹಲಸಿನ ಹಣ್ಣುಗಳಲ್ಲಿರುವ ಔಷಧೀಯ ಗುಣ, ಹಲಸಿನ ಹಣ್ಣಿನ ವಿವಿಧ ಉತ್ಪನ್ನಗಳನ್ನು ತಯಾರಿಸುವ ಸಂಬಂಧ ಸಂಶೋಧನೆ ಮಾಡುತ್ತಿದೆ. ಸ್ಥಳೀಯವಾಗಿ ಹಲಸಿನ ಹಣ್ಣು ಮೌಲ್ಯವರ್ಧನೆ, ಉತ್ಪನ್ನಗಳ ಕುರಿತ ಅರಿವಿಗೆ ಮೂಡಿಸುತ್ತಿದೆ. ಹಲಸಿನ ಹಣ್ಣಿನಲ್ಲಿ ವಿಟಮಿನ್ ಅಂಶಗಳಾದ, ಖನಿಜಾಂಶಗಳು, ಕಾರ್ಬೋಹೈಡ್ರೇಟ್ ಅಂಶಗಳು, ಎಲೆಕ್ಟ್ರೋಲೈಟ್ ಅಂಶಗಳು, ಪೊಟಾಷ್ಯಿಯಂ ಹಾಗೂ ನಾರಿನಾಂಶಗಳು ಯಥೇಚ್ಛವಾಗಿ ಸಿಗುವುದರಿಂದ, ಇದೊಂದು ಆರೋಗ್ಯಕಾರಿ ಹಣ್ಣು ಎನ್ನುವು ದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಈಗ ಪೇಟೆಂಟ್ ಪಡೆದ ರೈತರು ತಮ್ಮ ತಳಿಗಳನ್ನು ಜವಾಬ್ದಾರಿಯಿಂದ ಸಂರಕ್ಷಿಸಬೇಕು ಎಂದರು.ಮಾರುಕಟ್ಟೆ ವಿಸ್ತರಣೆಗೆ ಆದ್ಯತೆ:
ತೂಬಗೆರೆ ಹಲಸು ಬೆಳೆಗಾರರ ಸಂಘದ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ತೂಬಗೆರೆ ಸೇರಿದಂತೆ ತಾಲೂಕಿನಲ್ಲಿ 1 ಸಾವಿರ ಟನ್ ಹಲಸು ವಹಿವಾಟು ಆಗಿದೆ. ಯಾವುದೇ ರಸ್ತೆ ಪಕ್ಕ ನೋಡಿದರೂ ಹಲಸು ಕಾಣುತ್ತದೆ. ಬೆಂಗಳೂರು ಅಥವಾ ದೇವನಹಳ್ಳಿ ವಿಮಾನ ನಿಲ್ದಾಣ ಸಮೀಪ ಎಲ್ಲಾ ಸೌಲಭ್ಯ ಒಳಗೊಂಡಂತೆ ಹಲಸು ಮಾರುಕಟ್ಟೆ ವ್ಯವಸ್ಥೆ ಮಾಡಿದರೆ ಅನುಕೂಲವಾಗಲಿದೆ ಎಂದರು.ಪೇಟೆಂಟ್ ಪಡೆದ ರೈತ:
ಪಿಪಿಎಫ್ಆರ್ಎ ಪೇಟೆಂಟ್ ಪಡೆದ ಹಲಸು ಬೆಳೆಗಾರ ಕೃಷ್ಣಪ್ಪ ಮಾತನಾಡಿ, ನಮ್ಮ ಹೊಲದ ಹಲಸಿನ ಹಣ್ಣಿಗೆ ರಾಷ್ಟ್ರ ಮಟ್ಟದ ಮಾನ್ಯತೆ ನೀಡಿರುವುದು ಸಂತಸ ತಂದಿದೆ. ಮುಂದಿನ 20 ವರ್ಷ ಈ ಹಣ್ಣಿನ ತಳಿಯನ್ನು ಬೇರೆ ಯಾರೂ ಬೆಳೆಸಲು ಅವಕಾಶ ಸಿಗುವುದಿಲ್ಲ. ಹಣ್ಣಿನ ಮಾಲೀಕರು ಅನುಮತಿ ನೀಡಿದವರು ಮಾತ್ರ ಸಸಿಗಳನ್ನು ಬೆಳೆಸಿ, ಮಾರಾಟ ಮಾಡಲು ಅವಕಾಶವಿದೆ ಎಂದರು.ಮೌಲ್ಯವರ್ಧಿತ ಪದಾರ್ಥಗಳು:
ರೈತರಿಗಾಗಿ ‘ಹಲಸಿನ ಸಾಗುವಳಿ ಮತ್ತು ಮಾರುಕಟ್ಟೆ’ ಹಲಸಿನ ಮೌಲ್ಯವರ್ಧಿತ ಪದಾರ್ಥಗಳು ಮತ್ತು ಹಲಸು ಹಚ್ಚುವ ಯಂತ್ರದ ಕುರಿತು ಜಿಕೆವಿಕೆ ವಿಜ್ಞಾನಿ ಡಾ ಶಾಮಲ ಮಾಹಿತಿ ನೀಡಿದರು. ಹಲಸಿನ ಹಣ್ಣಿನಿಂದ ತಯಾರಿಸಿದ ಹಪ್ಪಳ, ಚಿಪ್ಸ್, ನಂತಹ ಉತ್ಪನ್ನಗಳ ಪ್ರದರ್ಶನ ಸಹ ನಡೆಯಿತು.ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಎಸ್.ಜೆ.ಸಿ.ಆರ್ ಶಾಲೆಯ ರಂಜಿತಾಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕೆವಿಕೆ ಮುಖ್ಯಸ್ಥ ಡಾ.ಹನುಮಂತರಾಯ, ಪ್ರಾಧ್ಯಾಪಕರಾದ ಡಾ. ಬಾಬು ರೈ, ಡಾ. ಸವಿತಾ, ಜಿಪಂ ಮಾಜಿ ಸದಸ್ಯ ಅರವಿಂದ, ಗ್ರಾಪಂ ಅಧ್ಯಕ್ಷೆ ಮುನಿಲಕ್ಷ್ಮಮ್ಮ ರಾಮಕೃಷ್ಣ, ಸದಸ್ಯ ಕೃಷ್ಣಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಎ.ನಾಗರಾಜು, ತೆಂಗು ನಾರು ಮಂಡಳಿ ಅಧ್ಯಕ್ಷ ವೆಂಕಟೇಶ್ ಬಾಬು, ತೂಬಗೆರೆ ಹಲಸು ಬೆಳೆಗಾರರ ಸಂಘದ ಅಧ್ಯಕ್ಷ ಸುರೇಶ್, ವಕೀಲ ಪ್ರತಾಪ್, ವೆಂಕಟೇಶ್, ಕನಕದಾಸ, ರವಿಸಿದ್ದಪ್ಪ, ಉದಯ ಆರಾಧ್ಯ, ವಾಸು, ರಂಗಪ್ಪ, ಶ್ರೀಧರ ಮತ್ತಿತರರು ಉಪಸ್ಥಿತರಿದ್ದರು.14ಕೆಡಿಬಿಪಿ1-
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಕ್ಕುಸ್ವಾಮ್ಯ ಪಡೆದಿರುವ ಹಲಸು ತಳಿಯನ್ನು ವಿಶ್ರಾಂತ ಕುಲಪತಿ ಡಾ.ನಾರಾಯಣಗೌಡ ಪ್ರದರ್ಶಿಸಿದರು.14ಕೆಡಿಬಿಪಿ2-
ತೂಬಗೆರೆಯ ವಿಶಿಷ್ಟ ಬಣ್ಣ, ಸ್ವಾದದ ಹಲಸು ತಳಿ.