ತುಳಸಿ ಲಗ್ನ ಅಂಗವಾಗಿ ಶನಿವಾರ ಬೆಳಗ್ಗೆಯಿಂದ ನಗರದ ಮೈಲಾರ ಮಹದೇವಪ್ಪ ವೃತ್ತ, ನಗರಸಭೆ ಮುಂಭಾಗ, ಎಂ.ಜಿ ವೃತ್ತ, ಎಲ್ಬಿಎಸ್ ಮಾರುಕಟ್ಟೆ, ಜೆ.ಪಿ ವೃತ್ತ, ಕಲ್ಲು ಮಂಟಪ ರಸ್ತೆ, ಹಳೇ ಕೋರ್ಟ್ ಮುಂಭಾಗ ಸೇರಿದಂತೆ ವಿವಿಧೆಡೆ ಹುಣಸೆಕಾಯಿ, ಬೆಟ್ಟದ ನೆಲ್ಲಿಕಾಯಿ, ಹೂವು, ಹಣ್ಣು, ಬಾಳೆ ದಿಂಡು, ಕಬ್ಬು, ಜೋಳದ ದಂಟು ಸೇರಿದಂತೆ ಪೂಜಾ ಸಾಮಗ್ರಿಗಳ ವ್ಯಾಪಾರ ವಹಿವಾಟು ಜೋರಾಗಿಯೇ ನಡೆದಿತ್ತು. ಭಾನುವಾರ ಬೆಳಗ್ಗೆ ಮನೆಯ ಮುಂಭಾಗದಲ್ಲಿರುವ ತುಳಸಿ ಕಟ್ಟೆ ಸುತ್ತಲೂ ಸ್ವಚ್ಛಗೊಳಿಸಿ, ಬಣ್ಣ ಬಣ್ಣದ ರಂಗೋಲಿ ಚಿತ್ತಾರವನ್ನು ಬಿಡಿಸಲಾಗಿತ್ತು. ತುಳಸಿ ಕಟ್ಟೆಯನ್ನು ಜೋಳದ ದಂಟು, ಹೂವಿನ ಮಾಲೆ, ಬಳೂಲಟೊಂಗೆ, ಹಾಗೂ ವಿದ್ಯುದ್ದೀಪಾಲಂಕಾರದಿಂದ ನವವಧುವಾಗಿ ಶೃಂಗರಿಸಲಾಗಿತ್ತು. ತುಳಸಿಗಿಡದ ಪಕ್ಕದಲ್ಲಿ ಬೆಟ್ಟದ ನೆಲ್ಲಿಕಾಯಿ ಗಿಡವನ್ನು ನೆಟ್ಟು ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಮುತ್ತೈದೆಯರಿಂದ ಆರತಿ ಬೆಳಗಿಸಲಾಯಿತು. ಸಿಹಿ ತಿಂಡಿ ತಯಾರಿಸಿ ನೈವೇದ್ಯ ಮಾಡಿ, ಮದುವೆ ಮಂತ್ರಗಳನ್ನು ಹೇಳಿ ಮಾಲೆ ಹಾಕಿ ಸಂಭ್ರಮದಿಂದ ಕುಟುಂಬಸ್ಥರೆಲ್ಲ್ಲ ಸೇರಿ ಶ್ರೀಮನ್ನಾರಾಯಣನೊಂದಿಗೆ ವಿವಾಹ ಕಾರ್ಯವನ್ನು ನೆರವೇರಿಸಿದರು. ಬಳಿಕ ನೆರೆ ಹೊರೆಯ ಮುತ್ತೈದೆಯರನ್ನು ಕುಂಕುಮಕ್ಕೆ ಆಹ್ವಾನಿಸಿ, ಉಡಿ ತುಂಬಿ ಬಿಳ್ಕೋಟ್ಟರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.